ವಿವಿಧ ಕ್ಷೇತ್ರಗಳಲ್ಲಿ ಭಕ್ತ ಸಂದಣಿ
Team Udayavani, May 2, 2017, 4:02 PM IST
ಉಡುಪಿ/ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಭಕ್ತ ಜನಸಂದಣಿ ದಾಖಲೆ ನಿರ್ಮಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ದರ್ಶನದ ಸರತಿ ಸಾಲು ನಿಯಂತ್ರಿಸಲು ಕಷ್ಟವಾಗುತ್ತಿದೆ. ಮೂರು ದಿನಗಳಿಂದ ರಜೆ ಇರುವುದು ಮತ್ತು ಶಾಲೆ – ಕಾಲೇಜುಗಳಿಗೆ ರಜೆ ಇರುವುದು ಇದಕ್ಕೆ ಮುಖ್ಯ ಕಾರಣ.
ಉಡುಪಿ: ದಾಖಲೆ ಸಪೊ¤àತ್ಸವ ಶ್ರೀಕೃಷ್ಣ ಮಠದಲ್ಲಿ ಶನಿವಾರ ಸುಮಾರು 20,000, ರವಿವಾರ ಸುಮಾರು 25,000, ಸೋಮವಾರ ಸುಮಾರು 15,000 ಜನರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಬಹುತೇಕ ಎಲ್ಲ ಛತ್ರಗಳು ಬುಕ್ಕಿಂಗ್ ಆಗುತ್ತಿವೆ. ಪ್ರಸ್ತುತ ಆರು ಸಪೊ¤àತ್ಸವಗಳು ನಡೆಯುತ್ತಿದ್ದು ಮುಂದಿನ ಸರದಿಯಲ್ಲಿಯೂ ಆರು ಸಪೊ¤àತ್ಸವಗಳಿವೆ. ಇತರ ರಥೋತ್ಸವ ಗಳು ಸೇರಿದರೆ 15-20 ಸಂಖ್ಯೆ ದಾಟುತ್ತಿದೆ.
ಸುಬ್ರಹ್ಮಣ್ಯ: ದಾಖಲೆ ತುಲಾಭಾರ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ದಾಖಲೆಯ 118 ತುಲಾಭಾರ ಸೇವೆಗಳು ನೆರವೇರಿವೆ. ಈ ಹಿಂದೆ 117 ಸೇವೆ ನೆರವೇರಿದ್ದು ದಾಖಲೆಯಾಗಿತ್ತು. 1,049 ಆಶ್ಲೇಷಾ ಬಲಿ ನೆರವೇರಿದೆ. ಉಳಿದಂತೆ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರಿವೆ. ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೋಜನ ಸ್ವೀಕರಿಸಿದರು. ರವಿವಾರವೂ ಇದೇ ರೀತಿ ಜನಸಂದಣಿ ಇತ್ತು. ಎಲ್ಲ ವಸತಿ ಗೃಹಗಳು, ಛತ್ರಗಳು ತುಂಬಿ ಹೋಗಿರುವುದರಿಂದ ಸುಳ್ಯ, ಪುತ್ತೂರು, ಉಪ್ಪಿನಂಗಡಿಗಳಿಗೆ ತೆರಳಿ ಸೋಮವಾರ ಕ್ಷೇತ್ರಕ್ಕೆ ಆಗಮಿಸಿದ್ದರು.
ಧರ್ಮಸ್ಥಳ: ಜನಸಂದಣಿ ಮುಂದುವರಿಕೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಜನಸಂದಣಿ ಸೋಮವಾರ ಮುಂದುವರಿದಿದೆ. ರವಿವಾರವೂ ಜನಜಂಗುಳಿ ಇತ್ತು. ರವಿವಾರ ಹತ್ತಾರು ವಿವಾಹಗಳು ನಡೆದಿವೆ. ಸೋಮವಾರ ಈ ಪ್ರಮಾಣ ಕಡಿಮೆ ಇತ್ತು. ಸೋಮವಾರ ಸುಮಾರು 80,000 ಜನ ಭೋಜನ ಸೇವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಕೊಲ್ಲೂರಿನಲ್ಲಿ ಜನಸಂದಣಿ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮೂರು ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ನಿತ್ಯವೂ ಸುಮಾರು 20,000 ಜನರು ಭೋಜನ ಸ್ವೀಕರಿಸಿದರು, ಸುಮಾರು 35,000 ಜನರು ದರ್ಶನ ಪಡೆದರು. ಸೋಮವಾರ ಸಂಜೆ ಸಂಖ್ಯೆ ಕಡಿಮೆಯಾಗಿದೆ.