ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ನೆಪದಲ್ಲಿ 2.50 ಲ.ರೂ. ವಂಚನೆ
Team Udayavani, Apr 29, 2023, 5:30 AM IST
ಮಂಗಳೂರು: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಬಗ್ಗೆ ಸಂದೇಶ ಕಳುಹಿಸಿ 2.50 ಲ.ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಫೆ.4ರಂದು ಸಂಜೆ 9827709747 ಸಂಖ್ಯೆಯಿಂದ “ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಆಗದೆ ಇರುವುದರಿಂದ ಖಾತೆ ಸ್ಥಗಿತಗೊಳ್ಳಲಿದೆ. ಕೂಡಲೇ ಕಸ್ಟಮರ್ ಕೇರ್ ಸಂಖ್ಯೆ 9003430354 ನ್ನು ಸಂಪರ್ಕಿಸಬೇಕು” ಎಂಬ ಸಂದೇಶ ಬಂದಿತ್ತು. ದೂರುದಾರ ವ್ಯಕ್ತಿ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸವನ್ನು ಆತನೇ ತಿಳಿಸಿದ. ಇದರಿಂದಾಗಿ ಆತ ಬ್ಯಾಂಕ್ ಅಧಿಕಾರಿಯಾಗಿರಬಹುದು ಎಂದು ದೂರುದಾರ ವ್ಯಕ್ತಿ ನಂಬಿದರು. ಅಪರಿಚಿತ ವ್ಯಕ್ತಿ ಕೆವೈಸಿ ಅಪ್ಡೇಟ್ ಮಾಡುವ ಬಗ್ಗೆ ಮೊಬೈಲ್ಗೆ ಬರುವ ಒಟಿಪಿಯನ್ನು ತಿಳಿಸುವಂತೆ ಸೂಚಿಸಿದ. ಅದರಂತೆ ದೂರುದಾರ ವ್ಯಕ್ತಿ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ನೀಡಿದರು. ಅನಂತರ ಮೊಬೈಲ್ ಪರಿಶೀಲಿಸಿದಾಗ ದೂರುದಾರ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ 2.50 ಲ.ರೂ. ಕಡಿತಗೊಂಡಿರುವುದು ಗೊತ್ತಾಗಿದೆ.