ಸಿಬಿಐ: ಆಯ್ಕೆ ಸಭೆ ವಿಫಲ
Team Udayavani, Jan 25, 2019, 12:30 AM IST
ಹೊಸದಿಲ್ಲಿ: ಸಿಬಿಐ ನೂತನ ನಿರ್ದೇಶಕರ ಆಯ್ಕೆಗೆ ಸಂಬಂಧಿಸಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯ ಪ್ರಮುಖ ಸಭೆ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ.
ಅರ್ಹ ಅಧಿಕಾರಿಗಳ ಹೆಸರುಗಳು ಮತ್ತು ಅವರ ವಿವರಗಳನ್ನು ಸಮಿತಿಯ ಸದಸ್ಯರಿಗೆ ನೀಡಲಾಗಿತ್ತು. ಆದರೂ, ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಮತ್ತೂಂದು ಸಭೆ ಕರೆದು, ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಧಾನಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಭಾಗಿಯಾಗಿದ್ದರು. ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳ ನಡುವೆ ಉಂಟಾದ ಕಲಹದಿಂದಾಗಿ ಜ.10ರಿಂದಲೇ ಸಿಬಿಐ ನಿರ್ದೇಶಕರ ಹುದ್ದೆ ಖಾಲಿಯಿದೆ. ಸದ್ಯ ಎಂ. ನಾಗೇಶ್ವರ್ ರಾವ್ರನ್ನು ಮಧ್ಯಂತರ ನಿರ್ದೇಶಕರಾಗಿ ನೇಮಿಸಲಾಗಿದೆ.
ವಿಚಾರಣೆಯಿಂದ ಹಿಂದಕ್ಕೆ: ಇದಕ್ಕೂ ಮೊದಲು, ನಾಗೇಶ್ವರ ರಾವ್ರನ್ನು ಸಿಬಿಐ ಮಧ್ಯಂತರ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹಿಂದೆ ಸರಿದ ಘಟನೆಯೂ ನಡೆದಿದೆ. ಇದರ ವಿಚಾರಣೆಯಿಂದ ಸಿಜೆಐ ರಂಜನ್ ಗೊಗೋಯ್ ಹಿಂದೆ ಸರಿದ ಬೆನ್ನಲ್ಲೇ ನ್ಯಾ|ಸಿಕ್ರಿ ಅವರಿಂದಲೂ ಇದೇ ನಿರ್ಧಾರ ಹೊರಬಿದ್ದಿತ್ತು.