ದಾಂಪತ್ಯದಲ್ಲಿ ಪ್ರೀತಿ ಮಾಸಿದಾಗ ಏನು ಮಾಡಬೇಕು?


Team Udayavani, Sep 30, 2018, 12:30 AM IST

14.jpg

ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಸ್ವೀಡನ್‌, ಜರ್ಮನಿಯಂಥ ದೇಶಗಳಿಗೆ ಹೋಲಿಸಿದರೆ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗೆಂದಾಕ್ಷಣ ಏಷ್ಯನ್ನರಾಗಲಿ ಅಥವಾ ಮುಸ್ಲಿಂ ರಾಷ್ಟ್ರಗಳವರಾಗಲಿ ಸಂತೋಷ ಪಡುವಂತಿಲ್ಲ! ಏಕೆಂದರೆ ವಿಚ್ಛೇದನ ಪ್ರಮಾಣ ಕಡಿಮೆ ಇವೆ ಎಂದಾಕ್ಷಣ ಏಷ್ಯಾದಲ್ಲಿ ದಂಪತಿಗಳೆಲ್ಲ ಸುಖವಾಗಿದ್ದಾರೆ ಎಂದೇನೂ ಅರ್ಥವಲ್ಲ! 

ಮನಶಾಸ್ತ್ರಜ್ಞಳಾಗಿ ನನ್ನ ಈ 25 ವರ್ಷಗಳ ಪ್ರಾಕ್ಟೀಸ್‌ನಲ್ಲಿ ನಾನು ಅನೇಕ ದಂಪತಿಗಳಿಗೆ ಥೆರಪಿ ನೀಡಿದ್ದೇನೆ. ನಾನು ವೃತ್ತಿ ಜೀವನ ಆರಂಭಿಸಿದ ಸಮಯಕ್ಕೂ ಈಗಿನ ಸಮಯಕ್ಕೂ ಏನು ವ್ಯತ್ಯಾಸ ಕಾಣಿಸುತ್ತದೆ ಎಂದು ಜನರು ನನ್ನನ್ನು ಪ್ರಶ್ನಿಸುತ್ತಾರೆ. ನಾನು ಗಮನಿಸಿದ್ದೆಂದರೆ  ಹಿಂದೆ ಕೌನ್ಸೆಲಿಂಗ್‌ಗೆ ಬರುತ್ತಿದ್ದ ದಂಪತಿಗಳ ಸಂಖ್ಯೆ ಕಡಿಮೆಯಿತ್ತು. ಇಂದು ನನ್ನ ಬಳಿ ಬರುವವರಲ್ಲಿ ಬಹುತೇಕರ ಸಮಸ್ಯೆ ದಾಂಪತ್ಯಕ್ಕೆ ಸಂಬಂಧಿಸಿದ್ದೇ ಆಗಿರುತ್ತದೆ. 

ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಅದು ನೀರಸವೆನಿಸಿಬಿಡುವುದಕ್ಕೆ ಅನೇಕ ಕಾರಣಗಳಿರುತ್ತವೆ. ಗಂಡ/ಹೆಂಡತಿಯಲ್ಲೊಬ್ಬರು ತಮ್ಮ ಸಂಗಾತಿಯೆಡೆಗೆ ಲೈಂಗಿಕ ಕಾಮನೆಯನ್ನು ಕಳೆದುಕೊಂಡುಬಿಡುತ್ತಾರೆ, ದಾಂಪತ್ಯದ ಹೊರಗೆಲ್ಲೋ ಹೊಸ ಪ್ರೇಮವೊಂದು ಚಿಗುರೊಡೆದು ಬಿಟ್ಟಿರುತ್ತದೆ, ಮಕ್ಕಳೇ ಆದ್ಯತೆಯಾಗಿಬಿಡುತ್ತಾರೆ ಇತ್ಯಾದಿ. 

 ಗಮನಿಸಬೇಕಾದ ಸಂಗತಿಯೆಂದರೆ ಅನೇಕ ಸಂದರ್ಭಗಳಲ್ಲಿ ಗಂಡ-ಹೆಂಡತಿಯ ನಡುವೆ ಹೇಳಿಕೊಳ್ಳುವಂಥ ಬೃಹತ್‌ ಕಂದರವೇನೂ ಸೃಷ್ಟಿಯಾಗಿರುವುದಿಲ್ಲ. ಅಗಾಧವಾದಂಥ ಕಾರಣವೂ ಇರುವುದಿಲ್ಲ  ಆದರೂ ವಿಚ್ಛೇದನ ಪಡೆದು ದೂರವಾಗುತ್ತಾರೆ ಅಥವಾ ಜೊತೆಗಿದ್ದರೂ ದೂರವಾದಂತೆಯೇ ಬದುಕುತ್ತಾರೆ. ನಾನೋರ್ವ ಮನಶಾÏಸ್ತ್ರಜ್ಞಳಾಗಿರುವುದರಿಂದ ಇಲ್ಲಿ ತಪ್ಪು ಯಾರದ್ದು ಎಂದು ತೀರ್ಪು ನೀಡುವುದಕ್ಕೆ ಹೋಗುವುದಿಲ್ಲ.  ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕೂಡಿಸುವುದಕ್ಕೂ ಹೋಗುವುದಿಲ್ಲ. ಒಬ್ಬೊಬ್ಬರ ನಡುವಿನ ವೈಮನಸ್ಸಿಗೆ, ಬಿರುಕಿಗೆ, ದ್ವೇಷಕ್ಕೆ, ಕೋಪಕ್ಕೆ ಒಂದೊಂದು ಕಾರಣಗಳು ಇರುತ್ತವೆ. ಆದರೂ ಬಹುತೇಕ ಘಟನೆಗಳಲ್ಲಿ ಸಮಾನವಾಗಿರುವ ಅಂಶವನ್ನು ನಿಮ್ಮ ಮುಂದಿಡುತ್ತೇನೆ. 

ಸಾಮಾನ್ಯವಾಗಿ ನನ್ನ ಬಳಿ ಕೌನ್ಸೆಲಿಂಗ್‌ಗೆ ಬರುವ ದಂಪತಿಗಳನ್ನು ನಾನು ಮೊದಲು ಅಭಿನಂದಿಸುತ್ತೇನೆ. ಇದನ್ನು ಕೇಳಿ ನೀವು “ಅರೆ, ಸಂಬಂಧದಲ್ಲಿ ಬಿರುಕು ಮೂಡಿರುವ ಕಾರಣಕ್ಕೆ ಅವರು ಬಂದಿದ್ದಾರೆ, ಅವರಿಗೇಕೆ ಅಭಿನಂದನೆ?’ ಎನ್ನಬಹುದು. ಈ ಸಂಗತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿ- ಅವರು ತಮ್ಮ ಸಂಬಂಧದಲ್ಲಿ ಮೂಡಿರುವ ಬಿರುಕನ್ನು ಮುಚ್ಚಿಹಾಕುವುದಕ್ಕಾಗಿಯೇ ನನ್ನ ಬಳಿ ಬರುತ್ತಾರಲ್ಲವೇ? ಹೀಗಾಗಿ ಅವರು ಅಭಿನಂದನಾರ್ಹರು!

ಈಗ ಜಗತ್ತಿನ ಬಹುತೇಕ ದೇಶಗಳಲ್ಲಿ ಪ್ರೇಮ ವಿವಾಹಗಳೇ ನಡೆಯುತ್ತವೆ. ಮಧ್ಯಪ್ರಾಚ್ಯದ ರಾಷ್ಟ್ರಗಳು ಮತ್ತು ಜಪಾನ್‌, ಚೀನಾ, ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಶ್ರೀಲಂಕಾದಂಥ ಏಷ್ಯನ್‌ ರಾಷ್ಟ್ರಗಳಲ್ಲಿ ಈಗಲೂ ಅರೇಂಜ್‌x ಮದುವೆಗಳಿಗೇ ಹೆಚ್ಚು ಮಾನ್ಯತೆ ಇದೆ. ಗಮನಿಸಬೇಕಾದ ಸಂಗತಿಯೆಂದರೆ ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಸ್ವೀಡನ್‌, ಜರ್ಮನಿಯಂಥ ದೇಶಗಳಿಗೆ ಹೋಲಿಸಿದರೆ ಏಷ್ಯ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗೆಂದಾಕ್ಷಣ ಏಷ್ಯನ್ನರಾಗಲಿ ಅಥವಾ ಮುಸ್ಲಿಂ ರಾಷ್ಟ್ರಗಳವರಾಗಲಿ ಸಂತೋಷ ಪಡುವಂತಿಲ್ಲ! ಏಕೆಂದರೆ ವಿಚ್ಛೇದನ ಪ್ರಮಾಣ ಕಡಿಮೆ ಇವೆ ಎಂದಾಕ್ಷಣ ಏಷ್ಯಾದಲ್ಲಿ ದಂಪತಿಗಳೆಲ್ಲ ಸುಖವಾಗಿದ್ದಾರೆ ಎಂದೇನೂ ಅರ್ಥವಲ್ಲ! 

ಇತ್ತೀಚೆಗೆ ನನ್ನ ಬಳಿ ಯುವ ಜೋಡಿಯೊಂದು ಕೌನ್ಸೆಲಿಂಗ್‌ಗೆ ಬಂದಿತು. ಹುಡುಗಿಯದ್ದು ಕೂಡು ಕುಟುಂಬ. ಇಬ್ಬರೂ ಸಂಪ್ರದಾಯಸ್ತ ಕುಟುಂಬದಿಂದ ಬಂದವರು. ಎರಡೂ ಕಡೆಯವರೂ ಮಕ್ಕಳ ಬಯಕೆಗೆ ಅಡ್ಡಿಯಾಗದೇ ಖುಷಿ ಖುಷಿಯಿಂದ ಮದುವೆ ಮಾಡಿಕೊಟ್ಟಿದ್ದಾರೆ. ಈ ಯುವ ಜೋಡಿ ಹೊಸ ಜೀವನದ ಬೆನ್ನತ್ತಿ ನ್ಯೂಯಾರ್ಕಿಗೆ ಬಂದಿದೆ. ಇಬ್ಬರೂ ವಿದ್ಯಾವಂತರೇ ಆದ್ದರಿಂದ ಒಳ್ಳೆಯ ನೌಕರಿ ಸಿಕ್ಕಿದೆ. ಕೈ ತುಂಬಾ ಹಣ. ಇನ್ನೇನು ಬೇಕು ಸುಖವಾಗಿರಲು?

ಮೊದಲ ವರ್ಷ ಅದ್ಭುತವಾಗಿ ಕಳೆದಿದೆ. ಆದರೆ ಅದೇಕೋ ನಿನ್ನನ್ನು ಬಿಟ್ಟು ಬದುಕಿರಲಾರೆ ಎಂದು ಪ್ರಮಾಣ ಮಾಡಿಕೊಂಡಿದ್ದ ಜೋಡಿಯಲ್ಲಿ ನಿಧಾನಕ್ಕೆ ಒಂದೊಂದೇ ಅಸಮಾಧಾನಗಳು ಚಿಕ್ಕದಾಗಿ ತಲೆಯೆತ್ತಲಾರಂಭಿಸಿದವು. ಮದುವೆಯಾಗಿ ಮೂರು ವರ್ಷಕ್ಕೆ ಚಿಕ್ಕ ಪುಟ್ಟ ಸಂಗತಿಗಳೂ ಬೃಹತ್‌ ಜಗಳವಾಗಿ, ಕೊನೆಗೆ ಒಬ್ಬರ ಕೂಗಾಟದಲ್ಲೋ, ಅಳುವಿನಲ್ಲೋ ಪರ್ಯಾವಸಾನವಾಗಲಾರಂಭಿಸಿತು. ಏನಾಗುತ್ತಿದೆ ತಮಗೆ? ಯಾಕೆ ಜಗಳವಾಗುತ್ತಿದೆ? ಯಾಕೆ ಲೈಂಗಿಕಾಸಕ್ತಿ ಮೂಡುತ್ತಿಲ್ಲ? ಏನು ಕೊರತೆ ಉಳಿದುಬಿಟ್ಟಿದೆ? ಊಹೂಂ ಇಬ್ಬರಿಗೂ ತಿಳಿಯುತ್ತಿಲ್ಲ. ಒಂದು ದಿನ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ, ಯುವತಿ “ಐ ಕಾಂಟ್‌ ಲಿವ್‌ ವಿತ್‌ ಯೂ’ ಎಂದುಬಿಟ್ಟಿದ್ದಾಳೆ. ಇವನಿಗೆ ಜಗತ್ತೇ ಕುಸಿದಂತಾಗಿದೆ. “ನೀನಿಲ್ಲದೇ ಬದುಕಲಾರೆ’ ಎನ್ನುತ್ತಿದ್ದ ಮಡದಿಯೀಗ “ನಿನ್ನೊಂದಿಗೆ ಬದುಕಲಾರೆ’ ಎನ್ನುತ್ತಿದ್ದಾಳೆ!

ಎರಡು ದಿನ ಇಬ್ಬರೂ ಮಾತು ಬಿಟ್ಟಿದ್ದಾರೆ. ಈ ಸಂಬಂಧವನ್ನು ಕೊನೆಗೊಳಿಸಿಬಿಡುವುದೇ ಲೇಸಾ ಎಂದು ಅನೇಕ ಬಾರಿ ಯೋಚಿಸಿದ್ದಾರೆ. ಹೀಗೆ ಯೋಚಿಸಿದಾಗ ಇಬ್ಬರಿಗೂ ಅರ್ಥವಾದ ಸಂಗತಿಯೆಂದರೆ ಇಬ್ಬರಿಗೂ ಪರಸ್ಪರರ ಮೇಲೆ ದ್ವೇಷವಿಲ್ಲ, ಸಿಟ್ಟಿಲ್ಲ ಎನ್ನುವುದು! ಇದೆಂಥ ವಿರೋಧಾಭಾಸ ನೋಡಿ…ಏಕೆಂದರೆ ಒಬ್ಬರ ಮೇಲೊಬ್ಬರಿಗೆ ಸಿಟ್ಟಿಲ್ಲ ಆದರೂ ತಾರಸಿ ಕಿತ್ತುಹೋಗುವಂತೆ ಜಗಳವಾಡುತ್ತಾರೆ.

ಇಬ್ಬರೂ ಸಮಸ್ಯೆಯ ಮೂಲ ಪತ್ತೆಪಚ್ಚಿ ಸಂಬಂಧ ಸುಧಾರಿಸಿಕೊಳ್ಳಬೇಕೆಂದು ನನ್ನ ಬಳಿ ಬಂದರು. ನನ್ನೆದುರಿನ ಸೋಫಾದಲ್ಲಿ ಕುಳಿತ ಯುವತಿ ತಮ್ಮ ಕಥೆಯನ್ನು ಹೇಳುತ್ತಾ ಕಣ್ಣೀರುಹಾಕತೊಡಗಿದಳು. ಪಕ್ಕದಲ್ಲಿ ಕುಳಿತ ಅವನ ಕಣ್ಣಾಲಿಗಳೂ ಮಂಜಾಗಿದ್ದವು. “”ಯಾಕೋ ಗೊತ್ತಿಲ್ಲ, ಇವನ(ಗಂಡನ) ಮೇಲೆ ಮೊದಲಿದ್ದ ಪ್ರೀತಿಯೇ ನನಗೀಗ ಇಲ್ಲ. ಲೈಂಗಿಕಾಸಕ್ತಿಯೂ ಉಳಿದಿಲ್ಲ. ಮುಟ್ಟಲು ಹತ್ತಿರ ಬಂದರೆ ಮೈ ಎಲ್ಲಾ ಉರಿದಂತಾಗುತ್ತದೆ. ಅಹಸ್ಯವಾಗುತ್ತದೆ. ಅವನು ಮಾಡುವ ಪ್ರತಿ ಕೆಲಸವೂ ನನಗೆ ಕಿರಿಕಿರಿ ಉಂಟುಮಾಡುತ್ತದೆ” ಎಂದಳು ಹುಡುಗಿ. ಆ ಯುವಕನನ್ನು ಮಾತನಾಡಿಸಿದಾಗ ಅವನದ್ದೂ ಅದೇ ಕಥೆ. ಚಿಕ್ಕ ಪುಟ್ಟ ವಿಷಯಗಳಿಗೆ ಕಿರಿಕಿರಿಯಾಗುತ್ತದೆ, ಆಕೆಯ ಮೇಲೆ ತನಗೆ ಲೈಂಗಿಕವಾಗಿ ಆಸಕ್ತಿ ಕಡಿಮೆಯಾಗುತ್ತಿದೆ. ಒಮ್ಮೊಮ್ಮೆ ಮನಸ್ಸು ಬಂದು ಸನಿಹ ಹೋದರೆ ದೂರ ತಳ್ಳಿಬಿಡುತ್ತಾಳೆ. ಇದರಿಂದ ತನಗೆ ಸಮಾಧಾನವೇ ಇಲ್ಲದಂತಾಗಿದೆ…”ಆಕೆಗೆ ಇನ್ನೊಬ್ಬರ ಜೊತೆಗೆ ಸಂಬಂಧವಿರಬಹುದಾ?’ ಎಂಬ ಅನುಮಾನ ಬಾಧಿಸುತ್ತಿದೆ ಎಂದು ಗೋಳಾಡಿದ ಯುವಕ.  

“ಯಾಕೆ ಆ ರೀತಿಯ ಅನುಮಾನ?’ ಎಂದು ಪ್ರಶ್ನಿಸಿದೆ. ಇವಳು ಮನೆಯಲ್ಲಿದ್ದಾಗಲೂ ಫೋನ್‌ನಲ್ಲಿ ಯಾರ್ಯಾರೊಂದಿಗೋ ಹೆಚ್ಚು ಮಾತನಾಡುತ್ತಾಳೆ, ತಾನು ಅಸ್ತಿತ್ವದಲ್ಲೇ ಇಲ್ಲವೇನೋ ಎಂಬಂತೆ ವರ್ತಿಸುತ್ತಾಳೆ ಎಂದುತ್ತರಿಸಿದ. ಯುವತಿಯತ್ತ ನೋಡಿದೆ. ಪ್ರಶ್ನಿಸುವುದಕ್ಕೂ ಮುನ್ನವೇ ಅವಳೇ ಹೇಳಿಬಿಟ್ಟಳು. 

“”ಅವನು ನನ್ನ ಸಹೋದ್ಯೋಗಿ, ಹೀ ಈಸ್‌ ವೆರಿ ಸ್ಪೆಷಲ್‌. ಅವನ ಜೊತೆ ಮಾತನಾಡಿದಾಗ ನಾನು ಬಹಳ ಭಿನ್ನವಾಗಿರುತ್ತೇನೆ. ನಾನು ನಾನಾಗಿರುತ್ತೇನೆ. ಹಾಗಂತ ನಾನೇನೂ ಅವನನ್ನು ಪ್ರೀತಿಸುತ್ತಿಲ್ಲ. ಜಸ್ಟ್‌ ಕ್ಯಾಶುವಲ್‌ ಟಾಕ್‌ ಅಷ್ಟೇ. ಅದಕ್ಕೆ ಯಾಕೆ ಇವನು ಇಷ್ಟು ಅನುಮಾನ ಪಡಬೇಕು?” ಹೀಗಂದಿದ್ದೇ ತಡ ಇಬ್ಬರ ನಡುವೆ ಮತ್ತೆ ಯುದ್ಧ ಆರಂಭವಾಗಿಬಿಟ್ಟಿತು. ನೀನು ಅವತ್ತು ಹಾಗೆ ಮಾಡಿದೆ-ಹೀಗೆ ಮಾಡಿದೆ ಎಂಬ ಟೀಕಾಸ್ತ್ರಗಳನ್ನೆಲ್ಲ ಪರಸ್ಪರ ಪ್ರಯೋಗಿಸಿ ಜಗಳವನ್ನು ತಾರಕಕ್ಕೊಯ್ದರು. ಹೀಗೇ ಬಿಟ್ಟರೆ ಇದು ಬಗೆಹರಿಯುವುದಿಲ್ಲ ಎಂದು ನಾನು ಸುಮ್ಮನಿರುವಂತೆ ಇಬ್ಬರಿಗೂ ಗದರಿದೆ. ಶಾಲಾ ಮಕ್ಕಳು ಟೀಚರ್‌ಗೆ ಹೆದರುವಂತೆ ಹೆದರಿದ ಅವರು ಹಠಾತ್ತನೆ ಜಗಳ ಬಿಟ್ಟು ನನ್ನತ್ತ ನೋಡತೊಡಗಿದರು. 

ಅವರನ್ನು ನೋಡಿ ನನ್ನ ಮನಸ್ಸು ಒಂದೇ ಕ್ಷಣಕ್ಕೆ ಖುಷಿಯಾಗಿಬಿಟ್ಟಿತು. ಏಕೆಂದರೆ ಇಷ್ಟು ಹೊತ್ತು ಆ ಪಾಟಿ ಜಗಳವಾಡಿದ್ದ ಈ ದಂಪತಿ ಈಗ ತಮಗರಿವಿಲ್ಲದಂತೆ ಪರಸ್ಪರರ ಕೈ ಹಿಡಿದುಕೊಂಡು ನನ್ನನ್ನು ನೋಡುತ್ತಿದ್ದಾರೆ! ನಾನು ಅವರ ಕೈಗಳತ್ತ ತೋರಿಸಿ ಹೇಳಿದೆ-“ನೋಡಿ ಪ್ರೀತಿ ಇನ್ನೂ ಇದೆ! ನಾನು ಗದರಿದಾಕ್ಷಣ ಇಬ್ಬರೂ ಒಬ್ಬರನ್ನೊಬ್ಬರು ರಕ್ಷಿಸಲೆಂಬಂತೆ ಅಥವಾ ಇನ್ನೊಬ್ಬರಿಂದ ಸಪೋರ್ಟ್‌ ಪಡೆಯುವುದಕ್ಕೋ ಎಷ್ಟು ಗಟ್ಟಿಯಾಗಿ ಕೈ ಹಿಡಿದುಕೊಂಡಿದ್ದೀರಿ… ‘

ಈ ಥೆರಪಿಯಲ್ಲಿ ಮುಂದೇನು ನಡೆಯಿತು ಏನೇನಾಯಿತು ಎನ್ನುವುದನ್ನೆಲ್ಲ ವಿವರವಾಗಿ ನಾನು ಹೇಳುವುದಿಲ್ಲ. ಆದರೆ ಈ ದಂಪತಿಯೀಗ ಸುಖವಾಗಿರಲು, ಕಳೆದುಹೋಗಿದ್ದ ತಮ್ಮ ಸೆಕ್ಷುವಾಲಿಟಿಯನ್ನು ಹುಡುಕಲು, ಪ್ರೇಮವೆಂಬ ದೀಪ ಆರದಂತೆ ತಡೆಯಲು “ಪ್ರಯತ್ನಿಸುತ್ತಿದ್ದಾರೆ’ ಎಂದು ಮಾತ್ರ ಹೇಳಬಲ್ಲೆ. 

ಪ್ರೀತಿಯಲ್ಲಿ “ಪ್ರಯತ್ನ’ ಏಕೆ ಬೇಕು, ಅದು ತನ್ನಷ್ಟಕ್ಕೇ ತಾನೇ ಆಗುವಂಥದ್ದು ಎಂದು ನೀವು ಹೇಳಬಹುದು. ಆದರೆ ಇದು ಶುದ್ಧ ಶುಳ್ಳು. ಪ್ರೀತಿ ಎನ್ನುವುದು ಒಂದು ಪ್ರಾಕ್ಟಿಸ್‌ ಇದ್ದಂತೆ. ಪ್ರಾಕ್ಟಿಸ್‌ ಬಿಟ್ಟಿರೋ ಪ್ರೀತಿ ಮಾಸುತ್ತಾ ಹೋಗುತ್ತದೆ. ಮದುವೆಯಾದ ಹೊಸತರಲ್ಲಿ ಅಥವಾ ಅದಕ್ಕೂ ಮುನ್ನ ಸಾಮಾನ್ಯವಾಗಿ ಗಂಡ-ಹೆಂಡತಿ ಪರಸ್ಪರರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ನೋಡಿ. ಆಕೆ ಒಂದು ಹನಿ ಕಣ್ಣೀರಿಟ್ಟರೆ ಇವನು ಅವಳಿಗೆ ಭುಜವಾಗುತ್ತಾನೆ, ಇವನು ನೋವಿನಿಂದ ಏನಾದರೂ ಹೇಳಿದರೆ ಅವಳು ಕಿವಿಯಾಗುತ್ತಾಳೆ, ಪರಸ್ಪರರ ಬರ್ತಡೇ ಸನಿಹವಾದರೂ ಎಕ್ಸೆ„ಟ್‌ ಆಗುತ್ತಾರೆ. ಹೊಸ ಹೊಸ ಜಾಗಗಳನ್ನು ನೋಡುತ್ತಾರೆ…ಇತ್ಯಾದಿ, ಇತ್ಯಾದಿ. ಅಂದರೆ ಪರಸ್ಪರರ ಅಸ್ತಿತ್ವಕ್ಕೆ ಆ ಸಮಯದಲ್ಲಿ ಮಹತ್ವ ಕೊಡುತ್ತಾರೆ ಎಂದರ್ಥ. ಮನುಷ್ಯನಿಗೆ ಬೇಕಿರುವುದು ಇದು! ಬಹುತೇಕ ದಾಂಪತ್ಯಗಳು ನೀರಸವಾಗುವುದಕ್ಕೆ, ಪ್ರೇಮ ಮಾಸುವುದಕ್ಕೆ ಇಬ್ಬರಲ್ಲೊಬ್ಬರು ಇನ್ನೊಬ್ಬರ ಅಸ್ತಿತ್ವವನ್ನು ಕಡೆಗಣಿಸುತ್ತಾ ಹೋಗಲಾರಂಭಿಸುವುದು ಕಾರಣ. 

ನಿಮಗೊಂದು ಪ್ರಶ್ನೆ. ಸಾಮಾನ್ಯವಾಗಿ ನಾವು ಕೆಲಸವಿಲ್ಲದಿದ್ದರೂ ನಮ್ಮ ಗೆಳೆಯರನ್ನು ಭೇಟಿಯಾಗುವುದು ಏಕೆ? ಸತ್ಯವೇನೆಂದರೆ ನಾವು ಅವರನ್ನು ಹುಡುಕಿಕೊಂಡು ಹೋಗಿರುವುದಿಲ್ಲ, ಅವರ ಜೊತೆಗಿದ್ದಾಗ ನಾವು ಏನಾಗಿರುತ್ತೇವೋ ಆ “ನಮ್ಮನ್ನು’ ಹುಡುಕಿಕೊಂಡು ಹೋಗಿರುತ್ತೇವೆ. ತಮಾಷೆ ಸ್ವಭಾವದ ಗೆಳೆಯನಿದ್ದನೆಂದರೆ, ನಾವು ಅವನ ಬಳಿ “ನಗುವ ನಮ್ಮನ್ನು’ ಹುಡುಕಿಕೊಂಡು ಹೋಗುತ್ತೇವೆ. ಯಾವಾಗ ಅವನು ನಗಿಸುವುದನ್ನು ನಿಲ್ಲಿಸುತ್ತಾನೋ, ಆಗ ನಾವು “ನಗುವ ನಮ್ಮನ್ನೂ’ ಕಳೆದುಕೊಂಡುಬಿಡುತ್ತೇವೆ. 

ದಾಂಪತ್ಯದ ವಿಚಾರಗಳಲ್ಲೂ ಆಗುವುದು ಇಷ್ಟೆ. “ನೀನು ಬದಲಾಗಿದ್ದೀಯ, ಮೊದಲಿನಂತಿಲ್ಲ’ ಎಂದು ಗಂಡ ಹೆಂಡತಿಗೆ ಹೇಳುತ್ತಾನೆಂದರೆ “ನೀನು ಜೊತೆಗಿದ್ದಾಗ ನಾನು ಏನಾಗಿರುತ್ತಿದ್ದೆನೋ ಆ “ನನ್ನನ್ನು’ ಕಳೆದುಕೊಂಡಿದ್ದೇನೆ..ಆ ನನ್ನನ್ನು ಹುಡುಕಿಕೊಡು’ ಎನ್ನುತ್ತಿದ್ದಾನೆ ಅಂದರ್ಥ. ಅವನು ತನ್ನ ಮಡದಿಯಿಂದ ಬಯಸುವುದು, ಅವಳು ತನ್ನ ಪತಿಯಿಂದ ಬಯಸುವುದು ಇದನ್ನಷ್ಟೆ. ಇಬ್ಬರಿಗೂ ಪ್ರಯತ್ನ ಪಡುತ್ತಿಲ್ಲ! ಬಾಯಿಬಿಟ್ಟು ಹೇಳುತ್ತಿಲ್ಲ. ಇಲ್ಲಿ ಸಂವಹನ ಕೊರತೆಯೂ ಸಮಸ್ಯೆಗೆ ಕಾರಣ. 

ಆದರೆ ಈ ಕೊರತೆಯೇ ಮುಂದೆ ಕಿರಿಕಿರಿಯಾಗಿ, ಜಗಳಗಳಾಗಿ ಬದಲಾಗುತ್ತದೆ. ಕೆಲವರು ವಿಚ್ಛೇದನ ಪಡೆದು ಹೊಸ ಬದುಕನ್ನು, ಹೊಸ “ತಮ್ಮನ್ನು’ ಹುಡುಕಿಕೊಂಡು ಹೋಗುತ್ತಾರೆ. ಕೆಲವರು ಅದೇ ಸಂಬಂಧದಲ್ಲೇ ಇದ್ದು  ಆ ಮರೆಯಾಗುತ್ತಿರುವ ಪ್ರೀತಿಗೆ ಮರುಹುಟ್ಟು ನೀಡುವ “ಪ್ರಯತ್ನ’ ಪಡುತ್ತಾರೆ.

ಹೇಳಿ ನಿಮ್ಮ ದಾಂಪತ್ಯದಲ್ಲಿ ಮತ್ತೆ ಪ್ರೀತಿಯನ್ನು ಚಿಗುರಿಸಲು ನೀವು ಎಷ್ಟು ಪ್ರಯತ್ನ ಪಡುತ್ತೀರಿ? ಮದುವೆಯಾದ ಹೊಸತರಲ್ಲಿ ನಿಮ್ಮ ಸಂಗಾತಿಯೆಡೆಗೆ ಎಷ್ಟು ಕಾಳಜಿ ತೋರಿಸುತ್ತಿದ್ದಿರೋ ನೆನಪಿಸಿಕೊಳ್ಳಿ. ಮತ್ತೆ ಆ ಕಾಳಜಿಯನ್ನು, ಆ ಕುತೂಹಲವನ್ನು ನಿಮ್ಮ ಸಂಗಾತಿಯೆಡೆಗೆ ತೋರಿಸುತ್ತೀರಾ? ಮತ್ತೆ ಅಷ್ಟೇ ಸರ್‌ಪ್ರೈಸಿಂಗ್‌ ಆಗುತ್ತೀರಾ? 

ಎಸ್ತೆರ್‌ ಪರೇಲ್‌
ಬೆಲ್ಜಿಯನ್‌ ಸೈಕೋಥೆರಪಿಸ್ಟ್‌

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.