ಜಿಲ್ಲಾಡಳಿತದಿಂದ ಸಂಭ್ರಮ, ಸಡಗರದ 72ನೇ ಸ್ವಾತಂತ್ರ್ಯೋತ್ಸವ
Team Udayavani, Aug 16, 2018, 10:17 AM IST
ಮಹಾನಗರ: ನಗರಾದ್ಯಂತ 72ನೇ ಸ್ವಾತಂತ್ರ್ಯೋತ್ಸವವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದ ದಿರಿಸು ಧರಿಸಿ ಸಂಭ್ರಮಿಸಿದರು. ಶಾಲಾ, ಕಾಲೇಜು, ಆಡಳಿತ ಇಲಾಖೆ, ಸಂಘ-ಸಂಸ್ಥೆಗಳು, ರಿಕ್ಷಾ ಪಾರ್ಕ್, ಪಕ್ಷಗಳ ಕಚೇರಿ ಸಹಿತ ನಗರದೆಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ್ಯ ಸಂದೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಹುತೇಕ ವಾಹನ, ಅಂಗಡಿ, ಸಂಸ್ಥೆಗಳಲ್ಲಿ ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದವು. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಯೋಜಿಸಲಾಗಿತ್ತು.
ಆಕರ್ಷಕ ಪಥ ಸಂಚಲನ
ಪೆರೇಡ್ ಕಮಾಂಡರ್ ವಿಟ್ಠಲ್ ಶಿಂಧೆ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ರಾಜ್ಯ ಮೀಸಲು ಪೊಲೀಸ್ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ರಾಜ್ಯ ಅಗ್ನಿ ಶಾಮಕದಳ, ರಾಜ್ಯ ಅರಣ್ಯ ಇಲಾಖೆ, ಎನ್ಸಿಸಿ ಆರ್ಮಿ, ನೇವಲ್, ಏರ್ವಿಂಗ್ನ ಸೀನಿಯರ್ ತಂಡ, ಎನ್ ಸಿಸಿ ಆರ್ಮಿ ಜೂನಿಯರ್, ಎನ್ಸಿಸಿ ಏರ್ ವಿಂಗ್ ಜೂನಿಯರ್, ಎನ್ಸಿಸಿ ನೇವಲ್ ಕಾಸಿಯಾ ಸ್ಕೂಲ್, ಸ.ಪ್ರ.ದ.ಕಾ. ರಥಬೀದಿ, ಸ. ಪಿಯು ಮಹಿಳಾ ಕಾಲೇಜು ಬಲ್ಮಠ, ಆರ್ಎಸ್ಪಿ ಬಾಲಕರ ತಂಡ, ಆರ್ಎಸ್ಪಿ ಬಾಲಕಿಯರ ತಂಡ, ಸ.ಪ್ರ.ದ. ಕಾಲೇಜು ಬಲ್ಮಠ, ಮೂಡುಶೆಡ್ಡೆ ಸ. ಪ್ರೌಢಶಾಲೆಯ ಭಾರತ್ ಸೇವಾ ದಳ, ಪ್ರಸ್ಟೀಜ್ ಸ್ಕೂಲ್ ಮಂಗಳೂರು ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು. ಡಿಎಆರ್, ಕೆಎಸ್ಆರ್ಪಿ ಪೊಲೀಸ್ ವಾದ್ಯ ವೃಂದದ ಬ್ಯಾಂಡ್ ಪಥಸಂಚಲನಕ್ಕೆ ಮೆರುಗು ನೀಡಿತು.