ಗೌಡರು ಮಕ್ಕಳಿಗೋಸ್ಕರ ಹಲವರ ಕುತ್ತಿಗೆ ಕೊಯ್ದಿದ್ದಾರೆ : ಬಸವರಾಜ್ ಆರೋಪ
Team Udayavani, Apr 6, 2019, 4:16 PM IST
ತುಮಕೂರು : ಲೋಕಸಭಾ ಚುನಾವಣಾ ಕಾವು ತೀವ್ರಗೊಂಡಿದ್ದು ಬಿಜೆಪಿ ಅಭ್ಯರ್ಥಿ ಬಸವರಾಜು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಗಂಭೀರ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜು, ದೇವೇಗೌಡರು ಮಕ್ಕಳಿಗೋಸ್ಕರ ಅವರದ್ದೇ ಜಾತಿಯವರ ಹಲವರನ್ನು ಮುಗಿಸಿದ್ದಾರೆ. ಅವರ ಕುಮ್ಮಕ್ಕಿಲ್ಲದೆ ಕೊಲೆಗಳು ನಡೆಯುತ್ತವೆಯಾ? ವೈ.ಕೆ.ರಾಮಯ್ಯ,ನಂಜೇಗೌಡರು, ಪುಟ್ಟಸ್ವಾಮಿ ಗೌಡರು ಸೇರಿ ಹಲವರನ್ನು ಮುಗಿಸಿದ್ದಾರೆ ಎಂದರು.
ದೇವೇಗೌಡರು ಅವರ ಜನಾಂಗದಲ್ಲಿ ಯಾರನ್ನೂ ಮೇಲೆ ಬಿಟ್ಟಿಲ್ಲ. ಅವರು ಹೆಗಲ ಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯವೇ ಇಲ್ಲ. ಬಹಳ ಕಷ್ಟ ಎಂದರು.
ಪರಮೇಶ್ವರ್ ಉಸ್ತುವಾರಿ ಸಚಿವನಾಗಿರುವುದಕ್ಕೆ ಅಯೋಗ್ಯ. ಅವನಿಗೆ ತುಮಕೂರಿನ ಎಬಿಸಿಡಿ ಊರುಗಳೇ ಗೊತ್ತಿಲ್ಲ ಎಂದರು.
ಇವನು ಚಡ್ಡಿ ಹಾಕುತ್ತಿದ್ದಾಗಲೇ ಅವನ ಅಪ್ಪನಿಗೆ ಸಹಾಯ ಮಾಡುತ್ತಿದ್ದೆ ಎಂದು ಸಚಿವ ಶ್ರೀನಿವಾಸ್ ಮೇಲೆ ಕಿಡಿ ಕಾರಿದರು.
ನಾನು ಮಾಡಿದ ಕೆಲಸಗಳ ಬಗ್ಗೆ ವಿವರಗಳನ್ನು ನೀಡುತ್ತೇನೆ ಎಂದು ವಿರೋಧಿಗಳ ವಿರುದ್ಧ ತೀವ್ರ ಕಿಡಿ ಕಾರಿದರು.
ತುಮಕೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಮತ್ತು ಬಸವರಾಜು ನಡುವೆ ಜಿದ್ದಾಜಿದ್ದಿನ ಕಣ ನಿರ್ಮಾಣವಾಗಿದ್ದು, ಕೆಮ ದಿನಗಳಿಂದ ನಾಯಕರು ಬಿರು ಬಿಸಿಲಿನಲ್ಲೂ ಪರಸ್ಪರ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ.