ಹುಟ್ಟೂರಿನಲ್ಲಿ ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ
Team Udayavani, Oct 15, 2019, 3:02 AM IST
ಬಂಟ್ವಾಳ: ಅ. 11ರಂದು ನಿಧನ ಹೊಂದಿದ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು, ಬಂಟ್ವಾಳ ತಾಲೂಕಿನ ಸಜೀಪ ಮಿತ್ತಮಜಲು ಸಮೀಪದಲ್ಲಿ ಸರಕಾರಿ ಗೌರವಗಳೊಂದಿಗೆ, ಗಣ್ಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆಯಿತು.
ಸರಕಾರದ ಪರವಾಗಿ ಸಂಸದ ನಳಿನ್ಕುಮಾರ್ ಕಟೀಲು, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಪಿಎಸ್ಐಗಳಾದ ಚಂದ್ರಶೇಖರ್, ಡಾ| ಸುಧಾಕರ್ ತೋನ್ಸೆ, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಂದಾವರ ಕ್ಷೇತ್ರದ ಅಧ್ಯಕ್ಷ ಎ.ಸಿ. ಭಂಡಾರಿ ಗೌರವ ಸಲ್ಲಿಸಿದರು.
ಪೊಲೀಸ್ ವಂದನೆಯೊಂದಿಗೆ ಮೂರು ಬಾರಿ ಕುಶಾಲು ತೋಪು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಜೋಗಿ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ, ಪುತ್ರರಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಗುರುಪ್ರಸಾದ್ ಕದ್ರಿ, ಪುತ್ರಿ ಅಂಬಿಕಾ, ಸಹೋದರರಾದ ಚಂದ್ರನಾಥ್, ರಮೇಶ್ನಾಥ್, ಗಣೇಶ್ನಾಥ್, ಕುಟುಂಬ ಸದಸ್ಯರು ಭಾಗವಹಿಸಿದ್ದರು.