ಲಂಚ ಸ್ವೀಕರಿಸುತ್ತಿದ್ದ ಮೆಸ್ಕಾಂ ಎಂಜಿನಿಯರ್ ಬಂಧನ
Team Udayavani, Mar 21, 2019, 1:00 AM IST
ಸುರತ್ಕಲ್: ಬೈಕಂಪಾಡಿ ಮೆಸ್ಕಾಂ ಶಾಖೆಯ ಕಿರಿಯ ಎಂಜಿನಿಯರ್ ರಾಘವ ಡಿ. ಅವರು 5 ಸಾ. ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿತೇಶ್ ಎಂಬವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕನೆಕ್ಷನ್ ಮತ್ತು ಲೋಡಿಂಗ್ ಹೆಚ್ಚಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಇದಕ್ಕಾಗಿ ರಾಘವ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜಿತೇಶ್ ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಬುಧವಾರ ಅಧಿಕಾರಿಯು ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಪ್ರಭಾರ ಡಿವೈಎಸ್ಪಿ ಗಿರೀಶ್ ಮಾರ್ಗದರ್ಶನದಲ್ಲಿ ಮಂಗಳೂರು ಎಸಿಬಿ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಮಂಜುನಾಥ್ ಅವರು ದಾಳಿ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಎಸಿಬಿ ಸಿಬಂದಿ ವರ್ಗದ ರಾಧಾಕೃಷ್ಣ, ಉಮೇಶ್, ವೈಶಾಲಿ, ರಾಧಾಕೃಷ್ಣ ಡಿ.ಎ., ನಯನಾ, ಪ್ರಶಾಂತ್, ಗಣೇಶ್, ರಾಜೇಶ್, ರಾಕೇಶ್ ಪಾಲ್ಗೊಂಡಿದ್ದರು.