ಮುಂಗಾರು ದುರ್ಬಲಗೊಳ್ಳುವ ಭೀತಿ
ಪೆಸಿಫಿಕ್ನಲ್ಲಿ "ಎಲ್ ನಿನೋ'
Team Udayavani, Mar 30, 2019, 6:07 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಪೆಸಿಫಿಕ್ ಸಾಗರದ ಮೇಲ್ಮೆ ಉಷ್ಣಾಂಶದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದು ವೇಳೆ ಇದು ಮತ್ತಷ್ಟು ಹೆಚ್ಚಳವಾದರೆ ಮುಂಬರುವ ಮುಂಗಾರಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
ಎಲ್ ನಿನೋ ಉಂಟಾದರೆ ಪರಿಣಾಮ ಏಷ್ಯಾದ ರಾಷ್ಟ್ರಗಳ ಮೇಲೆ ಬೀರಲಿದೆ. ಗರಿಷ್ಠ ತಾಪಮಾನ ಮತ್ತಷ್ಟು ಏರುವ ಸಾಧ್ಯತೆಯಿದ್ದು, ಮುಂದಿನ ಮುಂಗಾರಿನ ಮೇಲೆ ಪರಿಣಾಮ ಬೀರಬಹುದು.
ಈ ಹಿಂದೆ 2015-2016 ಮತ್ತು 2016-17ನೇ ಸಾಲಿನಲ್ಲಿ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಕಡಿಮೆಯಾಗಿತ್ತು. ಇದರ ಪರಿಣಾಮ ಕರಾವಳಿಯ ಮೇಲೂ ಆಗಿತ್ತು. ಮುಂಗಾರು ಋತುವಿನಲ್ಲಿ ಕರಾವಳಿ ಪ್ರದೇಶದಲ್ಲಿ ವಾಡಿಕೆ ಪ್ರಕಾರ 3,019 ಮಿ.ಮೀ. ಮಳೆಯಾಗಬೇಕು. ಆದರೆ 2015ರಲ್ಲಿ 2,241 ಮಿ.ಮೀ. ಮಾತ್ರ ಮಳೆಯಾಗಿತ್ತು. ಅದೇ ರೀತಿ, 2016ರಲ್ಲಿ 2,403 ಮಿ.ಮೀ. ಮಳೆಯಾಗಿದ್ದು ಮತ್ತು 2017ರಲ್ಲಿ 2,579 ಮಿ.ಮೀ. ಮಳೆಯಾಗಿತ್ತು.
ಕಳೆದ ಮುಂಗಾರಿನಲ್ಲಿಯೂ ರಾಜ್ಯದಲ್ಲಿ ಶೇ-6ರಷ್ಟು ಮಳೆ ಕೊರತೆ ಉಂಟಾಗಿದೆ. ತುಸು ಹೆಚ್ಚು ಮಳೆಯಾದದ್ದು ಕರಾವಳಿ ಜಿಲ್ಲೆಗಳಲ್ಲೇ. ದಕ್ಷಿಣ ಕನ್ನಡದಲ್ಲಿ 3351.6 ಮಿ.ಮೀ. ವಾಡಿಕೆ ಮಳೆ ಪೈಕಿ 3532.6 ಮಿ.ಮೀ.
ಮಳೆಯಾಗಿ ಶೆ.5ರಷ್ಟು ಹೆಚ್ಚಳ
ವಾಗಿತ್ತು. ಉಡುಪಿಯಲ್ಲಿ 3759 ಮಿ.ಮೀ. ವಾಡಿಕೆ ಮಳೆ ಪೈಕಿ, 4041.1 ಮಿ.ಮೀ. ಮಳೆಯಾಗಿ ಶೇ.7ರಷ್ಟು ಮಳೆ ಹೆಚ್ಚಳವಾಗಿತ್ತು. ಇನ್ನು ಯಾದಗಿರಿ ಜಿಲ್ಲೆಯಲ್ಲಿ ಅತೀ ಕಡಿಮೆ ಮುಂಗಾರು ಮಳೆಯಾಗಿದ್ದು, 610.8 ಮಿ.ಮೀ.
ವಾಡಿಕೆ ಮಳೆ ಪೈಕಿ
ಕೇವಲ 211.8 ಮಿ.ಮೀ. ಮಳೆಯಾಗಿತ್ತು.ಈಗ ಕರಾವಳಿಯಲ್ಲಿ ಬಿಸಿಲ ತಾಪ ಏರುತ್ತಿದೆ. ಮಧ್ಯಾಹ್ನ ವೇಳೆ ಮನೆಯಿಂದ ಹೊರಬರಲು ಸಾಧ್ಯವಾದಷ್ಟು ಉರಿ ಬಿಸಿಲು ಇದ್ದು, ಮಂದಿ ಬಿಸಿಲಿನ ಬೇಗೆ ತಾಳಲಾರದೆ ಹೈರಾಣಾಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಫೆಬ್ರವರಿ ಎರಡನೇ ವಾರದಿಂದ ತಾಪ ಏರತೊಡಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕರಾವಳಿ ಪ್ರದೇಶದಲ್ಲಿ ಮುಂದಿನ ಸ್ವಲ್ಪ ಕಾಲ ಇದೇ ರೀತಿಯ ಉಷ್ಣಾಂಶ ಇರಲಿದ್ದು, ಮಧ್ಯಾಹ್ನದ ವೇಳೆ ತಾಪ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಏನಿದು ಎಲ್ ನಿನೋ?
ಏಲ್ ನಿನೋ ಎಂದರೆ ಶಾಂತ ಸಾಗರದ ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ತಾಪಮಾನದಲ್ಲಾಗುವ ಹೆಚ್ಚಳ. ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಹೆಚ್ಚಾದಂತೆ ಮಳೆ ತರುವ ಮಾರುತಗಳು ಬಂಗಾಲಕೊಲ್ಲಿಯನ್ನು ಪ್ರವೇಶಿಸುವುದು ತಡವಾಗುತ್ತದೆ. ಜತೆಗೆ ಮಳೆ ಸೃಷ್ಟಿಸುವ ಮಾರುತಗಳ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಮುಂಗಾರು ಪ್ರವೇಶ ಏರುಪೇರಾಗಿ ಮಳೆ ದುರ್ಬಲಗೊಳ್ಳಬಹುದು. ಮತ್ತೂಂದೆಡೆ ಪೆಸಿಫಿಕ್ ಸಾಗರದಲ್ಲಿನ ಉಷ್ಣಾಂಶದ ಏರಿಕೆ ಇಲ್ಲಿನ ತಾಪಮಾನದಲ್ಲಿಯೂ ಏರುಪೇರಾಗುವಂತೆ ಮಾಡಬಹುದು.
ಜಾಗತಿಕ ತಾಪಮಾನ ಏರಿಕೆ
ಜಾಗತಿಕ ತಾಪಮಾನ ದಿನೇದಿನೇ ಏರುತ್ತಿದ್ದು, ಶಾಂತ ಸಾಗರದ ಮೇಲ್ಮೆ ಉಷ್ಣಾಂಶವೂ ಏರಿಕೆಯಾಗುತ್ತಿದೆ. ಮತ್ತಷ್ಟು ಏರಿದರೆ ಹವಾಮಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಲ್ ನಿನೋ ಪ್ರಭಾವದಿಂದ ದೇಶದಲ್ಲಿ ಯಾವ ರೀತಿ ಮುಂಗಾರು ಇರಲಿದೆ ಎಂಬ ಸ್ಪಷ್ಟ ಮಾಹಿತಿ ಎಪ್ರಿಲ್ ಕೊನೆಯ ವಾರದಲ್ಲಿ ಸಿಗಲಿದೆ.
– ಗವಾಸ್ಕರ್ ಸಾಂಗ,
ಕೆಎಸ್ಎನ್ಡಿಎಂಸಿ ವಿಜ್ಞಾನಿ
– ನವೀನ್ ಭಟ್ ಇಳಂತಿಲ