ಕೊಣಾಜೆ ‘ಡ್ರೈವಿಂಗ್ ತರಬೇತಿ ಕೇಂದ್ರ’ದ ಕಾಮಗಾರಿಗೆ ಗ್ರಹಣ!
Team Udayavani, Feb 21, 2019, 5:21 AM IST
ಮಹಾನಗರ : ಕೊಣಾಜೆ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಡ್ರೈವಿಂಗ್ ತರಬೇತಿ ಕೇಂದ್ರದ ಕಾಮಗಾರಿಗೆ ಇದೀಗ ಗ್ರಹಣ ಹಿಡಿದಿದೆ.
2013-14ರಲ್ಲಿ ರಾಜ್ಯ ಸರಕಾರ ಘೋಷಿಸಿದ ಈ ಯೋಜನೆ ನಾಲ್ಕು ವರ್ಷ ಸಂದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳಲು ಕೇಳುತ್ತಿಲ್ಲ. ಈ ಮೂಲಕ ಸರಕಾರದ ಮಹತ್ವದ ಯೋಜನೆಯೊಂದು ವ್ಯವಸ್ಥೆಯ ಲೋಪದಿಂದ ಮೂಲೆ ಸೇರುವಂತಾಗಿದೆ.
ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ 2013-14ರ ರಾಜ್ಯ ಬಜೆಟ್ ನಲ್ಲಿ ಘೋಷಿಸಿ, ಕೇಂದ್ರದ ಕಾಮಗಾರಿಗೆ ಮಂಜೂರಾತಿ ಕೂಡ ನೀಡಲಾಗಿತ್ತು. ಆದರೆ, ವರ್ಷಗಳು ಸಂದರೂ ಕಾಮಗಾರಿಗೆ ಮಾತ್ರ ವೇಗ ದೊರಕುತ್ತಿಲ್ಲ. ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ, ಪ್ರಸ್ತುತ ಈ ಯೋಜನೆಯ ಕಾಮಗಾರಿಯು ಶೇ. 20ರಷ್ಟು ಪೂರ್ಣ ಗೊಂಡಿದ್ದು, ಉಳಿದಂತೆ ಕಾಮಗಾರಿ ಪ್ರಗತಿಯಲ್ಲಿದೆ.
ಜಾಗ ಬದಲಾವಣೆ
ಡ್ರೈವಿಂಗ್ ತರಬೇತಿ ಕೇಂದ್ರವನ್ನು ಪ್ರಾರಂಭದಲ್ಲಿ ಮುಡಿಪು ಸಮೀಪ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ ಇದು ಮಂಗಳೂರಿನಿಂದ ತುಂಬ ದೂರವಾಗುತ್ತಿದೆ ಎಂಬ ಕಾರಣ ನೀಡಿ, ಕೊಣಾಜೆ ವ್ಯಾಪ್ತಿಗೆ ಬದಲಾವಣೆ ಮಾಡಲಾಗಿತ್ತು. ಹೀಗಾಗಿ ನೂತನ ಟ್ರ್ಯಾಕ್ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಹತ್ತಿರದಲ್ಲಿ
10 ಎಕ್ರೆ ಸ್ಥಳದಲ್ಲಿ ನಿರ್ಮಾಣಗೊಳಿಸಲು ಉದ್ದೇಶಿಸಲಾಗಿದೆ. ಹೀಗೆ ಜಾಗ ಬದಲಾವಣೆ ಆಗಿ
ನೀಲ ನಕ್ಷೆ ಸಿದ್ಧಪಡಿಸುವಲ್ಲಿಯೇ ಎರಡು ವರ್ಷ ಕಳೆದಾಗಿತ್ತು.!
ಮಂಗಳೂರು ಆರ್ಟಿಒ ಕಚೇರಿಯಲ್ಲಿ ದಿನ ಒಂದಕ್ಕೆ 60 ಅಭ್ಯರ್ಥಿಗೆ ಕಲಿಕಾ ಚಾಲನಾ ಪರವಾನಿಗೆ ಮತ್ತು 70ರಿಂದ 100 ಚಾಲನಾ ಪರವಾನಿಗೆಗಳನ್ನು ಪರಿಶೀಲಿಸಲಾಗುತ್ತಿದೆ.
ಕರಾವಳಿಯ ಮೊದಲ ಹೈಟೆಕ್ ಟ್ರ್ಯಾಕ್ ಆಗುತ್ತಿತ್ತು!
‘ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’, ಚಾಲನಾ ತರಬೇತಿ ಸಂಸ್ಥೆಯನ್ನು ಸುಮಾರು 15 ಕೋ.
ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಟ್ರ್ಯಾಕ್ ನಿರ್ಮಿಸುವುದು ಉದ್ದೇಶ. ಇಲ್ಲಿ ಬೈಕ್, ಕಾರುಗಳಿಗೆ ಪ್ರತ್ಯೇಕ ಟ್ರ್ಯಾಕ್ಗಳಿರುತ್ತವೆ. “ಎಂಟು’ ಆಕಾರ, ‘ಎಸ್’ ಆಕಾರ, ಹಿಂದೆ-ಮುಂದೆ ಚಾಲನೆ ಇತ್ಯಾದಿ ವ್ಯವಸ್ಥೆಗಳಿರುತ್ತವೆ. ಮಳೆಯಿಂದ ತೊಂದರೆಯಾಗದಂತೆ ಟ್ರ್ಯಾಕ್ನಲ್ಲಿ 17 ಸೆನ್ಸಾರ್ಗಳನ್ನು ಅಳವಡಿಸಲಾಗುತ್ತದೆ. ಡ್ರೈವಿಂಗ್ ಟೆಸ್ಟ್ ಸಂದರ್ಭ ಬೈಕ್ ಅಥವಾ ಕಾರು ಸಮರ್ಪಕ ರೀತಿಯಲ್ಲಿ ಚಾಲನೆ ಮಾಡಿದ್ದರೆ, ಈ ಸೆನ್ಸಾರ್ ಕಂಪ್ಯೂಟರಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ತಕ್ಷಣದಲ್ಲೆ ಫಲಿತಾಂಶ ಕಂಪ್ಯೂಟರಿನಲ್ಲಿ ದಾಖಲಾಗುತ್ತದೆ. ಈ ಫಲಿತಾಂಶವನ್ನು ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಲವತ್ತುಗಳು ಇರುವ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣವಾದರೆ ಕರಾವಳಿಯ ಮೊದಲ ಅತ್ಯಾಧುನಿಕ ಟ್ರ್ಯಾಕ್ ಎಂಬ ಹೆಮ್ಮೆಗೆ ಪಾತ್ರವಾಗುತ್ತಿತ್ತು. ಆದರೆ, ಸರಕಾರ ಪ್ರಕಟಿಸಿದರೂ, ಸಾರಿಗೆ ಇಲಾಖೆ ಮಾತ್ರ ಇನ್ನೂ ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ನೀಡದಿರುವುದು ಗಂಭೀರ ವಿಚಾರ.
ವಾಹನ ತಪಾಸಣೆ ಕೇಂದ್ರವೂ ಬಾಕಿ!
ನಗರದಲ್ಲಿ ವಾಹನ ತಪಾಸಣೆ ಕೇಂದ್ರ ಸ್ಥಾಪನೆಯ ಬಗ್ಗೆಯೂ ಸರಕಾರ ಪ್ರಕಟ ಮಾಡಿದ್ದರೂ ಅದಕ್ಕೂ ಇನ್ನೂ ರೂಪ ದೊರೆತಿಲ್ಲ. ಇಲಾಖೆಯ ಮಾಹಿತಿ ಪ್ರಕಾರ ಈ ಯೋಜನೆಯ ವಿವರವಾದ ಅಂದಾಜುಪಟ್ಟಿ ತಯಾರಿಸುವ ಹಂತವಷ್ಟೇ ಈಗ ನಡೆಯುತ್ತಿದೆ. ಹಾಗಾದರೆ ಈ ಯೋಜನೆಯು ಮೂರ್ತ ಸ್ವರೂಪ ಪಡೆಯಲು ಇನ್ನೆಷ್ಟು ದಿನ ಕಾಯಬೇಕು ಎಂಬ ಪ್ರಶ್ನೆ ಎದುರಾಗಿದೆ.
ಡಿಸೆಂಬರ್ ಒಳಗೆ ಪೂರ್ಣ-ನಿರೀಕ್ಷೆ
ಮುಡಿಪು ಸಮೀಪ ಚಾಲನ ತರಬೇತಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿ ಸರಕಾರ ಕೆಎಸ್ಆರ್ಟಿಸಿಗೆ ಉಸ್ತುವಾರಿ ಜವಾಬ್ದಾರಿ ನೀಡಿದೆ. ಈ ಪೈಕಿ ಕಟ್ಟಡ ನಿರ್ಮಾಣ ಅರ್ಧದಷ್ಟು ಆಗಿದ್ದು, ಡಿಸೆಂಬರ್ ಒಳಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಕಾಮಗಾರಿಯ ಜವಾಬ್ದಾರಿಯನ್ನು ಸರಕಾರವೇ
ಉಸ್ತುವಾರಿ ನೋಡಿಕೊಳ್ಳುತ್ತಿದೆ.
– ಜಾನ್ ಮಿಸ್ಕಿತ್,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು
ಕಡತದಲ್ಲೇ ಇದೆ ಸುರತ್ಕಲ್ನ ‘ಟ್ರಕ್ ಟರ್ಮಿನಲ್’!
ಮಂಗಳೂರು ವ್ಯಾಪ್ತಿಯಲ್ಲಿ ಟ್ರಕ್ ಟರ್ಮಿನಲ್/ ವೇ ಸೈಡ್ ಅಮಿನಿಟೀಸ್ ನಿರ್ಮಿಸುವ ಬಗ್ಗೆ ರಾಜ್ಯ ಸರಕಾರದ ಯೋಜನೆಯಿತ್ತು. ಸದ್ಯ ಇದೂ ಕೂಡ ಕಡತದಲ್ಲಿಯೇ ಬಾಕಿಯಾಗಿದೆ. ಸುರತ್ಕಲ್ ಸಮೀಪದ ಮುಕ್ಕ ಸಸಿಹಿತ್ಲು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನನ್ನು ಇದಕ್ಕಾಗಿ ಗುರುತಿಸಲಾಗಿದೆ. ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗುತ್ತಿದೆ. ಆದರೆ, ಆ ನಂತರದ ಮುಂದಿನ ಹಂತಕ್ಕೆ ಈ ಯೋಜನೆಯೂ ಸಾಗಿಲ್ಲ.
ವಿಶೇಷ ವರದಿ