ದ.ಕ. ಜಿಲ್ಲೆ : ಕೆಲವೆಡೆ ಉತ್ತಮ ಮಳೆ
Team Udayavani, Apr 4, 2018, 8:03 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮಂಗಳವಾರ ಸಂಜೆ ವೇಳೆಗೆ ಮಳೆ ಬಂದಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.
ಬೆಳ್ತಂಗಡಿ, ಕನ್ಯಾಡಿ, ಉಜಿರೆ, ಮುಂಡಾಜೆಯಲ್ಲಿ ಸಿಡಿಲು, ಗಾಳಿ ಸಹಿತ ಮಳೆಯಾಗಿದೆ. ಭಾರೀ ಮಳೆಗೆ ಕನ್ಯಾಡಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು, ಮರ ರಸ್ತೆಗೆ ಉರುಳಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಉಜಿರೆ-ಧರ್ಮಸ್ಥಳ ರಸ್ತೆಯಲ್ಲಿ ಸ್ವಲ್ಪ ಕಾಲ ಬ್ಲಾಕ್ ಉಂಟಾಗಿದ್ದು, ಬಳಿಕ ಮರ ತೆರವುಗೊಳಿಸಲಾಯಿತು. ನೀರ ಚಿಲುಮೆ ಬಳಿಯೂ ರಸ್ತೆ ಮೇಲೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಸಂಚಾರಕ್ಕೆ ತಡೆಯುಂಟಾಯಿತು. ಬಳಿಕ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಮುಂಡಾಜೆಯಲ್ಲಿ ಭಾರೀ ಗಾಳಿಯಿಂದಾಗಿ ಕೃಷಿ ತೋಟಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಇಲ್ಲದಂತಾಗಿದೆ.
ಮಡಂತ್ಯಾರು, ಮಚ್ಚಿನ, ಉಪ್ಪಿನಂಗಡಿ ಪರಿಸರದಲ್ಲಿ ಗಾಳಿ ಸಹಿತ ಸಾಧಾರಣ ವರುಣಾಗಮನವಾಗಿದೆ. ಬಂಟ್ವಾಳ, ವಿಟ್ಲ, ಪುಂಜಾಲಕಟ್ಟೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿದೆ. ಸುಳ್ಯ, ಸುಬ್ರಹ್ಮಣ್ಯ, ವೇಣೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು.