ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಪ್ರಯತ್ನ
Team Udayavani, Mar 6, 2019, 9:14 AM IST
ಪುತ್ತೂರು: ಆರೋಗ್ಯ ಸ್ನೇಹಿ, ಜನಸ್ನೇಹಿ ಆಸ್ಪತ್ರೆಯಾಗಿ ಪುತ್ತೂರು ಸರಕಾರಿ ಆಸ್ಪತ್ರೆ ಅಭಿವೃದ್ಧಿಗೊಳ್ಳುತ್ತಿದೆ. ಸರಕಾರ ಹಾಗೂ ದಾನಿಗಳ ನೆರವಿನಿಂದ ಆಸ್ಪತ್ರೆಯನ್ನು 300 ಬೆಡ್ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಮತ್ತು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನ ಮೈನ್ ರೋಡ್ ಗೈಸ್ ವಾಟ್ಸ್ ಆ್ಯಪ್ ಗ್ರೂಪ್ ವತಿಯಿಂದ ಮಂಗಳವಾರ ಸರಕಾರಿ ಆಸ್ಪತ್ರೆಗೆ ನೀಡಲಾದ 2 ವೀಲ್ ಚೇರ್ ಮತ್ತು ಆಹಾರ ಪಾತ್ರೆಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ದೀನ, ದುರ್ಬಲರ ಸೇವೆ
ಮಾಡುವುದು ನಮ್ಮ ಕರ್ತವ್ಯ. ನಮ್ಮ ಸೇವೆ ಶಾಶ್ವತ ಸೇವೆಯಾಗಬೇಕು. ಈ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಸಮಾಜಮುಖಿ ಚಿಂತನೆ ನಡೆಸುತ್ತಿರುವುದು ಅಭಿನಂದನಾರ್ಹ. ಇದು ಸಮಾಜಕ್ಕೆ ಆದರ್ಶಪ್ರಾಯ ಕೆಲಸ ಎಂದು ಮೈನ್ ರೋಡ್ ಗೈಸ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆ ಅಭಿವೃದ್ಧಿ
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಜನತೆಗೂ ಪ್ರಯೋಜನವಾಗುವಂತೆ ಪುತ್ತೂರು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡಲಾಗುತ್ತಿದೆ . ಡಯಾಲಿಸಿಸ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ವ್ಯವಸ್ಥೆ ಆಗಬೇಕಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಗೊಂಡಿದ್ದು, ಅಲ್ಲಿನ ಜಾಗ, ಬಂಧಿಖಾನೆಯ ಜಾಗ ಮತ್ತು ತಾಲೂಕು ಕಚೇರಿಯ ಜಾಗವನ್ನು ಆಸ್ಪತ್ರೆಗೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆ ನಿರ್ಮಿಸಿಕೊಟ್ಟ ಎಂಆರ್ಪಿಎಲ್ ಸಂಸ್ಥೆಗೂ ಮನವಿ ಮಾಡಿದ್ದೇನೆ. ಆರೋಗ್ಯ ಇಲಾಖೆಯ ಆಯುಕ್ತರಲ್ಲೂ ಮಾತನಾಡಿದ್ದೇನೆ. ಆಸ್ಪತ್ರೆಯ ಅಭಿವೃದ್ಧಿಗೆ ದಾನಿಗಳಿಂದಲೂ ನೆರವಿಗೆ ವಿನಂತಿಸಲಾಗುವುದು ಎಂದು ಶಾಸಕರು ಹೇಳಿದರು.
ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ, ರಕ್ಷಾ ಸಮಿತಿಯ ಸದಸ್ಯರಾದ ವಿದ್ಯಾ ಆರ್. ಗೌರಿ, ರಫೀಕ್, ರಾಜೇಶ್ ಬನ್ನೂರು, ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಜಮಾಅತ್ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್, ನಿವೃತ್ತ ಎಎಸ್ಐ ಕೃಷ್ಣ ನಾಯ್ಕ, ಗ್ರೂಪ್ ನ ಪ್ರಮುಖರಾದ ಜುಬೈರ್ ಬಪ್ಪಳಿಗೆ, ಇಕ್ಬಾಲ್, ಜಮಾಲುದ್ದೀನ್, ಸಮೀರ್ ಉಪಸ್ಥಿತರಿದ್ದರು. ವಾಟ್ಸ್ ಆ್ಯಪ್ ಗ್ರೂಪ್ನ ಕೆ.ಎನ್. ಖಾದರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ವಿಶಿಷ್ಟ ಕಾರ್ಯ
ವಾಟ್ಸ್ ಆ್ಯಪ್ ಗ್ರೂಪ್ನ ಗೌರವಾಧ್ಯಕ್ಷ, ಕಲ್ಲೇಗ ಮಸೀದಿಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ, ವಿಶಿಷ್ಟ ಮತ್ತು ಮಾದರಿ ಕಾರ್ಯಕ್ರಮವನ್ನು ಮೈನ್ ರೋಡ್ ಗೈಸ್ ವಾಟ್ಸಾಪ್ ಗ್ರೂಪ್ ಹಮ್ಮಿಕೊಂಡಿದೆ. ರೋಗಿಗಳೊಂದಿಗೆ ಕಾರುಣ್ಯದಿಂದ ವರ್ತಿಸಿದರೆ, ನೆರವಾದರೆ ಅವರಲ್ಲೇ ದೇವರನ್ನು ಕಾಣಬಹುದು ಎಂದರು.