ಕಾಡಿನಲ್ಲಿ ಚುನಾವಣೆ
Team Udayavani, Sep 27, 2018, 6:00 AM IST
ಆ ಕಾಡಿನಲ್ಲಿ ಚುನಾವಣೆಯ ಸಮಯ ಬಂದಿತ್ತು. ಹಿಂದಿನ ರಾಜ ಹಿರಿಸಿಂಹಪ್ಪ ಮತ್ತೆ ಅಧಿಕಾರ ಹಿಡಿಯಲು ತನ್ನ ಪ್ರಣಾಳಿಕೆಯಲ್ಲಿ “ಮುಕ್ತಬೇಟೆಗೆ ಅವಕಾಶ’ ಎಂಬ ಅಂಶ ಸೇರಿಸಿದ್ದ. ಇದರಿಂದ ಹಿರಿಹಿರಿ ಹಿಗ್ಗಿದ್ದ ಎಲ್ಲ ಕ್ರೂರ ಪ್ರಾಣಿಗಳೂ ಅವನನ್ನು ಬೆಂಬಲಿಸಿದ್ದವು. ಆದರೆ, ಕಾಡಿನಲ್ಲಿ ಕ್ರೂರ ಪ್ರಾಣಿಗಳ ಸಂಖ್ಯೆ ವಿರಳವಾಗಿತ್ತು. ಎದುರಾಳಿ ಪಕ್ಷದ ಅಭ್ಯರ್ಥಿಯಾಗಿ ಕತ್ತೆಯಪ್ಪ ಸ್ಪರ್ಧೆಗಿಳಿದಿದ್ದ. ಕತ್ತೆಯಲ್ಲ ಎಲ್ಲಾ ಪ್ರಾಣಿಗಳೊಂದಿಗೂ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ.
ಎಲ್ಲರೂ ಅವನಿಗೆ ಸ್ನೇಹಿತರಾಗಿದ್ದರು. ಕಾಡಿನ ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಎಂದು ಅವನು ತಿಳಿದಿದ್ದ. ಹೀಗಾಗಿ ಕಾಡಿನಲ್ಲಿ ಅವನನ್ನು ಅಪಾರ ಸಂಖ್ಯೆಯಲ್ಲಿ ಸಾಧು ಪ್ರಾಣಿಗಳೆಲ್ಲವೂ ಅವನನ್ನು ಬೆಂಬಲಿಸಿದ್ದವು. ಇದನ್ನರಿತ ಹಿರಿಸಿಂಹಪ್ಪ ಸಣ್ಣ ಪ್ರಾಣಿಗಳನ್ನು ಹೆದರಿಸಿ ಬೆದರಿಸಿ ಮತ ಹಾಕಿಸಿಕೊಂಡು ಗೆಲ್ಲುವ ತಂತ್ರ ಅನುಸರಿಸಿದ. ಆ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದ. ಅವನ ದಬ್ಟಾಳಿಕೆಗೆ ಹೆದರಿದ್ದ ಪ್ರಾಣಿಗಳೆಲ್ಲವೂ ಅನಿವಾರ್ಯವಾಗಿ ಅವನಿಗೆ ಜೈ ಎನ್ನುತ್ತ ಪ್ರಚಾರ ಮಾಡುತ್ತಿದ್ದವು. ಗೆಲ್ಲುವ ಆತ್ಮವಿಶ್ವಾಸದಿಂದ ಹಿರಿಸಿಂಹಪ್ಪ ಬೀಗುತ್ತಿದ್ದ.
ಚುನಾವಣೆಯ ಮುನ್ನಾದಿನ ಪ್ರಚಾರ ಭಾಷಣದಲ್ಲಿ “ತನ್ನನ್ನು ಗೆಲ್ಲಿಸದಿದ್ದರೆ ಒಂದೊಂದು ಪ್ರಾಣಿಯನ್ನು ಕಾಡಿನಿಂದ ಓಡಿಸುತ್ತೇನೆ. ನಂತರ ಎದುರಾಳಿ ಕತ್ತೆಯಪ್ಪನನ್ನು ಒಂದು ಕೈ ನೋಡಿಕೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದ. ಮತ ಕೇಳಬೇಕಾದ ಸಮಯದಲ್ಲಿ ಹಿರಿಸಿಂಹಪ್ಪನ ಈ ಸೊಕ್ಕಿನ ಮಾತುಗಳು ಚರ್ಚೆಗೆ ಗ್ರಾಸವಾದವು. ಆ ದಿನ ರಾತ್ರಿ ಕಾಡಿನಲ್ಲಿ ಎಲ್ಲ ಜಾತಿಯ ಪ್ರಾಣಿಗಳು ತಮ್ಮತಮ್ಮಲ್ಲೇ ಮಾತನಾಡಿಕೊಂಡವು. ಮರುದಿನ ಮತದಾನ ಪ್ರಾರಂಭವಾಯಿತು. ಎಲ್ಲ ಪ್ರಾಣಿಗಳು ಮನಸ್ಸು ಬದಲಿಸಿದವು. ಧೈರ್ಯದಿಂದ ಕತ್ತೆಯಪ್ಪನಿಗೇ ಮತ ಹಾಕಿದವು. ಕತ್ತೆಯಪ್ಪ ಕಡೆಗೂ ಗೆದ್ದುಬಿಟ್ಟ.
ಅಶೋಕ ವಿ. ಬಳ್ಳಾ