ಶ್ರದ್ಧಾ ಮಾದರಿ ಎರಡು ಪ್ರತ್ಯೇಕ ಪ್ರಕರಣ ಬಹಿರಂಗ
ಜಾರ್ಖಂಡ್ನಲ್ಲಿ 2ನೇ ಪತ್ನಿ, ಜೈಪುರದಲ್ಲಿ ದೊಡ್ಡಮ್ಮನ ಕೊಲೆಗೈದು, ತುಂಡರಿಸಿದ ಆರೋಪಿಗಳು
Team Udayavani, Dec 19, 2022, 7:35 AM IST
ಜೈಪುರ/ರಾಂಚಿ: ದೇಶದಲ್ಲೆಡೆ ಆಕ್ರೋಶಕ್ಕೆ ಕಾರಣವಾದ ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಮಾದರಿಯಲ್ಲೇ ಮತ್ತೆರಡು ಪ್ರಕರಣಗಳು ಬಹಿರಂಗಗೊಂಡಿವೆ.
ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ವ್ಯಕ್ತಿಯೊಬ್ಬ ತನ್ನ 2ನೇ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು 55 ಭಾಗಗಳಾಗಿ ಕತ್ತರಿಸಿ, ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ. ನಾಯಿಗಳು ಮಾಂಸದ ತುಂಡುಗಳನ್ನು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ನಂತರ, ದೇಹದ ಭಾಗಗಳು ರಬಿತಾ ಪಹಾಡಿನ್(22) ಅವರದ್ದು ಎಂಬುದು ತಿಳಿದುಬಂದಿದೆ. ಪೊಲೀಸರು ಆಕೆಯ ಪತಿ ದಿಲ್ದಾರ್ ಅನ್ಸಾರಿ(28)ಯನ್ನು ಬಂಧಿಸಿದ್ದಾರೆ. ರಬಿತಾಳನ್ನು ಅನ್ಸಾರಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಹಲವೆಡೆ ಎಸೆದಿದ್ದು, ದೇಹದ 18 ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಮ್ಮನ ಹತ್ಯೆ:
ರಾಜಸ್ಥಾನದ ಜೈಪುರದಲ್ಲಿ ವ್ಯಕ್ತಿಯೊಬ್ಬ ತನ್ನ ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು 10 ಭಾಗಗಳಾಗಿ ಕತ್ತರಿಸಿ ಬಕೆಟ್ನಲ್ಲಿ ತೆಗೆದುಕೊಂಡು ಹೋಗಿ ಸಮೀಪದ ದೆಹಲಿ ಹೆದ್ದಾರಿಯ ವಿವಿಧೆಡೆ ಎಸೆದಿದ್ದಾನೆ. ಸರೋಜ್ ಶರ್ಮಾ(64) ಮೃತ ಮಹಿಳೆ. ಪ್ರಕರಣ ಸಂಬಂಧ ಅಂಜು ಶರ್ಮಾ(32)ನನ್ನು ಬಂಧಿಸಲಾಗಿದೆ.
ತಂದೆ, ಸಹೋದರಿ ಮತ್ತು ದೊಡ್ಡಮ್ಮ ಸರೋಜ್ ಅವರೊಂದಿಗೆ ಅಂಜು ಶರ್ಮಾ ವಾಸಿಸುತ್ತಿದ್ದ. ಡಿ.11ರಂದು ತಂದೆ, ಸಹೋದರಿ ಇಂದೋರ್ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಂಜು ಶರ್ಮಾ ದೆಹಲಿಗೆ ಹೋಗಲು ಬಯಸಿದ್ದ. ಇದಕ್ಕೆ ದೊಡ್ಡಮ್ಮ ನಿರಾಕರಿಸಿದ್ದರು. ಈ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಕ್ರೋಧಗೊಂಡ ಅಂಜು ಶರ್ಮಾ, ಸುತ್ತಿಗೆಯಿಂದ ದೊಡ್ಡಮ್ಮನ ತಲೆಗೆ ಹೊಡೆದು ಕೊಂದಿದ್ದಾನೆ.ಬಳಿಕ ದೇಹವನ್ನು ಮಾರ್ಬಲ್ ಕತ್ತರಿಸುವ ಯಂತ್ರ ಬಳಸಿ, ಹತ್ತು ತುಂಡುಗಳಾಗಿ ಕತ್ತರಿಸಿದ್ದಾನೆ. ಸೂಟ್ಕೇಸ್ ಮತ್ತು ಬಕೆಟ್ನಲ್ಲಿ ಅವುಗಳನ್ನು ತುಂಬಿಕೊಂಡು ವಿವಿಧೆಡೆ ಎಸೆದಿದ್ದಾನೆ.