ಕೃಷ್ಣನಿಗೆ ಸಮರ್ಪಿತ ತುಳಸಿ ಈಗ ಕ್ಯಾಪ್ಸೂಲ್!
Team Udayavani, Mar 21, 2018, 7:00 AM IST
ಕಟಪಾಡಿ: ಉಡುಪಿ ಶ್ರೀಕೃಷ್ಣನಿಗೆ ನಿತ್ಯವೂ ಅರ್ಚನೆಗೊಳ್ಳುವ ಲಕ್ಷ ತುಳಸಿ ಇದೀಗ ಕ್ಯಾಪ್ಸೂಲ್, ಪೇಯವಾಗಿ ಜನರ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥರ ಅವಧಿಯಲ್ಲಿ ಕೃಷ್ಣನಿಗೆ ತುಳಸಿ ಅರ್ಚನೆ ನಡೆಯುತ್ತದೆ. ಇದನ್ನು ಔಷಧ ಉದ್ದೇಶಕ್ಕೆ ಬಳಸಿಕೊಳ್ಳುವುದಾಗಿ ಪರ್ಯಾಯ ವೇದಿಕೆಯಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಘೋಷಿಸಿದ್ದರು. ಅದರಂತೆ ಕೃಷ್ಣನಿಗೆ ಅರ್ಚನೆಯಾಗುವ ಹೆಚ್ಚಿನ ಪಾಲು ತುಳಸಿ ಉದ್ಯಾವರ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಫಾರ್ಮಸಿಯಲ್ಲಿ ರೋಗನಿರೋಧಕ ಕ್ಯಾಪ್ಸೂಲ್ ಆಗಿ ಸ್ನಾನದ ಚೂರ್ಣವಾಗಿ ಪೇಯವಾಗಿ ಮಾರ್ಪಡುತ್ತಿದೆ.
ತುಳಸಿ ಸ್ನಾನ ಚೂರ್ಣ
ಸ್ನಾನಕ್ಕೆ ಬಳಸುವ ಪುಡಿ. ಇದು ಚರ್ಮದ ಆರೋಗ್ಯ, ಹೊಳಪನ್ನು ಹೆಚ್ಚಿಸಲು ಸಹಕಾರಿ. ತ್ವಚೆಯಲ್ಲಿರುವ ಜಿಡ್ಡಿನಂಶ ಪರಿಹಾರ ಮಾಡುತ್ತದೆ. ದೀರ್ಘಕಾಲೀನ ಗಜಕರ್ಣ ಅಥವಾ ಫಂಗಸ್ ಸೋಂಕುಗಳಂತಹ ಸಮಸ್ಯೆ ಪರಿಹಾರಕ್ಕೆ ಸಹಕಾರಿ. ಚೇಳು, ಕೀಟ ಕಡಿತದಲ್ಲೂ ಉಪಯುಕ್ತವಾಗಿದೆ.
ತುಳಸಿ ಪೇಯ
ರೋಗ ನಿರೋಧಕ ಶಕ್ತಿವರ್ಧಕ ಪೇಯ ಇದಾಗಿದ್ದು, ಆಗಾಗ್ಗೆ ಬಾಧಿಸುವ ಶೀತ, ಕಫ, ಜ್ವರ ದೂರ ಮಾಡುತ್ತದೆ. ಆಲಸ್ಯ, ಮೈ ಹಿಡಿದುಕೊಂಡಂತಾಗುವುದನ್ನು ಪರಿಹರಿಸುತ್ತದೆ.
ತುಳಸಿ ಕ್ಯಾಪ್ಸೂಲ್
ವಿವಿಧ ರೀತಿಯ ಜ್ವರಗಳು, ಕಟ್ಟಿದ ಮೂಗು, ಕಫ, ಗಂಟಲೂತ, ಅಂಟುಮೇಹ ರೋಗ, ಆಮಶಂಕೆ, ರೋಗನಿರೋಧಕ ಶಕ್ತಿಗೆ ತುಳಸಿ ಕ್ಯಾಪ್ಸೂಲ್ ಪ್ರಯೋಜನಕಾರಿಯಾಗಿದೆ.
ಅರ್ಚನೆ ತುಳಸಿಯಲ್ಲಿ ಏನೆಲ್ಲ ಮಾಡ್ತಾರೆ?
ಫಾರ್ಮಸಿಯಲ್ಲಿ ಅರ್ಚನೆಗೈದ ತುಳಸಿಯನ್ನು ಶುಚಿಗೊಳಿಸಿ, ನೆರಳಿನಲ್ಲಿ ಒಣಗಿಸಿ ಬೇಕಾದಂತೆ ಅದನ್ನು ಮಾರ್ಪಾಡುಗೊಳಿಸಿ ಮೂರು ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಸದ್ಯ ಮಾರುಕಟ್ಟೆಗೆ ಬಿಡುಗಡೆಯಾಗುವ ಹಂತದಲ್ಲಿದ್ದು, ಅದಕ್ಕೂ ಮೊದಲಿನ ಪ್ರಕ್ರಿಯೆಗಳು, ಪರವಾನಿಗೆ ಪಡೆವ ಪ್ರಯತ್ನಗಳು ನಡೆಯುತ್ತಿವೆ.
ಉಲ್ಲಾಸ ವರ್ಧಕ ಪೇಯ
ಮಂದಗೊಂಡ ಜೀರ್ಣ ಶಕ್ತಿ, ಜೀರ್ಣಕ್ರಿಯೆ ಸರಾಗಗೊಳಿಸಲು ಸಹಕಾರಿ. ಆಧುನಿಕ ಜೀವನ ಶೆ„ಲಿಯ ತೊಂದರೆಗಳನ್ನು ಎದುರಿಸಲು ಪರಿಣಾಮಕಾರಿ. ನರಮಂಡಲಕ್ಕೆ ಬಲವಿತ್ತು, ತಾರುಣ್ಯ ಉಳಿಸಿಕೊಳ್ಳಲು ಉಪಯುಕ್ತ. ಇದರ ನಿರಂತರ ಉಪಯೋಗ ನವೋಲ್ಲಾಸ ಉಂಟುಮಾಡುತ್ತದೆ.
ಪರಿಣಾಮಕಾರಿ ಪ್ರಸಾದ
ತುಳಸಿಯ ಔಷಧೀಯ ಗುಣದ ಬಗ್ಗೆ ಅರಿವಿದ್ದರೂ ಲಭ್ಯತೆ ಕೊರತೆಯಿಂದ ಬಳಕೆ ಕಡಿಮೆಯಾಗಿತ್ತು. ಈಗ ಅರ್ಚನೆಗೆ ಬಳಸಿದ ತುಳಸಿ ಪರಿಣಾಮಕಾರಿ ಪ್ರಸಾದವಾಗುತ್ತಿದೆ.
-ಡಾ| ಮುರಳೀಧರ ಆರ್. ಬಲ್ಲಾಳ್, ಮ್ಯಾನೇಜರ್, ಎಸ್. ಡಿ.ಎಂ. ಫಾರ್ಮಸಿ
— ವಿಜಯ ಆಚಾರ್ಯ ಉಚ್ಚಿಲ