ಮಿಯ್ಯಾರು ರಸ್ತೆ ಬದಿ ಅಪಾಯಕಾರಿ ಮರ: ಶೀಘ್ರ ತೆರವಿಗೆ ಆಗ್ರಹ
Team Udayavani, Jul 4, 2018, 2:40 AM IST
ಕಾರ್ಕಳ: ತಾಲೂಕಿನ ಮಿಯ್ನಾರು ಗ್ರಾ.ಪಂ. ವ್ಯಾಪ್ತಿಯ ಜೋಡುಕಟ್ಟೆ- ಕಾರೋಲ್ ಗುಡ್ಡೆ ರಸ್ತೆಯಲ್ಲಿ ಬೃಹತ್ ಗಾಳಿಮರವೊಂದು ರಸ್ತೆಯ ಕಡೆಗೆ ವಾಲಿದ್ದು, ಅಪಾಯದ ಅಂಚಿನಲ್ಲಿದೆ. ಪಕ್ಕದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿರುವುದರಿಂದ ಈ ಮರ ಉರುಳಿದರೆ ಭಾರೀ ಹಾನಿಯಾಗುವ ಅಪಾಯವಿದೆ. ಕಳೆದ ಜನವರಿ ತಿಂಗಳಲ್ಲಿ ಇದೇ ಭಾಗದಲ್ಲಿದ್ದ ಮರವೊಂದು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದ್ದವು. ವಯರ್ ಗಳಿಗೆ ಹಾನಿಯುಂಟಾಗಿ ಎರಡು ದಿನ ಆ ಭಾಗಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ.
ಜೋಡುಕಟ್ಟೆಯಿಂದ ಕಾರೋಲ್ ಗುಡ್ಡೆ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಹೀಗಾಗಿ ದಿನಕ್ಕೆ ಸಾವಿರಾರು ಮಂದಿ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಸಮೀಪದಲ್ಲೇ ಶಾಲೆಯಿದ್ದು, ಪುಟ್ಟ ಮಕ್ಕಳು ಅದೇ ಭಾಗದಲ್ಲಿ ಓಡಾಡುತ್ತಾರೆ. ಹೀಗಾಗಿ ಕೂಡಲೇ ಈ ಮರವನ್ನು ತೆರವುಗೊಳಿಸಬೇಕಾಗಿದೆ. ಪಂಚಾಯತ್ ನ ಮುಂಭಾಗದಲ್ಲೇ ಈ ಅಪಾಯಕಾರಿ ಮರವಿದ್ದರೂ ಸ್ಥಳೀಯ ಆಡಳಿತ ಇದುವರೆಗೆ ಮರ ತೆರವು ನಡೆಸಿಲ್ಲ ಎಂಬುದು ಸ್ಥಳೀಯರ ಆರೋಪ.