Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
ರಾಜ್ಯದ ಹಂತ 1: 14 ಕ್ಷೇತ್ರಗಳಿಗೆ ಮತದಾನ, 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Team Udayavani, Apr 26, 2024, 6:55 AM IST
ಬೆಂಗಳೂರು: ಹದಿನೇಳನೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆಯ ಲಿದೆ. ಒಟ್ಟು 2.88 ಕೋಟಿ ಮತದಾರರು ಐವರು ಹಾಲಿ ಸಂಸದರ ಸಹಿತ 247 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ರಾಜ್ಯದೆಲ್ಲೆಡೆ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ ಮೇಳೈಸಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಚುನಾವಣ ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಿ ಮತದಾನ ಮಾಡಲು ಅವಕಾಶ ಇದೆ.
ಬಿಜೆಪಿ-ಜೆಡಿಎಸ್ ಮೈತ್ರಿ, ಕಾಂಗ್ರೆಸ್ ಏಕಾಂಗಿ ಹೋರಾಟ
ಕಳೆದ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ನ ಡಿ.ಕೆ. ಸುರೇಶ್ ಮತ್ತು ಹಾಸನದಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು. ಕಳೆದ ಬಾರಿ ಕಾಂಗ್ರೆಸ್ ಜತೆಗಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ.
ನೀವು ಗಮನಿಸಬೇಕಾದದ್ದು
ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಾನೂನುಸ್ನೇಹಿಯಾಗಿ ವರ್ತಿಸಬೇಕಾಗುತ್ತದೆ.
ಈ ದಿನ ಮದ್ಯ ಮಾರಾಟ, ಮತ ಯಾಚನೆ ನಿಷಿದ್ಧ. ಈ ವಿಚಾರದಲ್ಲಿ ತಪ್ಪಾಗದಂತೆ ನಡೆದುಕೊಳ್ಳುವುದು ಅನಿವಾರ್ಯ.
ಮತದಾರರು ಮತಗಟ್ಟೆಗೆ ತಪ್ಪದೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.
ಮೊಬೈಲ್ ಸಹಿತ ನಿಷೇಧಿತ ವಸ್ತುಗಳನ್ನು ಮತಗಟ್ಟೆಯೊಳಕ್ಕೆ ಕೊಂಡೊಯ್ಯಬಾರದು.
ಬಿಸಿಲು ಹೆಚ್ಚಿದ್ದು, ಬೆಳಗ್ಗೆ, ಸಂಜೆ ಮತ ಚಲಾಯಿಸುವುದು ಉತ್ತಮ.
ದೀರ್ಘ ಸರತಿ ಸಾಲನ್ನು ತಪ್ಪಿಸಲು ಚುನಾವಣ ಆ್ಯಪ್ ಪರಿಶೀಲಿಸಿ ಮತಗಟ್ಟೆಗೆ ತೆರಳಬಹುದು.
ಸಂಜೆ 6ರೊಳಗೆ ಮತ ಚಲಾಯಿಸಬೇಕು, ತಡವಾಗಿ ಹೋಗಿ ಇಕ್ಕಟ್ಟಿಗೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಿ.
ಮತದಾನ ನಡೆಯುವ ಕ್ಷೇತ್ರಗಳು
ದಕ್ಷಿಣ ಕನ್ನಡ,ಉಡುಪಿ-ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ,ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ.