ಬದುಕಿನ ತಾಳ ತಪ್ಪಿಸುವ ತಪ್ಪು ಗ್ರಹಿಕೆ
Team Udayavani, Aug 20, 2018, 3:28 PM IST
ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಮೊದಲ ಸ್ಥಾನವಿದ್ದರೆ, ಕಿವಿಗೆ ಎರಡನೇ ಸ್ಥಾನ. ನಾಲಗೆ, ಮೂಗು, ಚರ್ಮ ಅನಂತರದ ಸ್ಥಾನ ಪಡೆದುಕೊಂಡಿದೆ. ಸ್ಪರ್ಶ ಜ್ಞಾನಕ್ಕೆ ಚರ್ಮ ಮೀಸಲಾಗಿದ್ದರೂ ನಮ್ಮ ದೇಹಕ್ಕೆ ಗ್ರಹಿಕಾ ಸಾಮರ್ಥ್ಯ ಅಗತ್ಯ ಕೇವಲ ನೆಪ ಮಾತ್ರ. ಹೀಗಾಗಿ ಇಂದ್ರಿಯಗಳಲ್ಲಿ ಕಿವಿಗೆ ಹೆಚ್ಚಿನ ಪ್ರಾಧನ್ಯತೆ. ಭಾಷಾ ಕಲಿಕೆಯಲ್ಲಿ ಕೇಳುವಿಕೆ- ಆಲಿಸುವಿಕೆಗೆ ಮೊದಲ ಸ್ಥಾನ.
ಕಿವಿ ಎಲ್ಲವನ್ನೂ ಕೇಳುತ್ತದೆಯಾದರೂ ಎಲ್ಲವನ್ನೂ ಆಲಿಸುವುದಿಲ್ಲ. ಕೇಳಿದೆನ್ನೆಲ್ಲ ಅರ್ಥೈಸಿಕೊಳ್ಳುವುದಿಲ್ಲ, ಮನಸ್ಸಿನಲ್ಲಿಟ್ಟು ಕೊಳ್ಳುವುದಿಲ್ಲ. ಅದಕ್ಕೆ ಸೂಕ್ತವಾಗಿ ಭಾಷೆಯ ರೂಪು ಕೊಡುವುದಿಲ್ಲ. ಆದರೆ ಆಲಿಸುವುದು ಮುಖ್ಯ. ಅದಕ್ಕೆ ಮೊದಲಿನಿಂದಲೂ ಹೆತ್ತವರು, ಶಿಕ್ಷಕರು ಮಕ್ಕಳಿಗೆ ಹೇಳುವುದು ‘ಮೊದಲು ಕೇಳು (ಆಲಿಸು) ಬಳಿಕ ಮಾತನಾಡು’. ಸರಿಯಾಗಿ ಕೇಳಿದರೆ, ಸರಿಯಾಗಿ ಅರ್ಥವಾಗುತ್ತದೆ. ಸರಿಯಾಗಿ ಅರ್ಥವಾದರೆ ಅದನ್ನು ಮೌಖಿಕವಾಗಿಯೋ, ಬರವಣಿಗೆಯ ರೂಪದಲ್ಲೋ ಪ್ರಕಟಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಕಿವಿ ಸದಾ ಜಾಗೃತಾವಸ್ಥೆಯಲ್ಲಿರಬೇಕು. ಕಿವಿಯ ಬಾಹ್ಯ ಭಾಗಗಳಿಗಿಂತ ಒಳನೋಟಗಳೇ ಮುಖ್ಯ. ಏನಿದ್ದರೂ ಕಿವಿಗೂ- ನಾಲಿಗೆಗೂ ಅತಿ ನಿಕಟ ಸಂಬಂಧ ವಿದೆ.
ನಮ್ಮ ಕಿವಿ ಯಾವ ದುರ್ಗುಣಗಳಿಂದ ದೂರವಿರಬೇಕು ಎಂಬ ಪ್ರಶ್ನೆಗೆ ಹಲವು ಉತ್ತರಗಳಲ್ಲಿ ಹಿತ್ತಾಳೆ ಕಿವಿಯಾಗಿರಬಾರದು (ಕದ್ದು ಕೇಳಿ, ಚಾಡಿ ಹೇಳುವುದು) ಎಂಬ ವಾಕ್ಯ ಹೆಚ್ಚು ಒತ್ತು ನೀಡುವ ಶಬ್ದ . ಇದರಿಂದ ಸಂಬಂಧ ಸಂಪೂರ್ಣವಾಗಿ ಹಾಳಾಗುತ್ತದೆ. ಇನ್ನೊಬ್ಬರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಇನ್ನೊಬ್ಬರೆದುರು ಮಂಡಿಸುವುದರಿಂದ ವಿಶ್ವಾಸ, ನಂಬಿಕೆಗಳು ಹೆಚ್ಚು ಕಾಲ ಉಳಿಯಲಾರದು. ಇಂತವರು ಕೆಟ್ಟವರೇನೆಲ್ಲ. ಆದರೆ ಇವರನ್ನು ಯಾರೂ ನಂಬುವುದಿಲ್ಲ. ಇಂಥವರು ಆತ್ಮವಿಮರ್ಶೆ, ಆತ್ಮಾವಲೋಕನಗೈಯುವಲ್ಲಿ ಎಡವಿರುತ್ತಾರೆ. ಹೀಗಾಗಿ ಇವರು ತಮಗೆ ತಾವೇ ಹಿತ ಶತ್ರುಗಳಾಗುತ್ತಾರೆ ಮಾತ್ರವಲ್ಲ ಎಲ್ಲರಿಂದಲೂ ದೂರ ಉಳಿಯುವಂತಾಗುತ್ತದೆ.
ವ. ಉಮೇಶ ಕಾರಂತ, ಮಂಗಳೂರು