ಉಗ್ರವಾದ ಹತ್ತಿಕ್ಕಲು ಭಾರತ, ಜರ್ಮನಿ ಪಣ
ನವ ಭಾರತ ನಿರ್ಮಾಣಕ್ಕೆ ದೃಢ ಬಾಂಧವ್ಯ ಅಗತ್ಯ ಎಂದ ಪ್ರಧಾನಿ
Team Udayavani, Nov 2, 2019, 6:20 AM IST
ಹೊಸದಿಲ್ಲಿ: ‘ಭಯೋತ್ಪಾದನೆ, ಉಗ್ರವಾದಿತನಗಳನ್ನು ಹತ್ತಿಕ್ಕುವಲ್ಲಿ ಭಾರತ ಮತ್ತು ಜರ್ಮನಿ ದೃಢಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಎರಡೂ ದೇಶಗಳು ನೀಡುತ್ತಿರುವ ಪರಸ್ಪರ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ‘ಅಂತರ ಸರಕಾರಿ ಸಲಹಾ ಸಮಿತಿ ಸಭೆ’ಯಲ್ಲಿ ಭಾಗವಹಿಸಿದ್ದ ಮೋದಿ, ಅಲ್ಲಿ ಉಗ್ರವಾದ ದಮನಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಏರ್ಪಟ್ಟಿರುವ ಐದು ಜಂಟಿ ಘೋಷಣೆಗಳು ಹಾಗೂ 11 ಹೊಸ ಒಪ್ಪಂದಗಳಿಗೆ ಸಹಿ ಹಾಕಿದರು. 2022ರ ಹೊತ್ತಿಗೆ ನವ ಭಾರತವನ್ನು ಕಟ್ಟಲು ಭಾರತ ಕಟಿಬದ್ಧವಾಗಿದೆ.
ಹಾಗಾಗಿ, ತಂತ್ರಜ್ಞಾನವಾಗಿ, ಆರ್ಥಿಕವಾಗಿ ಉನ್ನತಿ ಸಾಧಿಸಿರುವ ಜರ್ಮನಿಯಂಥ ದೇಶಗಳೊಂದಿಗೆ ಬಾಂಧವ್ಯ ಬೆಸೆಯಲು ಭಾರತ ಸದಾ ಸಿದ್ಧವಿರುತ್ತದೆ. ಹಾಗೆಯೇ ಉಗ್ರರ ದಮನಕ್ಕೂ ಪರಸ್ಪರರ ಸಹಕಾರಕ್ಕೆ ಕೈ ಜೋಡಿಸಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಆಡಳಿತಾತ್ಮಕ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ನೀಡಲಿವೆ” ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಅನಂತರ ಮಾತನಾಡಿದ ಮರ್ಕೆಲ್, ‘ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುತ್ತಿರುವ ಭಾರತದೊಂದಿಗೆ, ಜರ್ಮನಿಯು ಮುಂಬರುವ ದಿನಗಳಲ್ಲಿ 5ಜಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳ ಬೆಳವಣಿಗೆಗೆ ಕೈ ಜೋಡಿಸಲಿದೆ” ಎಂದರು.
ದ್ವಾರಕಾ ಮೆಟ್ರೋಗೆ ಭೇಟಿ
ಪ್ರಧಾನಿ ಮೋದಿಯವರೊಂದಿಗೆ ಸಭೆಯನ್ನು ನಡೆಸಿದ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್, ವಿಮಾನ ನಿಲ್ದಾಣಕ್ಕೆ ಹೋಗುವಾಗ ಮಾರ್ಗ ಮಧ್ಯೆ ದಿಲ್ಲಿ ಮೆಟ್ರೋನ ದ್ವಾರಕಾ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಆ ನಿಲ್ದಾಣವು ಸೋಲಾರ್ ವಿದ್ಯುತ್ನಿಂದ ಕಾರ್ಯ ನಿರ್ವಹಿಸುತ್ತಿದ್ದು, ನಿಲ್ದಾಣದ ಮೇಲ್ಭಾಗದಲ್ಲಿ ಅಳವಡಿಸಲಾದ ಸೋಲಾರ್ ಪ್ಯಾನೆಲ್ಗಳಿಗೆ ಜರ್ಮನಿ ಹಣ ನೀಡಿತ್ತು. ಹಾಗಾಗಿ, ಅವರು ಭೇಟಿ ನೀಡಿದ್ದರು.