ಅಪಪ್ರಚಾರಗಳಿಗೆ ಕಿವಿಗೊಡದೆ ಬಹುಮತ ನೀಡಿ
Team Udayavani, May 11, 2018, 2:31 PM IST
ತಿ.ನರಸೀಪುರ: ಹೈಕಮಾಂಡನ್ನೇ ಓವರ್ಟೇಕ್ ಮಾಡಿ, ಶಾಸಕಾಂಗ ಸಭೆ ನಡೆಯುವ ಮೊದಲೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯಗೆ ಪಾಠ ಕಲಿಸಲು ಸ್ವಾಭಿಮಾನಿ ದಲಿತ ಸಮುದಾಯಗಳು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕೆಂದು ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದಲ್ಲಿ ಸಂಜೆ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಪರ ಮತಯಾಚಿಸಿ ಮಾತನಾಡಿದ ಅವರು, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಇನ್ನೂ ಮುಗಿದಿಲ್ಲ. ಫಲಿತಾಂಶವೂ ಪ್ರಕಟಗೊಂಡಿಲ್ಲವಾದರೂ ಆಗಲೇ ಮುಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾನೇ ಸಿಎಂ ಅನ್ನುತ್ತಿರುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಲು ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸದೆ ಬಿಜೆಪಿ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ತಿ.ನರಸೀಪುರ ಕ್ಷೇತ್ರದಲ್ಲಿನ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪ ಅಂತರದಲ್ಲಿ ಮಾತ್ರ ಗೆದ್ದಿತ್ತು. ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಶಂಕರ್ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಿಂತಲೂ ಬಲಿಷ್ಠವಾಗಿದ್ದು, ಎಲ್ಲಾ ವರ್ಗದ ಜನರ ಮತಗಳನ್ನು ಪಡೆದುಕೊಂಡು ಈ ಬಾರಿ ಗೆಲ್ಲಲಿದ್ದಾರೆ. ದಲಿತ ಸಮುದಾಯಗಳು ಅಪ್ರಚಾರಕ್ಕೆ ಅವಕಾಶ ನೀಡದೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಆಯ್ಕೆ ಮಾಡಬೇಕೆಂದು ಪ್ರಸಾದ್ ಮನವಿ ಮಾಡಿದರು.
ಈ ವೇಳೆ ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ಸೋಸಲೆ ಪಿಎಸಿಸಿಎಸ್ ಅಧ್ಯಕ್ಷ ಎಂ.ಪರಶಿವಮೂರ್ತಿ, ಮುಖಂಡರಾದ ಎಸ್.ಮಹೇಶ್ಕುಮಾರ್, ಕೆಂಡನಕೊಪ್ಪಲು ಕುಮಾರ, ಸೋಸಲೆ ಮಂಜುನಾಥ, ಮುತ್ತುರಾಜು ಹಾಗೂ ಇನ್ನಿತರರು ಹಾಜರಿದ್ದರು.