ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ ಪ್ರಕಟ
Team Udayavani, Oct 4, 2019, 4:18 AM IST
ಮಂಗಳೂರು: ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವೀಸಸ್ನ ಮುಖ್ಯಸ್ಥರಾದ ಟಿ.ವಿ. ಮೋಹನದಾಸ ಪೈ ಅವರ ಪ್ರಾಯೋಜಕತ್ವದ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2019’ಕ್ಕೆ ಮಂಗಳೂರಿನ ಖ್ಯಾತ ಕೊಂಕಣಿ ಲೇಖಕ ದೇವಿದಾಸ ಕದಮ್ ಅವರ “ಜಾಣವಯ’ ಕಾದಂಬರಿ ಆಯ್ಕೆಗೊಂಡಿದೆ.
ಈ ಮೊದಲು ಅವರ ‘ದಿಕಾ’ ಕೊಂಕಣಿ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿತ್ತು. ಹಾಗೆಯೇ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರ-2019ಕ್ಕೆ ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕಿ ಶಕುಂತಲಾ ಆರ್. ಕಿಣಿ ಅವರ “ಥೋಡೇ ಏಕಾಂತ’ ಕವಿತಾ ಸಂಗ್ರಹ ಆಯ್ಕೆಯಾಗಿದೆ. ಅವರು ಹಿರಿಯ ಕೊಂಕಣಿ ಕವಿ ಬಾಕಿಬಾಬ ಬೊರಕಾರ್ ಅವರ ಕೊಂಕಣಿ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಾಗೂ ಸ್ವಪ್ನ ಸಾರಸ್ವತ ಕೊಂಕಣಿ ನಾಟಕವನ್ನು ಕೊಂಕಣಿಗೆ ಅನುವಾದಿಸಿದ್ದು , ಹಲವಾರು ಕೊಂಕಣಿ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಹಿರಿಯ ಖ್ಯಾತ ಕೊಂಕಣಿ ಸಾಹಿತಿ, ಸಂಶೋಧಕ ರೋಕಿ ವಿ. ಮಿರಾಂದಾ, ಮೈಸೂರು ಅವರು “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ-2019ಕ್ಕೆ ಆಯ್ಕೆಯಾಗಿದ್ದಾರೆ. ಈ ಮೂರು ಪ್ರಶಸ್ತಿಗಳೂ ತಲಾ 1 ಲಕ್ಷ ರೂ. ನಗದು ಹಾಗೂ ಸಮ್ಮಾನ ಪತ್ರ, ಸ್ಮರಣಿಕೆ, ಶಾಲು, ಫಲಗಳನ್ನು ಒಳಗೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟನೆ ತಿಳಿಸಿದೆ.