ರೈತರ ಸಮಸ್ಯೆಯಲ್ಲಿ ರಾಜಕೀಯ ಬೇಡ


Team Udayavani, Jun 10, 2017, 1:55 AM IST

Venkaiah-Naidu-650.jpg

ದುರದೃಷ್ಟವಶಾತ್‌ ಪ್ರತಿಪಕ್ಷಗಳು ರೈತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ .ಕಾಂಗ್ರೆಸ್‌ ಉಪಾಧ್ಯಕ್ಷ ಮಾಂಡ್‌ಸೋರ್‌ಗೆ ಧಾವಿಸುವ ಅಗತ್ಯವೇನಿತ್ತು? ಇದು ತಮಗೆ ಫೂಟೋ ಅವಕಾಶ ಒದಗಿಸಿಕೊಡಬಹುದೆಂದು ಅವರು ಭಾವಿಸಿದಂತಿದೆ. ಅವರು ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದರು.

ಕಾಂಗ್ರೆಸ್‌ ಪಕ್ಷ ಕೆಸರಿನಲ್ಲಿ ಮೀನು ಹಿಡಿಯುವ ಅಥವಾ ಬೆಂಕಿಗೆ ತುಪ್ಪ ಸುರಿಯುವ ಮತ್ತು ಜನರಲ್ಲಿ ಅಶಾಂತಿ ಸೃಷ್ಟಿಸುವ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಮಧ್ಯಪ್ರದೇಶದ ಮಂಡ್‌ಸೋರ್‌ನಲ್ಲಿ ರೈತರ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಡೆದ ಗೋಲಿಬಾರಿಗೆ ಐವರು ಬಲಿಯಾದ ದುರದೃಷ್ಟಕರ ಘಟನೆಯನ್ನು ಕಾಂಗ್ರೆಸ್‌ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಹಿಂಸಾಚಾರ ಜನರ ಜೀವಹಾನಿಗೆ ಕಾರಣವಾಗಿರುವುದು ತೀವ್ರ ನೋವಿನ ಸಂಗತಿ. ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿವೆ. ಆದರೆ ಕಾಂಗ್ರೆಸ್‌ ಈ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದು, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾತ್ರ ರೈತ ಸಮುದಾಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬಂತೆ ಬಿಂಬಿಸುತ್ತಿದೆ.

ಸರಣಿ ಚುನಾವಣಾ ಸೋಲು ಅನುಭವಿಸುವುದರ ಜತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಭೂತಪೂರ್ವ ಜನಪ್ರಿಯತೆಯನ್ನು ಸಹಿಸಲಾಗದ ಕಾಂಗ್ರೆಸ್‌ ಮಂಡ್‌ಸೋರ್‌ ಘಟನೆಯ ದುರ್ಲಾಭ ಪಡೆದು ಬಿಜೆಪಿ ಹಾಗೂ ಎನ್‌ಡಿಎ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿರುವ ಮತ್ತು ಇಷ್ಟೂ ವರ್ಷಗಳ ಕಾಲ ರೈತರ ಕಲ್ಯಾಣ ಕಡೆಗಣಿಸಿರುವ ಕಾಂಗ್ರೆಸ್‌ಗೆ ರೈತರ ಸಂಕಷ್ಟ ಕುರಿತು ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕು ಇದೆಯೇ? ಸತತ ಎರಡು ಅವಧಿಯ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ರೈತರ ಸ್ಥಿತಿಗತಿ ತೀರ ಹದಗೆಟ್ಟಿತ್ತು. ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿಗೆಯಾಯಿತು ಹಾಗೂ ಕೃಷಿರಂಗದ ಬೆಳವಣಿಗೆ ದರ ಶೇಕಡ 2ಕ್ಕಿಂತ ಕೆಳಗೆ ಕುಸಿಯಿತು. ಎಲ್ಲ ರಾಜಕೀಯ ಪಕ್ಷಗಳು ಅಗ್ಗದ ರಾಜಕೀಯ ಲಾಭದ ಕಡೆಗೆ ನೋಡದೆ ಮಧ್ಯಪ್ರದೇಶದಲ್ಲಿ ಶಾಂತಿ ಮತ್ತು ಸಹಜಸ್ಥಿತಿ ಪುನರ್‌ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಹಾಗೂ ಕೇಂದ್ರಕ್ಕೆ ಬೆಂಬಲ ನೀಡಬೇಕಿದೆ. ಭಾವೋದ್ರೇಕವನ್ನು ಶಮನಗೊಳಿಸುವ ಬದಲು ರಾಜಕೀಯ ಪಕ್ಷಗಳು ಅದಕ್ಕೆ ವಿರುದ್ಧವಾದುದನ್ನು ಮಾಡುತ್ತಿವೆ.

ಕಾಂಗ್ರೆಸ್‌ ಉಪಾಧ್ಯಕ್ಷ ಮಾಂಡ್‌ಸೋರ್‌ಗೆ ಧಾವಿಸುವ ಅಗತ್ಯವಾದರೂ ಏನಿತ್ತು? ಇದು ತಮಗೆ ಫೊಟೋ ಅವಕಾಶ ಒದಗಿಸಿಕೊಡಬಹುದೆಂದು ಅವರು ಭಾವಿಸಿದಂತಿದೆ. ಅವರು ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದರು ಮತ್ತು ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಘರ್ಷಣೆ ಸಂಭವಿಸಿದ ಬಳಿಕ ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿದ್ದರು. ದೇಶದ ವಿರುದ್ಧ ಮತ್ತು ಭಯೋತ್ಪಾದಕರ ಪರವಾಗಿ ಘೋಷಣೆ ಕೂಗಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಟನಾ ಕಾರ್ಯಕ್ರಮ ನಡೆದ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಹೈದರಾಬಾದ್‌ ವಿಶ್ವವಿದ್ಯಾಲಯಕ್ಕೂ ಧಾವಿಸಿದ್ದರು. ಅದರಿಂದ ಯಾವ ಬಗೆಯ ಪರಿಣಾಮವಾದೀತು ಎಂಬುದರ ಕಲ್ಪನೆಯೇ ಅವರಿಗಿರಲಿಲ್ಲ. ಕೃಷಿ ಸಾಲಮನ್ನಾ ಮಾಡುವಂತೆ ಹಲವು ರಾಜ್ಯಗಳಿಂದ ಬೇಡಿಕೆ ಇದ್ದರೂ ಇದು ರೈತರಿಗೆ ತಾತ್ಕಾಲಿಕ ಪರಿಹಾರವನ್ನಷ್ಟೆ ನೀಡಬಹುದು. ಇದು ರೈತರ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರವೆನಿಸದು. ಕೃಷಿ ಒಳಸುರಿಗಳ ಬೆಲೆ ನಿಯಂತ್ರಣದ ಜತೆಗೆ ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ಖಾತ್ರಿಪಡಿಸುವುದೊಂದೇ ಪರಿಹಾರ. ಕೃಷಿ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಆರ್‌ಬಿಐ ಗವರ್ನರ್‌ ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಕೃಷಿ ಸಾಲ ಮನ್ನಾದಿಂದ ಆರ್ಥಿಕ ಕುಸಿತದ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಅವರು ಆರಂಭದಿಂದಲೂ ಗ್ರಾಮೀಣ ಪ್ರದೇಶ, ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವಜನತೆ ತಮ್ಮ ಸರ್ಕಾರದ ಪರಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಮುನ್ನೋಟಕ್ಕೆ ಪೂರಕವಾಗಿ ರೈತರ ಆದಾಯವನ್ನು 2022ರ ವೇಳೆಗೆ ಇಮ್ಮಡಿಗೊಳಿಸುವ ಗುರಿಯೊಂದಿಗೆ ಹಲವಾರು ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ಸರ್ಕಾರದ ಬಹುದೊಡ್ಡ ಕೊಡುಗೆ ನೀಡಲಾಗಿದೆ. ಎಲ್ಲ ಹಂಗಾಮಿನ ಎಲ್ಲ ಬೆಳೆಗಳಿಗೆ ಅನ್ವಯವಾಗುವ ಈ ಯೋಜನೆ ಅತಿ ಕಡಿಮೆ ಪ್ರೀಮಿಯಂ ಹೊಂದಿದ್ದು ಅತಿ ಹೆಚ್ಚು ಪರಿಹಾರವನ್ನು ಒದಗಿಸುತ್ತದೆ.

ಇನ್ನೊಂದು ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಕೃಷಿಭೂಮಿಗೆ ನೀರುಣಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ 50,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. 14 ಲಕ್ಷ ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ ವಿತರಿಸುವ ಗುರಿ ಹೊಂದಲಾಗಿದ್ದು ಆ ಪೈಕಿ ಸುಮಾರು 7.1 ಕೋಟಿ ಕಾರ್ಡ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಇ-ನ್ಯಾಮ್ ಯೋಜನೆ ಎಲ್ಲ ಕೃಷಿ ಮಾರುಕಟ್ಟೆಗಳ ನಡುವೆ ಸಂಪರ್ಕ ಕಲ್ಪಿಸುವುದರಿಂದ ರೈತರು ಯೋಗ್ಯ ದರದ ಬಗ್ಗೆ ತಿಳಿದುಕೊಂಡು ತಮ್ಮ ಉತ್ಪನ್ನಗಳನ್ನು ಆ ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಜತೆಗೆ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಆಮೂಲಾಗ್ರವಾಗಿ ಹೆಚ್ಚಿಸಲಾಗಿದೆ. ಸರ್ಕಾರ ಕೈಗೊಂಡ ಕ್ರಮಗಳು ಬೇಳೆ ಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಿವೆ. 2016-17ನೇ ಸಾಲಿಗಾಗಿ ಮುಂಗಾರು ಹಂಗಾಮಿನ ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ತೊಗರಿ ಬೇಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 4,625 ರೂ.ಯಿಂದ 5,050 ರೂ.ಉದ್ದಿನ ಬೇಳೆ 4,625 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದೆ.

ವಿದ್ಯುತ್‌ ಸಂಪರ್ಕವಿಲ್ಲದ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪ್ರಮುಖ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರೈತರು ಕೃಷಿ ಉತ್ಪನ್ನಗಳನ್ನು ಬೇಗನೆ ಸಾಗಿಸಲು ಅನುಕೂಲವಾಗುವಂತೆ ಗ್ರಾಮೀಣ ರಸ್ತೆ ಸಂಪರ್ಕ ಜಾಲ ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಸಾಲಕ್ಕೆ ಆದ್ಯತೆ ಕಲ್ಪಿಸಲಾಗಿದ್ದು ಈ ವರ್ಷದ ಮುಂಗಡಪತ್ರದಲ್ಲಿ 10 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ತಿಳಿಸಲು ದೂರದರ್ಶನ ಪ್ರತ್ಯೇಕ ‘ಕಿಸಾನ್‌ ವಾಹಿನಿ’ ಆರಂಭಿಸಿದೆ.

ಐವರು ರೈತರ ಸಾವಿನ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯಿಸುತ್ತಿರುವುದು ಅದರ ರಾಜಕೀಯ ದಿವಾಳಿಕೋರತನವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಆ ರಾಜ್ಯದಲ್ಲಿ ದಿಗ್ವಿಜಯ್ ಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ 1998ರಲ್ಲಿ ಬೆತೂಲ್‌ ಜಿಲ್ಲೆಯ ಮುಲ್ತಾನಿಯಲ್ಲಿ ಸಂಭವಿಸಿದ ಪೊಲೀಸ್‌ ಗೋಲಿಬಾರಿಗೆ 24 ಮಂದಿ ರೈತರು ಬಲಿಯಾಗಿದ್ದರು. ಆಗ ಅವರು ರಾಜೀನಾಮೆ ನೀಡಿರಲಿಲ್ಲವೇಕೆ ಎಂಬುದು ಸರಳ ಪ್ರಶ್ನೆ. ಆಗ ಕಾಂಗ್ರೆಸ್‌ ಅವರ ರಾಜೀನಾಮೆಗೆ ಒತ್ತಾಯಿಸಿತ್ತೇ ಅಥವಾ ಆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರೇ? 

ಮಧ್ಯಪ್ರದೇಶ ಈಗ ಅತ್ಯಂತ ರೈತಸ್ನೇಹಿ ಮುಖ್ಯಮಂತ್ರಿ ಚೌಹಾಣ್‌ ಅವರನ್ನು ಹೊಂದಿದೆ. ಅವರು ಕೃಷಿರಂಗಕ್ಕೆ ಒತ್ತು ನೀಡಿದ್ದರಿಂದಾಗಿ ಆ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಗತಿದರ ದಾಖಲಾಗಿದೆ. ಇದು ಇತರ ಯಾವುದೇ ರಾಜ್ಯಗಳಿಗೆ ಹೋಲಿಸಿದರೆ ಅದ್ವಿತೀಯವೆನಿಸಿದೆ.  ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ, ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ 4,500 ಕೋಟಿ ರೂ. ಸಬ್ಸಿಡಿ, ಕೃಷಿ ವಲಯಕ್ಕೆ 10 ಗಂಟೆಗಳ ಕಾಲ ಅಡೆತಡೆಯಿಲ್ಲದ ವಿದ್ಯುತ್‌ ಮುಂತಾದ ಅನೇಕ ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ನೀರಾವರಿಯನ್ನು 7.5 ಲಕ್ಷ ಹೆಕ್ಟೇರ್‌ನಿಂದ 40 ಲಕ್ಷ ಹೆಕ್ಟೇರಿಗೆ ಹೆಚ್ಚಿಸಲಾಗಿದೆ. ಎಲ್ಲ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಲು ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಲು ಮಧ್ಯಪ್ರದೇಶ ಸರ್ಕಾರ ಉದ್ದೇಶಿಸಿದೆ.

ನರ್ಮದಾ ನದಿಯ ಅಚ್ಚುಕಟ್ಟು ಪ್ರದೇಶವಾದ ಮಾಲ್ವಾದಲ್ಲಿ ಮುಂಚೂಣಿ ಯೋಜನೆಯೊಂದನ್ನು ಮಧ್ಯಪ್ರದೇಶ ಸರ್ಕಾರ ಕೈಗೆತ್ತಿಕೊಂಡಿದ್ದು ಈಗಾಗಲೆ ನರ್ಮದಾವನ್ನು ಕ್ಷಿಪ್ರಾ ನದಿಯೊಂದಿಗೆ ಜೋಡಿಸಲಾಗಿದೆ. ಒಂದು ಲಕ್ಷ ಕಿ.ಮೀ.ಗೂ ಅಧಿಕ ಉದ್ದದ ಗ್ರಾಮೀಣ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಳೆ ವಿಮೆಗೆ ಒತ್ತುನೀಡಲಾಗಿದ್ದು ಹಿಂಗಾರು ಹಂಗಾಮಿಗೆ ಸಂಬಂಧಿಸಿ 4,060 ಕೋಟಿ ರೂ. ಹಾಗೂ ಮುಂಗಾರು ಹಂಗಾಮಿಗೆ ಸಂಬಂಧಿಸಿ 4,416 ಕೋಟಿ ರೂ. ಪರಿಹಾರ ಬೇಡಿಕೆ ಸ್ವೀಕರಿಸಲಾಗಿದೆ.

ಮಧ್ಯಪ್ರದೇಶದ ಸದ್ಯದ ಸಮಸ್ಯೆ ವಿವಿಧ ಬೆಳೆಗಳ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳದಿಂದಾಗಿ ತಲೆದೋರಿದೆ. ಬೇಳೆಕಾಳುಗಳು, ಈರುಳ್ಳಿ ಹಾಗೂ ಸೋಯಾಬೀನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು ರೈತರಿಗೆ ಲಾಭದಾಯಕ ಬೆಲೆ ದೊರೆಯುತ್ತಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದು ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ರೈತರ ಸಂಘಟನೆಗಳು ಮುಂದಿಟ್ಟಿರುವ 13 ಬೇಡಿಕೆಗಳ ಪೈಕಿ 11 ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಅವರು ಸಮ್ಮತಿಸಿದ್ದಾರೆ. ದುರದೃಷ್ಟವಶಾತ್‌ ಪ್ರತಿಪಕ್ಷಗಳು ರೈತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ, ಕೆಲ ಸಮಾಜಘಾತುಕ ಶಕ್ತಿಗಳು ಪರಿಸ್ಥಿಯ ದುರ್ಲಾಭ ಪಡೆಯಲು ಮುಂದಾಗುತ್ತಿವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸುವ ಬದಲು ಪ್ರತಿಪಕ್ಷಗಳು ಬಂದ್‌ಕರೆನೀಡಿದ್ದು ಅತ್ಯಂತ ಬೇಜವಾಬ್ದಾರಿಯುತ, ಖಂಡನೀಯ ನಡೆ.

ಗೋಲಿಬಾರಿನಲ್ಲಿ ಮೃತಪಟ್ಟವರ ಕುಟುಂಬದವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಈಗಾಗಲೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಹಾಗೂ ಪ್ರತಿ ಕುಟುಂಬದ ಅರ್ಹ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ. ರೈತರು ಸ್ವಹಿತಾಸಕ್ತಿ ಹೊಂದಿರುವ ರಾಜಕಾರಣಿಗಳ ಮಾತಿಗೆ ಕಿವಿಗೊಡದಂತೆ ನಾನು ಮನವಿ ಮಾಡುತ್ತೇನೆ. ದೇಶ ಅತ್ಯಂತ ರೈತಸ್ನೇಹಿ ಪ್ರಧಾನಮಂತ್ರಿಯ ಕೈಯಲ್ಲಿದೆ ಹಾಗೂ ಮಧ್ಯಪ್ರದೇಶ ಅತ್ಯಂತ ರೈತಸ್ನೇಹಿ ಮುಖ್ಯಮಂತ್ರಿಯನ್ನು ಹೊಂದಿದೆ ಎಂಬುದನ್ನು ಮನಗಾಣಬೇಕಿದೆ. ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬೇಕಿದ್ದರೆ ಕೇಂದ್ರ ಮತ್ತು ಎಲ್ಲ ರಾಜ್ಯಗಳು ಸತತವಾಗಿ, ಸಂಯೋಜಿತ ರೀತಿಯಲ್ಲಿ ಪ್ರಯತ್ನಿಸಬೇಕಿದೆ. 

ಅನೇಕ ದಶಕಗಳ ಕಾಲ ಕೃಷಿರಂಗವನ್ನು ಕಡೆಗಣಿಸಿದ್ದರಿಂದಾಗಿ ಆ ವಲಯದಲ್ಲಿನ ಸಮಸ್ಯೆಗಳು ಉಲ್ಬಣಿಸಿದ್ದು, ಅವು ದಿನಬೆಳಗಾಗುವಷ್ಟರಲ್ಲಿ ಬಗೆಹರಿಯಬೇಕೆಂದು ಅಪೇಕ್ಷಿಸುವುದು ಸೂಕ್ತವೆನಿಸದು. ಆದರೆ ಎನ್‌ಡಿಎ ಸರ್ಕಾರ ಎಲ್ಲ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಬಗೆಹರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು ಹೆಚ್ಚು ಗೋದಾಮುಗಳ ನಿರ್ಮಾಣ, ಶೀತಾಗಾರ ಸರಪಳಿ, ಶೀತಲ ವ್ಯಾನುಗಳು, ಆಹಾರ ಸಂಸ್ಕರಣೆ ಘಟಕಗಳ ಮೂಲಕ ಮೌಲ್ಯವರ್ಧನೆ, ಸಾರ್ವತ್ರಿಕ ಬೆಳೆ ವಿಮೆ, ಅಡೆತಡೆಯಿಲ್ಲದ ವಿದ್ಯುತ್‌ ಪೂರೈಕೆ, ಸಕಾಲದಲ್ಲಿ ಸುಲಭ ಬಡ್ಡಿದರದಲ್ಲಿ ಸಾಲ, ಮಾರುಕಟ್ಟೆ ಮಾಹಿತಿಯ ಲಭ್ಯತೆ ಮುಂತಾದವುಗಳಿಗೆ ಒತ್ತುನೀಡಿದೆ. ರೈತರ ಸ್ಥಿತಿಗತಿ ಸುಧಾರಣೆಯ ಜತೆಗೆ ಮುಂಬರುವ ವರ್ಷಗಳಲ್ಲಿ ಅವರ ಆದಾಯ ದುಪ್ಪಟ್ಟು ಮಾಡಲು ಪ್ರಧಾನಮಂತ್ರಿ ದೃಢಸಂಕಲ್ಪ ಮಾಡಿದ್ದಾರೆ.

– ಎಂ. ವೆಂಕಯ್ಯ ನಾಯ್ಡು ; ಕೇಂದ್ರ ವಾರ್ತಾ- ಪ್ರಸಾರ ಸಚಿವರು

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.