ಹೈನುಗಾರರಿಗೆ ಲಭ್ಯವಾಗದ ಸರಕಾರಿ ಪಶುವೈದ್ಯರ ಸೇವೆ
ಖಾಯಂ ವೈದ್ಯಾಧಿಕಾರಿಗಳಿಲ್ಲ, ಇದ್ದರೂ ಸುದೀರ್ಘ ರಜೆಯಲ್ಲಿ
Team Udayavani, Jun 15, 2019, 5:34 AM IST
ಬೆಳ್ಮಣ್: ಕರಾವಳಿಯಲ್ಲಿ ಹೈನುಗಾರಿಕೆ ಒಂದು ಮುಖ್ಯ ಉಪಕಸುಬು. ಆದರೆ ಅದನ್ನೇ ನಂಬಿಕೊಂಡ ಹೈನುಗಾರರು ಸರಕಾರಿ ವೈದ್ಯರ ಲಭ್ಯತೆ ಇಲ್ಲದೆ ಸಮಸ್ಯೆಗೀಡಾಗಿದ್ದಾರೆ.
92ರಲ್ಲಿ 24 ಮಂದಿ ಮಾತ್ರ ಸೇವೆಯಲ್ಲಿ!
ಕಾರ್ಕಳ ತಾಲೂಕಿನಲ್ಲಿ 92 ವೈದ್ಯಾಧಿಕಾರಿಗಳ ಅಗತ್ಯ ಇದ್ದು ಕೇವಲ 24 ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 41 ಸಹಾಯಕ ಸಿಬಂದಿ ಹಾಗೂ ಪಶು ಪರೀಕ್ಷಕರ ಅಗತ್ಯ ಇದ್ದು ಕೇವಲ 13 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.
5 ಸಾವಿರ ಜಾನುವಾರುಗಳಿಗೆ 1 ಕೇಂದ್ರ
5 ಸಾವಿರ ಜಾನುವಾರುಗಳಿಗೊಂದು ಆಸ್ಪತ್ರೆ ಬೇಕು ಎಂಬ ಮಾನದಂಡವೊಂದಿದ್ದು ಕಾರ್ಕಳದಲ್ಲಿ ಈಗಾಗಲೇ ಹೆಬ್ರಿ, ಬಜಗೋಳಿ, ಕಾರ್ಕಳದಲ್ಲಿ ಇಂತಹ ಕೇಂದ್ರಗಳಿವೆ. ನಿಟ್ಟೆಯಲ್ಲಿ ಪಶು ಚಿಕಿತ್ಸಾಲಯ ಇದೆ. ಇವೆಲ್ಲಾ ಇದ್ದರೂ ಇಲ್ಲಿ ಖಾಯಂ ಸಿಬಂದಿ, ವೈದ್ಯಾಧಿಕಾರಿಗಳ ಕೊರತೆ ಇದೆ. ಕಾರ್ಕಳ ಕೇಂದ್ರದಲ್ಲಿ 3 ಹಿರಿಯ ವೈದ್ಯಾ ಧಿಕಾರಿಗಳ ಅಗತ್ಯ ಇದ್ದರೂ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಂಡ್ಕೂರು ಆಸ್ಪತ್ರೆಗೆ ಬೀಗ!
ಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಪಶು ಆಸ್ಪತ್ರೆ ಜವಾಬ್ದಾರಿ ಹೊತ್ತ ಪಶು ಅಧಿಕಾರಿಯವರಿಗೆ ನಕ್ರೆಯಲ್ಲೂ ಜವಾಬ್ದಾರಿ ಇದೆ. ಆದರೆ ಅವರು 1 ತಿಂಗಳಿಂದ ವೈಯಕ್ತಿಕ ರಜೆಯಲ್ಲಿದ್ದಾರೆ. ಹೀಗಾಗಿ ಕೇಂದ್ರಕ್ಕೆ ಬೀಗ ಬಿದ್ದಿದೆ. ಮುಂಡ್ಕೂರು ಸಾಂದ್ರ ಶೀತಲೀಕರಣ ಘಟಕದ ವ್ಯಾಪ್ತಿಯಲ್ಲಿ 4 ಸಂಘಗಳ ಸುಮಾರು 500 ಹೈನುಗಾರರು ಹಾಲು ಪೂರೈಸುತ್ತಿದ್ದಾರೆ. ಇವರ ಜಾನುವಾರುಗಳ ಅಗತ್ಯಕ್ಕೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ.
ಒಕ್ಕೂಟದ ವೈದ್ಯರಿಗೂ ಹೊರೆ
ದ.ಕ. ಜಿಲ್ಲಾ ಹಾಲು ಒಕ್ಕೂಟದ ಕ್ಯಾಂಪ್ ಆಫೀಸ್ಗಳು ವಿರಳವಾಗಿರುವ ಹಿನ್ನೆಲೆಯಲ್ಲಿ ಆ ಕ್ಯಾಂಪ್ ಕಚೇರಿಯ ವೈದ್ಯರು ದಿನವೊಂದಕ್ಕೆ 3-4 ಪಶುಗಳ ಶುಶ್ರೂಷೆ ಮಾಡಲು ಸಾಧ್ಯ. ಹೀಗಾಗಿ ಸರಕಾರಿ ವೈದ್ಯರ ಸೇವೆ ಅಗತ್ಯವಿದೆ.
250 ಹುದ್ದೆ ಖಾಲಿ
ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸಹಾಯಕ ಸಿಬಂದಿ, ಡಿ. ಗ್ರೂಪ್ ನೌಕರರು, ಹಿರಿಯ ಅ ಧಿಕಾರಿಗಳು ಸೇರಿ ಒಟ್ಟು 357 ಹುದ್ದೆಗಳು ಮಂಜೂರಾಗಿದ್ದು 107 ಹುದ್ದೆಗಳಲ್ಲಿ ಸಿಬಂದಿ ಇದ್ದಾರೆ. ಉಳಿದಂತೆ 250 ಕುರ್ಚಿಗಳು ಖಾಲಿ ಇವೆ. ಹೀಗಿರುವಾಗ ಪಶು ಸಂಗೋಪನಾ ಇಲಾಖೆಯಿಂದ ಓರ್ವ ಸಾಮಾನ್ಯ ಹೈನುಗಾರ ಏನನ್ನು ನಿರೀಕ್ಷಿಸಬಹುದು ಎನ್ನುವುದು ಜನರ ಪ್ರಶ್ನೆ. ಉಡುಪಿ ಜಿಲ್ಲೆಯಲ್ಲಿ 2019ರ ಮೇ ವರೆಗಿನ ಮಾಹಿತಿಯಂತೆ 336 ಹಾಲು ಉತ್ಪಾದಕರ ಸಂಘಗಳು, 30,513 ಹೈನುಗಾರರು ಹೈನುಗಾರಿಕೆಯನ್ನು ಉ± ಕಸುಬನ್ನಾಗಿಸಿದ್ದಾರೆ. ಇವರ ಜಾನುವಾರುಗಳ ಕಾಯಿಲೆಗಳಿಗೆ ಶುಶ್ರೂಷೆ ನೀಡುವವರಾರು…? ಎಂಬ ಪ್ರಶ್ನೆ ಇದೆ.
ಕಾರ್ಕಳದಲ್ಲಿ
75 ಸಂಘಗಳು,
6,228 ಹೈನುಗಾರರು
ಕಾರ್ಕಳ ತಾಲೂಕಿನಾದ್ಯಂತ ಕಳೆದ ಸೆಪ್ಟಂಬರ್ವರೆಗಿನ ಮಾಹಿತಿಯಂತೆ 75 ಹಾಲು ಉತ್ಪಾದಕರ ಸಂಘಗಳಿದ್ದು 6,228 ಮಂದಿ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಇವರ ಹಸುಗಳ ಚಿಕಿತ್ಸೆಗೆ ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬಂದಿ ಕೊರತೆ ಇದೆ. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವೈದ್ಯರ ಸೇವೆ ಸಕಾಲದಲ್ಲಿ ಸಿಗದೇ ಹೋದಲ್ಲಿ ಹೈನುಗಾರರು ಆಪತ್ತು ಎದುರಿಸಬೇಕಾಗುತ್ತದೆ.
ಪರಿಹಾರ ಸಾಧ್ಯ
ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಬೇಕಾದುದು ಸರಕಾರದ ಜವಾಬ್ದಾರಿ. ಹೊಸ ಪದವೀಧರರು ಉದ್ಯೋಗದ ಆಕಾಂಕ್ಷೆಯಲ್ಲಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿ ಗಳು ಸೇರಿ ಸರಕಾರಕ್ಕೆ ಒತ್ತಡ ಹೇರಿ ಈ ಸಮಸ್ಯೆ ಪರಿಹರಿಸಬಹುದಾಗಿದೆ.
-ಡಾ| ಪ್ರಸನ್ನ, ಸಹಾಯಕ ನಿರ್ದೇಶಕರು (ಪ್ರಭಾರ) ಪಶು ಸಂಗೋಪನಾ ಇಲಾಖೆ ಉಡುಪಿ ಜಿಲ್ಲೆ
ಸಕಾಲದಲ್ಲಿ ಸೇವೆ
ಪಶು ಸಂಗೋಪನಾ ಇಲಾಖೆ ಈ ಕೊರತೆಗಳನ್ನು ನೀಗಿಸಬೇಕಾಗಿದೆ. ಅಧಿಕಾರಿಗಳು ಹಾಗೂ ಸಿಬಂದಿ ಕೊರತೆ ಇದ್ದರೂ ಸಕಾಲದಲ್ಲಿ ಸೇವೆ ನೀಡುತ್ತಿದ್ದೇವೆ.
-ಡಾ| ಪ್ರಸಾದ್,
ವೈದ್ಯಾ ಧಿಕಾರಿಗಳು ಕಾರ್ಕಳ
ಖಾಯಂ ವೈದ್ಯರು ಬೇಕು
ಗ್ರಾಮೀಣ ಭಾಗದ ಹೈನುಗಾರರಿಗೆ ಪಶು ಇಲಾಖೆಯ ಸಕಲ ಸೇವೆಯ ಜತೆ ಖಾಯಂ ಪಶು ವೈದ್ಯರ ಅಗತ್ಯ ಇದೆ.
-ಪ್ರಭಾಕರ ಶೆಟ್ಟಿ, ಮುಂಡ್ಕೂರು ಹಾ.ಉ. ಸಂಘದ ಅಧ್ಯಕ್ಷ
-ಶರತ್ ಶೆಟ್ಟಿ ಮುಂಡ್ಕೂರು