ಅಕ್ರಮ ವಿದ್ಯುತ್: ರೈತ ಸಂಘ ಪ್ರತಿಭಟನೆ
Team Udayavani, Dec 8, 2018, 11:11 AM IST
ಮೈಸೂರು: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿಜಯನಗರ 1ನೇ ಹಂತದಲ್ಲಿನ ಸೆಸ್ಕ್ ಕಾರ್ಪೊàರೇಟ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಜಯಪುರ ಹೋಬಳಿ ಕೆಂಚಲಗೂಡು ಗ್ರಾಮದ ಸರ್ಕಾರಿ ಭೂಮಿ ಸರ್ವೆ ನಂಬರ್ 14ರ ಒತ್ತುವರಿದಾರರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಈ ವಿಷಯದಲ್ಲಿ ಸೆಸ್ಕ್ ನಿಗಮ ವಿಚಕ್ಷಣಾ ದಳದವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಲೈನ್ಮ್ಯಾನ್ ಆಗಿರುವ ಮಲ್ಲೇಶ್ ಎಂಬಾತನೇ ಅಕ್ರಮ ಸಂಪರ್ಕದಾರರಿಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲು ಸಹಾಯವನ್ನು ಮಾಡುತ್ತಿದ್ದಾನೆ. ಹೀಗಾಗಿ ಕಳೆದ 14 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಲೈನ್ಮ್ಯಾನ್ ಮಲ್ಲೇಶನನ್ನು ಈ ಕೂಡಲೇ ವರ್ಗಾಯಿಸಬೇಕು.
ಸರ್ವೆ ನಂಬರ್ 134/6 ಭೂಮಿಯಲ್ಲಿ ತೆಗೆದುಕೊಂಡಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಪರಿಣಾಮ ಬೆಳೆ ನಷ್ಟವಾಗುತ್ತಿದ್ದು, ಈ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್, ಸರಗೂರು ನಟರಾಜ್, ಲೋಕೇಶ್ ರಾಜ್ ಅರಸ್, ನಾಗನಹಳ್ಳಿ ಚಂದ್ರಶೇಖರ್ ಇನ್ನಿತರರು ಭಾಗವಹಿಸಿದ್ದರು.