ಪಾಕಿಸ್ಥಾನ ಮೊದಲು ತನ್ನ ದೇಶದಲ್ಲಿ ಜನಮತಗಣನೆ ನಡೆಸಲಿ: ರಾಜನಾಥ್
Team Udayavani, Feb 6, 2017, 11:13 AM IST
ಹರಿದ್ವಾರ : ಭಾರತದ ಆಡಳಿತೆಯಲ್ಲಿರುವ ಕಾಶ್ಮೀರದಲ್ಲಿ ಜನಮತ ಸಂಗ್ರಹ ನಡೆಯಬೇಕೆಂದು ಆಗ್ರಹಿಸುವ ಪಾಕಿಸ್ಥಾನ ಮೊತ್ತ ಮೊದಲಾಗಿ ತನ್ನ ದೇಶದಲ್ಲಿ ಜನಮತಗಣನೆ ನಡೆಸಿ ತನ್ನ ಜನರು ಪಾಕಿಸ್ಥಾನದಲ್ಲಿ ಉಳಿಯಲು ಬಯಸುತ್ತಾರೆಯೇ ಅಥವಾ ಭಾರತದೊಂದಿಗೆ ಸೇರಿಕೊಳ್ಳಲು ಬಯಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಟಾಂಗ್ ನೀಡಿದ್ದಾರೆ.
ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿದ್ದು ಮುಂದೆಯೇ ಅದು ಭಾರತದ ಭಾಗವಾಗಿಯೇ ಉಳಿಯುತ್ತದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದರು. ಹರಿದ್ವಾರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ – ಪಾಕ್ ಸಂಬಂಧಗಳು ಹದಗೆಡಲು ಪಾಕಿಸ್ಥಾನವೇ ಕಾರಣ ಎಂದು ನೇರವಾಗಿ ಹೇಳಿದ ರಾಜನಾಥ್ ಸಿಂಗ್, “ಭಾರತ ಯಾವತ್ತೂ ಶಾಂತಿಯುತ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ಥಾನಕ್ಕೆ ಸ್ಪಷ್ಟಪಡಿಸಲು ನಾನು ಬಯಸುತ್ತೇನೆ; ಆದರೆ ಉಭಯ ದೇಶಗಳ ನಡುವಿನ ಸಂಬಂಧ ಹಾಳಾಗಲು ಇಸ್ಲಾಮಾಬಾದ್ ಕಾರಣವಾಗಿದೆ. ಪಾಕಿಸ್ಥಾನವನ್ನು ಉಗ್ರರನ್ನು ತಡೆಯಬೇಕು; ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು ಮತ್ತು ಕಾಶ್ಮೀರ ಕುರಿತಾದ ಜನಮತಗಣನೆ ಕೇಳುವುದನ್ನು ನಿಲ್ಲಿಸಬೇಕು’ ಎಂದು ರಾಜನಾಥ್ ಹೇಳಿದರು.