Police: ಮಟ್ಕಾ ಅಡ್ಡೆಗೆ ದಾಳಿ: 10 ಸಾವಿರ ನಗದು ವಶ
Team Udayavani, Sep 8, 2023, 11:31 PM IST
ಪಡುಬಿದ್ರಿ: ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜಾರಕಟ್ಟೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ಪಡುಬಿದ್ರಿ ಪೊಲೀಸ್ ಠಾಣೆ ಕ್ರೈಂ ಎಸ್ಸೈ ಸುದರ್ಶನ್ ದೊಡಮನಿ ಅವರ ತಂಡ ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು 10 ಸಾವಿರ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಪನಿರೀಕ್ಷಕ ಸುದರ್ಶನ್ ಅವರು ರೌಂಡ್ಸ್ ನಲ್ಲಿದ್ದಾಗ ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜಾರಕಟ್ಟೆ ರಾಧಾಕೃಷ್ಣ ಅವರ ಗೂಡಂಗಡಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿಗೆ ವ್ಯಕ್ತಿಯೊಬ್ಬ ಹಣ ಸಂಗ್ರಹಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ಮಾಡಿದಾಗ ಅಲ್ಲಿ ಸೇರಿದ್ದ ಜನರು ಓಡಿ ಪರಾರಿಯಾಗಿದ್ದು, ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ಎಲ್ಲೂರು ಗ್ರಾಮದ ಪಿಲಾರಿನ ರವಿ ಶೆಟ್ಟಿ (56)ಯನ್ನು ಬಂಧಿಸಿದ್ದಾರೆ. ಆತನಿಂದ ಸಂಗ್ರಹಿಸಿದ 10,010 ರೂಪಾಯಿ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬುಕ್ಕಿಗೆ ಹಣ ರವಾನೆ
ಆರೋಪಿಯು ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ವನ್ನು ಮಟ್ಕಾ ಬುಕ್ಕಿ ಕಿಶೋರ್ ಶೆಟ್ಟಿ (43) ಎಂಬಾತನಿಗೆ ನೀಡುತ್ತಿರು ವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.