ಮಗಳನ್ನೇ ಕೊಂದು ಸುಟ್ಟುಹಾಕಿದ ತಂದೆ!
Team Udayavani, Nov 23, 2017, 11:59 AM IST
ನೆಲಮಂಗಲ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಲಕ್ಕಪ್ಪನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀದೇವಿ (16) ಮೃತ ಬಾಲಕಿ. ಲಕ್ಷ್ಮೀನಾರಾಯಣ ಎಂಬ ಯುವಕನನ್ನು ಪ್ರೀತಿಸಿದ್ದ ಬಾಲಕಿ, ಮನೆ ತೊರೆದು ಆತನೊಂದಿಗೆ ಹೋಗಿದ್ದಳು. ಈ ಬಗ್ಗೆ ತಾಲೂಕಿನ ತ್ಯಾಮಗೂಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಪತ್ತೆ ಮಾಡಿದ ಪೊಲೀಸರು ಆಕೆಯನ್ನು ತಂದೆ ಮನೆಗೆ ಕಳುಹಿಸಿದ್ದರು.
ಮನೆಗೆ ಬಂದ ನಂತರ ತಂದೆ ಚಿಕ್ಕನರಸಿಂಹಯ್ಯ ಪುತ್ರಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದು, ನಂತರ ಮನೆ ಹಿಂಬದಿಯಲ್ಲಿ ಶವ ಸುಟ್ಟು ಹಾಕಿದ್ದಾನೆ. ಸುಮಾರು 20 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತಂದೆ ಚಿಕ್ಕನರಸಿಂಹಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಐಜಿ ಅಮೃತ್ ಪೌಲ್, ಎಸ್ಪಿ ಅಮಿತ್ಸಿಂಗ್ ಭೇಟಿ ನೀಡಿದ್ದರು.