ಹೆಬ್ಬಾವಿನ ಮೇಲೆರಗಿದ ಕಾಳಿಂಗ: ಕುಂದಾಪುರದ ಎಡಮೊಗೆಯಲ್ಲಿ ರೋಚಕ ಘಟನೆ
Team Udayavani, Sep 8, 2019, 9:22 PM IST
ಕುಂದಾಪುರ: ಇಲ್ಲಿನ ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿರುವುದು ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿದೆ.
ಬಳಿಕ ಅರಣ್ಯ ಇಲಾಖೆಯವರಿಗೆ ಕರೆ ಮಾಡಿದಾಗ ಸಿಬ್ಬಂದಿಯವರಾದ ಆನಂದ ಬಳೆಗಾರ, ಕೃಷ್ಣಮೂರ್ತಿ ಹೆಬ್ಬಾರ ಮತ್ತು ಸತೀಶ ಕುಲಾಲ ಬಂದು ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಒಟ್ಟಿನಲ್ಲಿ ದೈತ್ಯ ಹಾವುಗಳಾದ ಕಾಳಿಂಗ ಮತ್ತು ಹೆಬ್ಬಾವು ಪರಸ್ಪರ ಕಾದಾಡುತ್ತಿರುವ ದೃಶ್ಯಗಳು ಆ ಪರಿಸರದ ಜನರಲ್ಲಿ ಭಯಮಿಶ್ರಿತ ಕುತೂಹಲಕ್ಕೆ ಕಾರಣವಾದದ್ದು ಮಾತ್ರ ಸುಳ್ಳಲ್ಲ.