ರೆಡ್ಡಿ-ಫಕ್ಕೀರಪ್ಪ ಪರ ನಟ ಸುದೀಪ್ ರೋಡ್ ಶೋ
Team Udayavani, May 8, 2018, 4:32 PM IST
ಬಳ್ಳಾರಿ: ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಸೋಮಶೇಖರರೆಡ್ಡಿ, ಸಣ್ಣ ಫಕ್ಕೀರಪ್ಪ ಪರ ನಟ ಕಿಚ್ಚ ಸುದೀಪ್ ಸೋಮವಾರ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ನಗರ ಕ್ಷೇತ್ರ ವ್ಯಾಪ್ತಿಯ ಮಿಲ್ಲರ್ಪೇಟೆ ಬಳಿ ಬೆಳಗ್ಗೆ 10.30ರ ಸುಮಾರಿಗೆ ಕಿಚ್ಚ ಸುದೀಪ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅವರ ಕೈ ಕುಲುಕಿದರು. ಬಳಿಕ ಅಲ್ಲಿಂದ ಶ್ರೀರಾಂಪುರ ಕಾಲೋನಿವರೆಗೆ ಸಂಸದ ಶ್ರೀರಾಮುಲು, ನಗರ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ ಅವರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್, ನನ್ನನ್ನು ಒಬ್ಬ ನಟನಾಗಿ ನೋಡಿ. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಆದರೆ, ಸಂಸದ ಶ್ರೀರಾಮುಲು ಅವರು ನನಗೆ ಮೊದಲಿನಿಂದಲೂ ಆತ್ಮೀಯರು ಹಾಗೂ ಬಂಧುಗಳು. ಅವರು ಕೈಗೊಂಡ ಕೆಲಸ ಕಾರ್ಯಗಳು ದೇಶಾದ್ಯಂತ ಖ್ಯಾತಿ ಪಡೆದಿವೆ.
ಇನ್ನು ಸೋಮಶೇಖರರೆಡ್ಡಿಯವರು ಸಹ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಗೆಲ್ಲಿಸಬೇಕೆಂದು ರೆಡ್ಡಿ ಪರ ಮತಯಾಚನೆ ಮಾಡಿದರು. ಇದೇ ವೇಳೆ ವೀರಮದಕರಿ ಚಿತ್ರದ “ಸಾವು ಎದುರಿಗೆ ಬಂದಾಗ ನನ್ನ ಕೈ ಮೀಸೆ ಮೇಲೆ ಇರಬೇಕು. ಆ ಗುಂಡಿಗೆ ನಮ್ಮದಾಗಬೇಕು’ ಎಂಬ ಡೈಲಾಗ್ ಹೊಡೆದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ನಂತರ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ ಪರವಾಗಿ ತಾಲೂಕಿನ ಸಂಗನಕಲ್ಲು, ಮೋಕಾ ಸೇರಿದಂತೆ ಹಲವೆಡೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ಅಭಿಮಾನಿಗಳ ಪ್ರೀತಿಗೆ ಅಭಾರಿಯಾಗಿದ್ದೇನೆ. ನಿಮ್ಮ ಪ್ರೀತಿಯನ್ನು ಕೊನೆವರೆಗೂ ಮರೆಯಲ್ಲ. ಸದ್ಯ ಚುನಾವಣೆ ನಿಮಿತ್ತ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣ ಫಕ್ಕೀರಪ್ಪರ ಸ್ನೇಹಕ್ಕಾಗಿ ಇಲ್ಲಿಗೆ ಬಂದು ಮತಯಾಚಿಸುತ್ತಿದ್ದೇನೆ. ಅವರೊಬ್ಬ ಒಳ್ಳೆಯ ವ್ಯಕ್ತಿಯಾಗಿದ್ದು, ಅವರ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡುವ ಅವಕಾಶ ದೊರೆಯಿತು ಎಂದರು.
ಇಲ್ಲಿಯೂ ಸಹ ಜನ ಚಲನಚಿತ್ರದ ಹಾಡೊಂದನ್ನು ಹಾಡುವಂತೆ ಒತ್ತಾಯಿಸಿದರು. ಸುದೀಪ್ ಪುನಃ ವೀರಮದಕರಿ ಚಿತ್ರದ ಡೈಲಾಗ್ ಹೊಡೆಯುವ ಮೂಲಕ ಅಭಿಮಾನಿಗಳನ್ನು ತೃಪ್ತಿ ಪಡಿಸಿದರು.
ನಂತರ ಮಾಜಿ ಸಚಿವ ಜನಾರ್ದನರೆಡ್ಡಿ ನಿವಾಸಕ್ಕೆ ತೆರಳಿ ಕೆಲಹೊತ್ತು ವಿಶ್ರಾಂತಿ ಪಡೆದ ಕಿಚ್ಚ ಸುದೀಪ್, ಬಳಿಕ ನಗರ ಕ್ಷೇತ್ರ ವ್ಯಾಪ್ತಿಯ ಕನಕದುರ್ಗಮ್ಮ ದೇವಸ್ಥಾನ, ಗಡಗಿಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ವೃತ್ತ, ಎಚ್.ಆರ್.ಗವಿಯಪ್ಪ ವೃತ್ತ, ಕೌಲ್ಬಜಾರ್ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ಸುದೀಪ್ ಅವರನ್ನು ನೋಡಲು ಜನ ಕಿಕ್ಕಿರಿದು ನೆರೆದಿದ್ದರು.
ಈ ವೇಳೆ ಸಂಸದ ಬಿ.ಶ್ರೀರಾಮುಲು, ಮಾಜಿ ಸಂಸದೆ ಜೆ.ಶಾಂತಾ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ, ಮುಖಂಡರಾದ ಕೋನಂಕಿ ತಿಲಕ್ಕುಮಾರ್, ಇಬ್ರಾಹಿಂ ಬಾಬು ಇದ್ದರು.
ರಸ್ತೆ ಬದಿ ಹೊಟೇಲ್ನಲ್ಲಿ ತಿಂಡಿ ಸವಿದ ಕಿಚ್ಚ .. ಸಂಸದ ಬಿ.ಶ್ರೀರಾಮುಲು ಪರ ಪ್ರಚಾರ ಮಾಡಲು ಬಳ್ಳಾರಿಯಿಂದ ಮೊಳಕಾಲ್ಮೂರುಗೆ ತೆರಳಿದ ನಟ ಕಿಚ್ಚ ಸುದೀಪ್, ಓಬಳಾಪುರಂ ಗ್ರಾಮದಲ್ಲಿ ರಸ್ತೆ ಬದಿಯ ಹೊಟೇಲ್ನಲ್ಲಿ ತಿಂಡಿ ಸವಿದು, ಟೀ ಕುಡಿದರು.
ಹೊಟೇಲ್ನಲ್ಲಿ ಚಪಾತಿ, ಕಾಳಿನ ಪಲ್ಯ ತಿಂದು ಚಹಾ ಸೇವಿಸಿದರು. ಸುದೀಪ್ ಆಗಮನದಿಂದ ಖುಷಿಗೊಂಡ ಹೊಟೇಲ್ ಮಾಲಕಿ ರಾಧಮ್ಮ, “ಸ್ಟಾರ್ ನಟರು ದೊಡ್ಡ ದೊಡ್ಡ ಹೊಟೇಲ್ಗಳಲ್ಲಿ ಊಟ ಮಾಡುತ್ತಾರೆ ಎಂಬ ಭಾವನೆ ನಮ್ಮದಾಗಿತ್ತು. ಆದರೆ, ನಮ್ಮಂತಹ ಚಿಕ್ಕ ಹೊಟೇಲ್ಗಳಲ್ಲೂ ತಿಂಡಿ ತಿನ್ನುವವರು ಇರುತ್ತಾರೆ ಎಂಬುದು ಕಿಚ್ಚ ಸುದೀಪ್ ಅವರಿಂದ ಸಾಬೀತಾಯಿತು. ಅವರು ಹೋಟೆಲ್ಗೆ ಆಗಮಿಸಿದ್ದು ಸಂತಸ ತಂದಿದೆ ಎಂದು ಮಾಧ್ಯಮದವರೆದುರು ಹರ್ಷ ವ್ಯಕ್ತಪಡಿಸಿದರು
ಬಳ್ಳಾರಿ ನಗರ ಕ್ಷೇತ್ರದಲ್ಲಿ ಬೆಳಗ್ಗೆ ರೋಡ್ ಶೋ ಮುಗಿಸಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋದ ಸುದೀಪ್ ವಾಹನವನ್ನು ತಾಲೂಕಿನ ಗಡಿಗ್ರಾಮ ಹಲಕುಂದಿ ಬಳಿಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದರು. ವಾಹನ ತಪಾಸಣೆ ಬಳಿಕ ಪೊಲೀಸರು ಸುದೀಪ್ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ