ಬೇಕಾದ್ರೆ ರಿವರ್ಸ್ ಆಪರೇಷನ್ ಮಾಡಲಿ: ಬಿಎಸ್ವೈ
Team Udayavani, Jul 3, 2019, 3:04 AM IST
ಬೆಂಗಳೂರು: “ನಾವು ಎಲ್ಲಿಯೂ “ಆಪರೇಷನ್ ಕಮಲ’ ನಡೆಸುವುದಾಗಿ ಹೇಳಿಲ್ಲ. ಕಾಂಗ್ರೆಸ್ನವರು ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ. ನಮ್ಮ ಶಾಸಕರಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಕಳೆದ ಮೂರು ತಿಂಗಳಿನಿಂದಲೂ ರಿವರ್ಸ್ ಆಪರೇಷನ್ ನಡೆಸುವುದಾಗಿ ಹೇಳುತ್ತಿದ್ದಾರೆ. ನಮ್ಮವರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಅವಿಶ್ವಾಸ ನಿಲುವಳಿ ಸೂಚನೆ ಮಂಡಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಸದನದಲ್ಲಿ ಬಿಜೆಪಿ ನಿಲುವು ಏನಿರಬೇಕು ಎಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಹೇಳಿದರು.
“ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಮೆರಿಕದಿಂದ ಬರಲಿ. ಅಮೆರಿಕ ದೂರವಿದೆಯೇ? ನಾನು ಯಾರನ್ನೂ ಸಂಪರ್ಕ ಮಾಡಿಲ್ಲ. ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ’ ಎಂದರು. ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಯಾವುದೇ “ಆಪರೇಷನ್ ಕಮಲ’ ಮಾಡುತ್ತಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈಗಾಗಲೇ ಅದಕ್ಕೆ ತೂತು ಬಿದ್ದು ಒಂದೂವರೆ ತಿಂಗಳಾಯಿತು. ಅಂತಹ ಹಡಗನ್ನು ಯಾರಾದರೂ ಏರಲು ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು.