ದಕ್ಷಿಣ ಕನ್ನಡ ಇಳಿಕೆ, ಉಡುಪಿ ಜಿಲ್ಲೆಯಲ್ಲಿ ಏರಿಕೆ
Team Udayavani, Sep 5, 2018, 11:27 AM IST
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ನಾಟಿ ಬಹುತೇಕ ಮುಗಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉಡುಪಿಯಲ್ಲಿ ಏರಿಕೆಯಾಗಿದ್ದರೆ, ದ.ಕ.ದಲ್ಲಿ ಇಳಿಕೆಯಾಗಿದೆ. ಒಟ್ಟು ಗುರಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.96.5 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 80 ಸಾಧನೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ 28 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿಯಿದ್ದು, 22,087 ಹೆಕ್ಟೇರ್ ಪ್ರದೇಶದಲ್ಲಿ ನಾಟಿಯಾಗಿದೆ. ಕಳೆದ ಸಾಲಿನಲ್ಲಿ 28 ಸಾವಿರ ಹೆಕ್ಟೇರ್ ಪೈಕಿ 23 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನಾಟಿ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ 44 ಸಾವಿರ ಹೆಕ್ಟೇರ್ ಪೈಕಿ 42,547 ಹೆಕ್ಟೇರ್ ನಲ್ಲಿ ನಾಟಿ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 301 ಹೆಕ್ಟೇರ್ ಪ್ರದೇಶ ಹೆಚ್ಚು. ಹಿಂದಿನ ವರ್ಷ 44 ಸಾವಿರ ಹೆಕ್ಟೇರ್ ಪೈಕಿ 42,246 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗಿತ್ತು.
ದಕ್ಷಿಣ ಕನ್ನಡ ವಿವರ
ಮಂಗಳೂರು ತಾಲೂಕಿನ 8,500 ಹೆಕ್ಟೇರ್ ಪೈಕಿ, 5,800, ಬಂಟ್ವಾಳದ 8,500 ರಲ್ಲಿ 7,222, ಬೆಳ್ತಂಗಡಿಯ 7,700 ರಲ್ಲಿ 6.300, ಪುತ್ತೂರಿನ 2,500ರಲ್ಲಿ 2,350 ಹೆಕ್ಟೇರ್ ಹಾಗೂ ಸುಳ್ಯದ 500 ರಪೈಕಿ 412 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಉಡುಪಿ: ಕಳೆದ ಬಾರಿಗಿಂತ ಹೆಚ್ಚು
ಉಡುಪಿ ತಾಲೂಕಿನಲ್ಲಿ 17,750 ಹೆಕ್ಟೇರ್ ಪೈಕಿ 17,495, ಕುಂದಾಪುರದಲ್ಲಿ 18,250ರಲ್ಲಿ 17,252 ಹಾಗೂ ಕಾರ್ಕಳ ದಲ್ಲಿ 8 ಸಾವಿರ ಪೈಕಿ 7,800 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯಾಗಿದೆ.
ಸಹಾಯಧನದಲ್ಲಿ ಲಘು ಫೋಷಕಾಂಶಗಳು
ಕೃಷಿ ಇಲಾಖೆಯಿಂದ ರೈತರಿಗೆ ಶೇ.50ರ ಸಹಾಯಧನದಲ್ಲಿ ಲಘಪೋಷಕಾಂಶ, ಕೃಷಿಯಂತ್ರಗಳನ್ನು ವಿತರಿಸಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸುಣ್ಣ, ಜಿಂಕ್ ಸಲ್ಫೇಟ್ ಹಾಗೂ ಬೋರೆಕ್ಸ್ ಲಭ್ಯವಿದೆ.
ಗುರಿ ತಲುಪುವ ನಿರೀಕ್ಷೆ
ದಕ್ಷಿಣ ಕನ್ನಡದಲ್ಲಿ 22,087 ಹೆಕ್ಟೇರ್ ಪ್ರದೇಶದಲ್ಲಿ ನಾಟಿಯಾಗಿದ್ದು, ಒಟ್ಟು ಗುರಿಯ ಶೇ.80ರಷ್ಟು ಸಾಧಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ಗುರಿ ತಲುಪುವ ನಿರೀಕ್ಷೆಯಿದೆ.
-ಆ್ಯಂಟನಿ ಇಮ್ಯಾನುವೆಲ್,
ದ.ಕ. ಕೃಷಿ ಜಂಟಿ ನಿರ್ದೇಶಕರ
ನಾಟಿ ಹೆಚ್ಚಳ
ಉಡುಪಿ ಜಿಲ್ಲೆಯಲ್ಲಿ ಭತ್ತದ ನಾಟಿಯಲ್ಲಿ ನಿಗದಿತ ಗುರಿಯಲ್ಲಿ ಶೇ.96 ಸಾಧನೆ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಒಟ್ಟು ನಾಟಿ ಪ್ರಮಾಣದಲ್ಲಿ ಈ ಬಾರಿ ಹೆಚ್ಚಳವಾಗಿದೆ.
– ಡಾ| ಕೆಂಪೇಗೌಡ, ಉಡುಪಿ
ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು