ಗೂಗಲ್ ಭಟ್ಟರು!
Team Udayavani, Sep 23, 2017, 12:40 PM IST
ಮುಹೂರ್ತಕ್ಕೆ ಟೈಮ್ ಆಯ್ತು. ಪೂಜೆಗೆ ಬರಬೇಕಿದ್ದ ಪುರೋಹಿತರು ಇನ್ನೂ ಬಂದಿಲ್ಲ. ಅವರಿಗೆ ಹುಷಾರಿಲ್ವಂತೆ ಅಂತ ಈಗತಾನೆ ಸುದ್ದಿ ಗೊತ್ತಾಯ್ತು. ದೇವರೇ, ಈಗ ದಾರಿ ಏನು? ಆನ್ಲೈನ್ನಲ್ಲಿ ಭಗವಂತನೇ ದಾರಿ ತೋರಿಸಿಬಿಟ್ಟ. ಅಲ್ಲಿನ ಪುರೋಹಿತನ್ನು ಬುಕ್ ಮಾಡಿದಾಗ, ಪಿಜ್ಜಾ ಡೆಲಿವರಿ ವೇಗದಲ್ಲಿ ಅವರು ಗಂಟೆ ಹಿಡಿದುಕೊಂಡು ಬಂದರು! ಆನ್ಲೈನ್ ಅನ್ನೇ ಉಸಿರಾಟ ಮಾಡಿಕೊಂಡಿರುವ ಬೆಂಗಳೂರಿನಲ್ಲಿ ಈಗ ಪೌರೋಹಿತ್ಯವೂ ಡಿಜಿಟಲ್ ಹಾದಿ ತುಳಿದಿದೆ.
ಈ ಮಹಾನಗರದಲ್ಲಿ ಯಾರಿಗೂ, ಯಾವುದಕ್ಕೂ ಸಮಯವಿಲ್ಲ. ಮನೆಯಲ್ಲಿ ಯಾವುದಾದರೂ ಪೂಜೆ ಆಗಬೇಕಿದ್ದರೆ, ಅದರ ತಯಾರಿಗೂ ನಮಗೆ ಸಮಯವಿಲ್ಲ. ಇನ್ನು ಪಂಡಿತರು ಸಮಯಕ್ಕೆ ಸರಿಯಾಗಿ ಬರದಿದ್ದರೆ? ಅವರಿಗೆ ಬೇಕಾದ ಸಾಮಗ್ರಿಗಳು ಎಲ್ಲಿ ಸಿಗುತ್ತವೆ? ಅಪ್ಪನ ಶ್ರಾದ್ಧ ಹತ್ತಿರ ಬಂತು, ಪುರೋಹಿತರು ಸಿಗುತ್ತಿಲ್ಲ, ಮಾಧ್ವ ಸಂಪ್ರದಾಯ ಗೊತ್ತಿರೋರು ಪಂಡಿತರನ್ನು ಬೆಂಗಳೂರಲ್ಲಿ ಎಲ್ಲಿ ಹುಡುಕೋಣ? ಪೂಜೆಗೆ ಬಂದವರು ಪುಸ್ತಕ ನೋಡಿ ತಪ್ಪು ತಪ್ಪಾಗಿ ಮಂತ್ರ ಓದುತ್ತಾರೆ,
ಗಡಿಬಿಡಿಯಲ್ಲಿ ಪೂಜೆ ಮುಗಿಸಿ ಇನ್ನೊಂದು ಮನೆಗೆ ಓಡುತ್ತಾರೆ… ಇವೇ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ದೇವರು ಸಿಕ್ಕರೂ ನಮ್ಮ ಅಗತ್ಯಕ್ಕೆ ಸರಿಯಾದ ಪುರೋಹಿತರು ಸಿಗುವುದು ಕಷ್ಟ ಎಂಬ ಮಾತಿದೆ. ಆದರೆ, ಇದನ್ನೆಲ್ಲ ಸುಳ್ಳಾಗಿಸುತ್ತಿದೆ ಬೆಂಗಳೂರಿನ ಆನ್ಲೈನ್ ಪೌರೋಹಿತ್ಯ! ಅಮೇಜಾನ್, ಫ್ಲಿಪ್ಕಾರ್ಟ್ನಲ್ಲಿ ವಸ್ತುಗಳಿಗೆ ಸ್ಟಾರ್ ಕೊಟ್ಟಂತೆ, ಇಲ್ಲಿ ಪುರೋಹಿತರಿಗೂ 4 ಸ್ಟಾರ್, 5 ಸ್ಟಾರ್ ಇರುತ್ತದೆ! ಒಬ್ಬ ಬೇಡಿಕೆಯುಳ್ಳ ಪುರೋಹಿತ, ದಿನಕ್ಕೆ 10 ಮನೆಯ ಟಾರ್ಗೆಟ್ ಮುಗಿಸಿ, ಸೇಲ್ಸ್ ಎಕ್ಸಿಕ್ಯೂಟಿವ್ ಅವತಾರಿ ಆಗಿರುತ್ತಾನೆ.
ಪಿಜ್ಜಾ ಡೆಲಿವರಿ ಬಾಯ್ಗಿಂತ ವೇಗದಲ್ಲಿ ಸ್ಕೂಟರ್ ಓಡಿಸುತ್ತಾನೆ! ಸಾಫ್ಟ್ವೇರ್ ಎಂಜಿನಿಯರ್ಗಿಂತ ಹೆಚ್ಚು ಸಂಬಳ ಎಣಿಸುವ ಪುರೋಹಿತರೂ ಇದ್ದಾರೆ. ದೇವರ ಮುಂದೆ, ಮಂಗಳರಾತಿಯ ತಟ್ಟೆಗೆ ಬೀಳುವ ಪೈಸೆಯೇ ಸಂಭಾವನೆಯಂತಿದ್ದ ಪುರೋಹಿತರಿಗೆ, “ಡಿಜಿಟಲ್ ಬೆಂಗಳೂರು’ ಭರ್ಜರಿ ಬೇಡಿಕೆಯನ್ನೇ ಸೃಷ್ಟಿಸುತ್ತಿದೆ. ಈಗ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭದಲ್ಲಿ ಪುರೋಹಿತರನ್ನು ಬುಕ್ ಮಾಡಬಹುದು. ಪಂಡಿತ್ಸ್ ಇನ್ ಬೆಂಗಳೂರು ಅಂತಲೋ ಅಥವಾ ಆನ್ಲೈನ್ ಪೂಜಾ ಸರ್ವಿಸಸ್ ಅಂತಲೋ ಗೂಗಲಿಸಿದರೆ ಹಲವಾರು ವೆಬ್ಸೈಟ್ಗಳು ತೆರೆದುಕೊಳ್ಳುತ್ತವೆ.
ಅಲ್ಲಿ ನೀವು, ಪೂಜೆಯ ಹೆಸರು ಮತ್ತು ದಿನಾಂಕವನ್ನು ನಮೂದಿಸಿದರೆ ಆಯ್ತು. ಹೇಳಿದ ದಿನ, ಸರಿಯಾದ ಸಮಯಕ್ಕೆ ಪುರೋಹಿತರೇ ಮನೆಗೆ ಬಂದು ಪೂಜೆ ನಡೆಸಿಕೊಡುತ್ತಾರೆ. ಪೂಜೆಗೆ ಬೇಕಾಗುವ ಹೂವು, ಹಣ್ಣು, ಪತ್ರೆ, ಪ್ರಸಾದ ಸಾಮಗ್ರಿಯ ವ್ಯವಸ್ಥೆಯೂ ಅವರದ್ದೇ. ನೀವು ಯಾವ ಭಾಷೆಯವರಾಗಿದ್ದರೂ ಪರವಾಗಿಲ್ಲ. ನಿಮ್ಮ ಸಂಪ್ರದಾಯದ ಪ್ರಕಾರವೇ ಪೂಜೆ ನಡೆಯುತ್ತದೆ. ನೀವು ಬುಕ್ ಮಾಡುವ ಪಂಡಿತರು, ಸಂಸ್ಕೃತವನ್ನು ಚೆನ್ನಾಗಿ ಅರಿತಿರುವ, ಶಾಸ್ತ್ರಗಳನ್ನು ಸರಿಯಾಗಿ ಅಭ್ಯಾಸ ಮಾಡಿರುತ್ತಾರೆ.
ಸತ್ಯನಾರಾಯಣ ಪೂಜೆ, ಮಹಾಗಣಪತಿ ಹೋಮ, ಚಂಡಿಕಾ ಹೋಮ, ವರಮಹಾಲಕ್ಷ್ಮಿ ಪೂಜೆ, ದುರ್ಗಾ ಪೂಜೆ, ನಿಶ್ಚಿತಾರ್ಥ, ಮದುವೆ, ನಾಮಕರಣ, ಉಪನಯನ, ಗೃಹಪ್ರವೇಶ, ಶ್ರಾದ್ಧ, ಭೂಮಿ ಪೂಜೆ… ಮುಂತಾದ ಯಾವುದೇ ಪೂಜೆ- ಸಮಾರಂಭಕ್ಕೂ ಇವರು ರೆಡಿ. ಈಗ ದಸರೆಯ ಸಂಭ್ರಮ. “ರಜೆ’ ಎಂಬ ಖುಷಿಯಲ್ಲಿ ಎಲ್ಲರೂ ತೇಲುತ್ತಿರುವಾಗ, ಬೆಂಗಳೂರಿನ ಪುರೋಹಿತರು “ಡ್ನೂಟಿ ಇದೆ’ ಎಂದು ಅವಸರದಲ್ಲಿದ್ದಾರೆ. ಈ ಹೊತ್ತಿನಲ್ಲಿ ಅವರ ಮೊಬೈಲ್ ಆಫ್ಲೈನ್ ಆಗುವುದಿಲ್ಲ! ಅವರ ಪಾಲಿಗೆ ದೇವರೂ ಈಗ ಆನ್ಲೈನ್ನಲ್ಲೇ ಇದ್ದಾನೆ!
ನಾನಾ ಭಾಷೆಯ ಪೂಜಾರಿಗಳು!
ಬೆಂಗಳೂರಿನಲ್ಲಿ ಪುರೋಹಿತರನ್ನು ಹೇಗೆ ಹುಡುಕುವುದು ಎನ್ನುವ ತಲೆಬಿಸಿ ಅನೇಕರಿಗೆ ಇರುತ್ತೆ. ಸೂಕ್ತ ಪುರೋಹಿತರನ್ನು ಹುಡುಕಲಾಗದೇ ಅನೇಕರು ಒದ್ದಾಡುವುದನ್ನು ಕಂಡಿದ್ದೆವು. ಎಲ್ಲರೂ ಮೊಬೈಲ್ನಲ್ಲಿ ಎಂಗೇಜ್ ಆಗುತ್ತಿರುವುದನ್ನು ಗಮನಿಸಿದ ನಾವು, 2016ರಲ್ಲಿ ಡಿಜಿಟಲ್ ಪ್ಲಾಟ್ಫಾರಂ ಶುರುಮಾಡಿಕೊಂಡೆವು. 10-15 ವರ್ಷ ಅನುಭವ ಹೊಂದಿರುವ, ವೇದ, ಪೂಜಾಪಾಠಗಳಲ್ಲಿ ಪರಿಣತಿ ಹೊಂದಿರುವ ಪುರೋಹಿತರ ತಂಡ ಕಟ್ಟಿದೆವು.
ಸತ್ಯನಾರಾಯಣ ಪೂಜೆ, ಮಹಾಗಣಪತಿ ಪೂಜೆ, ಭೂಮಿ ಪೂಜೆ, ದುರ್ಗಾ ಹೋಮ, ಚಂಡಿ ಹೋಮ, ರುದ್ರಾಭಿಷೇಕ, ನಿಶ್ಚಿತಾರ್ಥ, ಗೃಹಪ್ರವೇಶ, ಶ್ರಾದ್ಧ ಸೇರಿದಂತೆ 260ಕ್ಕೂ ಹೆಚ್ಚು ಪೂಜೆಗಳನ್ನು ಬಲ್ಲವರ ಟೀಮ್ ಕೆಲಸ ಮಾಡುತ್ತಿದೆ. ಈ ಬೆಂಗಳೂರಿನಲ್ಲಿ ಭಾಷೆಯದ್ದೂ ಸಮಸ್ಯೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್, ತುಳು, ಕೊಂಕಣಿ, ಗುಜರಾತಿ, ಒಡಿಯಾ, ರಾಜಸ್ಥಾನಿ, ಮರಾಠಿ, ಬಂಗಾಳಿ ಭಾಷೆಯನ್ನು ಬಲ್ಲ ಜನರು ಇರುವ ಕಾರಣಕ್ಕಾಗಿ, ಆಯಾ ಭಾಷೆ ಗೊತ್ತಿರುವ ಪುರೋಹಿತರನ್ನು ಒದಗಿಸುವ ಸವಾಲೂ ಎದುರಾಯಿತು.
ಕೆಲವರು ಪೂಜೆಗೆ ವಾರದ ಮೊದಲೇ ಬುಕ್ ಮಾಡುತ್ತಾರೆ. ಮತ್ತೆ ಕೆಲವರು ನಾಳೆಯೇ ಪೂಜೆ ಇದೆ ಅಂದ್ರೆ, ಇವತ್ತೇ ಬುಕ್ ಮಾಡುತ್ತಾರೆ. ಇಂಥ ಸಂದರ್ಭಗಳನ್ನೂ ಯಶಸ್ವಿಯಾಗಿ ನಿಭಾಯಿಸಬೇಕಾಗುತ್ತದೆ. ಈಗ ದಸರೆ ಇರುವ ಕಾರಣಕ್ಕಾಗಿ, ಪುರೋಹಿತರಿಗೆ ಬಿಡುವೇ ಇಲ್ಲದಂತಾಗಿದೆ.
-ನಿಶ್ಚಯ್ ಚತುರ್ವೇದಿ, ಸ್ಮಾರ್ಟ್ಪೂಜಾ ಡೆಸ್ಕ್
ಹಬ್ಬದ ದಿನಗಳಲ್ಲಿ ಹೆಚ್ಚು ಕರೆ
ಆನ್ಲೈನ್ನಲ್ಲಿ ತುಂಬಾ ಜನ ಪೂಜೆಗೆ ಕರೆಯುತ್ತಾರೆ. ಹಬ್ಬದ ದಿನಗಳಲ್ಲಿ ಇನ್ನೂ ಹೆಚ್ಚು ಕರೆಗಳು ಬರುತ್ತವೆ. ಆದರೆ, ನಾನು ಕೇವಲ ಒಂದು ಅಥವಾ ಎರಡು ಮನೆಗೆ ಪೂಜೆಗೆ ಹೋಗುತ್ತೇನೆ ಅಷ್ಟೇ. ಪೂಜೆ-ಪುನಸ್ಕಾರವನ್ನು ಹಣ ಮಾಡುವ ಮಾರ್ಗ ಎಂದು ಯಾವತ್ತೂ ಭಾವಿಸಿಲ್ಲ, ಹಾಗೆ ಭಾವಿಸುವುದೂ ಇಲ್ಲ. ನಮ್ಮ ಮನೆಯ ಪೂಜೆಯಷ್ಟೇ ಶಾಸ್ತ್ರಬದ್ಧವಾಗಿ ಬೇರೆಯವರ ಮನೆಯಲ್ಲೂ ಪೂಜೆ ನಡೆಸುತ್ತೇನೆ.
ಐದು ನಿಮಿಷದಲ್ಲಿ ಪೂಜೆ ಮುಗಿಸಿ ಇನ್ನೊಂದು ಮನೆಗೆ ಓಡುವವರು ಇದ್ದರೂ ಇರಬಹುದು. ಅಂಥ ಪೂಜೆಗೆ ಅರ್ಥವಿರುವುದಿಲ್ಲ. ಕೆಲವರು ಕಬ್ಬಿಣದ ಹೋಮಕುಂಡದಲ್ಲೇ ಹೋಮ ಮಾಡುತ್ತಾರೆ. ಹೋಮ ಮಾಡುವುದಾದರೆ ಇಟ್ಟಿಗೆಯ ಹೋಮಕುಂಡದಲ್ಲಿ ಮಾಡಬೇಕು. ಪೂಜೆಗೆ ಕರೆದವರ ಮನೆಗೆ ಇಟ್ಟಿಗೆಯನ್ನೂ ತೆಗೆದುಕೊಂಡು ಹೋಗಿಯೂ ಪೂಜೆ ಮುಗಿಸಿದ್ದಿದೆ.
-ನಾಗೇಂದ್ರ ಭಟ್, ಆನ್ಲೈನ್ ಪುರೋಹಿತರು
ಮುಹೂರ್ತಕ್ಕೆ ಅಡ್ಡಿಯಾಗುವ ಟ್ರಾಫಿಕ್!
ವಿಜಯದಶಮಿಯಂದು ಕನಿಷ್ಠವೆಂದರೂ 80-100 ಜನ ಪೂಜೆಗೆ ಕರೆಯುತ್ತಾರೆ. ಆದರೆ, ಎಲ್ಲರ ಮನೆಗೂ ಹೋಗಿ ಪೂಜೆ ನಡೆಸಿಕೊಡಲು ಆಗೋದಿಲ್ಲ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ಗೊತ್ತೇ ಇದೆಯಲ್ಲ. ಹಾಗಾಗಿ, ಕೇವಲ 5-6 ಮನೆಯನ್ನು ಮಾತ್ರ ಒಪ್ಪಿಕೊಳ್ಳುತ್ತೇವೆ. ಕಾಟಾಚಾರಕ್ಕೆ ಪೂಜೆ ಮುಗಿಸಲು ಆಗುವುದಿಲ್ಲ. ಶಾಸ್ತ್ರೋಕ್ತವಾಗಿಯೇ ಎಲ್ಲರ ಮನೆಯ ಪೂಜೆಯನ್ನೂ ನಡೆಸಿಕೊಡುತ್ತೇವೆ.
-ಹೇಮಚಂದ್ರ ಜೋಶಿ, ಆನ್ಲೈನ್ ಪುರೋಹಿತರು
ಪ್ರಮುಖ ಆನ್ಲೈನ್ ಪುರೋಹಿತರ ವೆಬ್ತಾಣಗಳು
– [email protected]
– www.harivara.com
– www.saranam.com
– bro4u.com
– priestservices.com
– www.mypanditg.com
– wheresmypandit.com
* ಪ್ರಿಯಾಂಕಾ