ಗುಡ್ಡ ಕುಸಿಯುವ ಭೀತಿಯಲ್ಲಿ ಕುಟುಂಬ
Team Udayavani, Jun 24, 2018, 11:40 AM IST
ಮಹಾನಗರ: ಯೆಯ್ನಾಡಿ ಕುಟುಂಬವೊಂದು ಗುಡ್ಡ ಕುಸಿಯುವ ಭೀತಿಯಿಂದಲೇ ಮೂರು ವರ್ಷಗಳಿಂದ ದಿನದೂಡುತ್ತಿದೆ. ಕೊಂಚಾಡಿ ನಿವಾಸಿಗಳಾದ ಕೃಷ್ಣ ಕುಮಾರ್, ಶ್ರೀದೇವಿ ದಂಪತಿಯ ಮನೆಯ ಹಿಂಬದಿ ಗುಡ್ಡ ಪ್ರದೇಶವಾಗಿದ್ದು, 3 ವರ್ಷ ಗಳಿಂದ ಮೇಲಿನಿಂದ ದೊಡ್ಡ ದೊಡ್ಡ ಕಲ್ಲುಗಳು ಬೀಳುತ್ತಿವೆ. ಯಾವಾಗ ಗುಡ್ಡ ಕುಸಿದು ಬೀಳುತ್ತದೆ ಎಂಬ ಭಯದಿಂದಲೇ ಈ ಕುಟುಂಬ ಜೀವನ ಸಾಗಿಸುತ್ತಿದೆ.
ಮನೆ ಮಾಲಕ ಕೃಷ್ಣ ಕುಮಾರ್ ಅಂಗವಿಕಲರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ದುಡಿಮೆಯಿಂದಲೇ ಕುಟುಂಬದ ಜೀವನ ನಿರ್ವಹಣೆಯಾಗುತ್ತಿದ್ದು, ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಮನೆಯ ಹಿಂಭಾಗದ ಗುಡ್ಡ ಪ್ರದೇಶ ಖಾಸಗಿ ಕಂಪೆನಿಗೆ ಸೇರಿದ್ದು, ಈ ಸಮಸ್ಯೆ ಬಗ್ಗೆ ಅವರಲ್ಲಿ ತಿಳಿಸಿದಾಗ ಮನೆ ಹಿಂಬದಿಯ ಮೇಲ್ಭಾಗ ಶೀಟ್ ಹಾಕಿ ಕಲ್ಲು ಬೀಳದಂತೆ ವ್ಯವಸ್ಥೆ ಮಾಡಿದ್ದರು. ಅದೀಗ ಸವೆದು ತುಂಡಾಗಿದ್ದು, ಮತ್ತೆ ದೊಡ್ಡ ದೊಡ್ಡ ಕಲ್ಲುಗಳು ಬೀಳತೊಡಗಿವೆ. ಆದರೆ ಕಂಪೆನಿ ಆ ಜಾಗವನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದು, ಸಮಸ್ಯೆಯ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕುಟುಂಬ ಅಸಾಹಯಕವಾಗಿದೆ.
ಗಮನಕ್ಕೆ ಬಂದಿಲ್ಲ
ಈ ಹಿಂದೆ ಗುಡ್ಡಕುಸಿತದ ಬಗ್ಗೆ ಮಾಹಿತಿ ಬಂದ ಕೂಡಲೇ ಮನೆಯ ಹಿಂದಿನ ಜಾಗದ ಕಟ್ಟಡದ ಎಂಜಿನಿಯರ್ಗೆ ಹೇಳಿ ಶೀಟ್ ಹಾಕಿಸುವ ಕೆಲಸ ಮಾಡಿದ್ದೆ. ಆದರೆ ಈ ಭಾರಿಯ ಘಟನೆಯ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.
– ಮಹಾಬಲ ಮಾರ್ಲ
ಸ್ಥಳೀಯ ಕಾರ್ಪೊರೇಟರ್
ಭಯದಿಂದ ದಿನದೂಡುತ್ತಿದ್ದೇವೆ
ಮನೆಯ ಮೇಲಿನ ಗುಡ್ಡದಿಂದ ದೊಡ್ಡ ದೊಡ್ಡ ಕಲ್ಲುಗಳು ಬೀಳುತ್ತಿರುವುದರಿಂದ ಹೆದರಿಕೆಯಾಗುತ್ತಿದ್ದು, ಯಾವಾಗ ಗುಡ್ಡ ಕುಸಿಯುತ್ತದೆ ಎಂಬ ಭೀತಿ ಇದೆ. ಮನೆಯ ಹಿಂಬದಿ ಕಲ್ಲಿನ ತಡೆಗೋಡೆ ಕಟ್ಟಿದಲ್ಲಿ ಮಾತ್ರ ಈ ಸಮಸ್ಯೆಯಿಂದ ಮುಕ್ತ. ಆದರೆ ನಾವು ಆರ್ಥಿಕವಾಗಿ ಅಷ್ಟು ಸುದೃಢರಾಗಿಲ್ಲ.
-ಕೃಷ್ಣಕುಮಾರ್,
ಮನೆ ಮಾಲಕ