ಲಿಂಗಾಯತರು ಒಟ್ಟಾಗಿ ಕೇಂದ್ರದಲ್ಲಿ ಒಬಿಸಿ ಕೇಳಬೇಕು: ಬಿ.ಸಿ.ಪಾಟೀಲ್
Team Udayavani, Sep 16, 2022, 8:26 PM IST
ಚಿತ್ರದುರ್ಗ: ಪಂಚಮಸಾಲಿ ಲಿಂಗಾಯತರು 2ಎ ಮೀಸಲಾತಿ ಕೇಳುವುದಕ್ಕಿಂತ, ಎಲ್ಲ ಲಿಂಗಾಯತರು ಒಟ್ಟಾಗಿ ಕೇಂದ್ರದಲ್ಲಿ ಒಬಿಸಿ ಮೀಸಲು ಪಡೆಯಲು ಹೋರಾಟ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಇದನ್ನೂ ಓದಿ:ಬಾಡಿದ ಹೂವುಗಳಿಗೆ, ಜೀವ ತುಂಬುವ ರೂಪಾ | ಕಸದ ಬುಟ್ಟಿ ಸೇರುವ ಎಲೆ ಹೂವುಗಳಿಗೆ ಹೊಸ ಸ್ಪರ್ಶ
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2ಎ ಮೀಸಲಾತಿಗೆ ಸಂಬಂಧಿಸಿ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷಗಳಲ್ಲೂ ಪಂಚಮಸಾಲಿ ಸಮುದಾಯದವರಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿ ಬಗೆಹರಿಸುತ್ತಾರೆ ಎಂದರು.
2ಎ ಮೀಸಲಾತಿಯನ್ನು ಎಲ್ಲರೂ ಕೇಳುತ್ತಾರೆ. ಇದಕ್ಕಿಂತ ಕೇಂದ್ರದ ಒಬಿಸಿ ಮೀಸಲು ಪಡೆಯುವುದು ಉತ್ತಮ. ಈ ವಿಚಾರವನ್ನು ನಾನು ಮುಖ್ಯಮಂತ್ರಿ ಬಳಿಯೂ ಚರ್ಚಿಸಿ ಮನವಿ ಮಾಡುತ್ತೇನೆ. ಭಾರತದಲ್ಲಿ ನಾವು ಅಲ್ಪಸಂಖ್ಯಾತರಾಗುತ್ತೇವೆ ಹಾಗಾಗಿ ಒಬಿಸಿ ಬೇಡಿಕೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಭಾರತ್ ತೋಡೋ ಯಾತ್ರೆ
ಕಾಂಗ್ರೆಸ್ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆ ಅಲ್ಲ, ಭಾರತ್ ತೋಡೋ ಯಾತ್ರೆ. ಭಾರತದ ನೆಲ ವಿಷ ಎಂದು ಹೇಳಿದ ಕ್ರೈಸ್ತ ಪಾದ್ರಿಯ ಮನೆಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ ಎಂದರೆ ಅವರಿಗೆ ಈ ದೇಶದ ಬಗ್ಗೆ ಎಷ್ಟರಮಟ್ಟಿಗೆ ಪ್ರೀತಿ ಇದೆ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ ಇಂತಹ ಚಿಲ್ಲರೆ ರಾಜಕಾರಣಕ್ಕೆ ಕೈ ಹಾಕುವುದಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ನೋಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ತನಿಖೆ ನಡೆಯುತ್ತಿದೆ. ಆನಂತರ ಸತ್ಯಾಸತ್ಯತೆ ಹೊರಬರುತ್ತದೆ. ಭ್ರಷ್ಟ ಆಗಿದ್ದರೆ ಕ್ರಮ, ಇಲ್ಲದಿದ್ದರೆ ಬಿಡುಗಡೆ ಆಗುತ್ತಾರೆ ಎಂದರು.
8 ಮಂದಿ ರಾಜಿನಾಮೆ ನೀಡಿದರೆ ಸರ್ಕಾರ ಬೀಳುತ್ತದೆ ಎನ್ನುವ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ಮಾತು. ಯಾವ ಶಾಸಕರೂ ರಾಜಿನಾಮೆ ಕೊಡುವ ಸ್ಥಿತಿಯಲ್ಲಿಲ್ಲ. ನಾವು ಚುನಾವಣೆ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದರು.