ಹಾನಿಗೊಳಗಾದವರಿಗೆ ಗರಿಷ್ಠ ಪರಿಹಾರ: ಖಾದರ್
Team Udayavani, Jun 23, 2018, 10:24 AM IST
ಉಳ್ಳಾಲ: ಮಳೆ ಹಾನಿಯಿಂದ ತೊಂದರೆಗೊಳಗಾಗಿರುವ ಫಲಾನು ಭವಿಗಳಿಗೆ ಗರಿಷ್ಟ ಮಟ್ಟದ ಪರಿಹಾರವನ್ನು ಶೀಘ್ರವೇ ನೀಡಲು ಪ್ರಯತ್ನಿಸಲಾಗುವುದು. ಸ್ಥಳೀಯರು, ಗ್ರಾಮ ಪಂಚಾಯತ್ ಮತ್ತು ಜಿಲ್ಲಾಡಳಿತದ ಮೂಲಕ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಸಿಡಿಲು ಬಡಿದು ಹಾನಿಗೀಡಾದ ಪಜೀರು ಗ್ರಾ.ಪಂ.ವ್ಯಾಪ್ತಿಯ ಬೇಂಗೋಡಿ ಪ್ರದೇಶದ ಸದಾಶಿವ ಶೆಟ್ಟಿ ಅವರ ಮನೆಗೆ ಮತ್ತು ಅಂಬ್ಲಿಮೊಗರು ಗುಡ್ಡ ಕುಸಿತದಿಂದ ಹಾನಿಗೀಡಾದ ಮದಕ ನಿವಾಸಿಗಳಾದ ಅಬ್ಟಾಸ್, ರಝಾಕ್ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿದ್ದು ಪರಿಹಾರ ನೀಡಲಾಗುವುದು. ಸಿಡಿಲು ಸೇರಿದಂತೆ ಎಲ್ಲ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗುವುದು. ಅಪಾಯದಲ್ಲಿರುವ ಗುಡ್ಡ ಪ್ರದೇಶಗಳಿಗೆ ಅಪಾಯವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಪಜೀರ್ ಗ್ರಾ.ಪಂ.ಅಧ್ಯಕ್ಷ ಸೀತಾರಾಮ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಂಚಾಯತ್ ಸದಸ್ಯರಾದ ಇಂತಿಯಾಝ್ ಪಾನೇಲ, ರಫೀಕ್, ಜ್ಯೋತಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಉಮ್ಮರ್ ಪಜೀರ್, ಜಲೀಲ್ ಮೋಂಟುಗೋಳಿ, ನಾಸೀರ್, ಅಂಬ್ಲಿಮೊಗರು ಗ್ರಾ.ಪಂ. ಅಧ್ಯಕ್ಷ ರಫೀಕ್ ಅಂಬ್ಲಿಮೊಗರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.