ಪರೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನೆ


Team Udayavani, Nov 19, 2019, 5:04 AM IST

cc-32

ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಬೇಕೋ ಬೇಡವೋ ಅನ್ನುವ ವಿಚಾರವೊಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ, ಒಳಗಾಗುತ್ತಲೇ ಇದೆ. ಇರಲಿ, ನನ್ನ ಪ್ರಶ್ನೆ ಇರುವುದು ಪರೀಕ್ಷೆಗಳು ಮಗುವಿನ ಕಲಿಕೆಯನ್ನು ಅತ್ಯಂತ ವಿಶ್ವಾಸಪೂರ್ಣವಾಗಿ ಮತ್ತು ವಸ್ತುನಿಷ್ಠವಾಗಿ ಅಳೆಯುವ ಮಾನದಂಡಗಳಾಗಿವೆಯೇ? ಎಂಬುದರ ಬಗ್ಗೆ. ನಾವು ಈಗ ಏಳನೇ ತರಗತಿಗೆ ಪರೀಕ್ಷೆ ಬೇಕೋ ಬೇಡವೋ ಅನ್ನುವುದಕ್ಕಿಂತ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ, ಅಂದರೆ ಅದು ಹತ್ತನೇ ತರಗತಿ ಆಗಿರಬಹುದು, ಪಿಯುಸಿ ಆಗಿರಬಹುದು ಅಥವಾ ಇನ್ನಾವುದೊ ಕಲಿಕೆಯ ಹಂತವೇ ಆಗಿರಬಹುದು ಅಲ್ಲಿ ಪರೀಕ್ಷೆಯೊಂದು ನಿಜಕ್ಕೂ ಕಲಿಕೆಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತದಾ?

ನಾವು ನಮ್ಮ ಶಿಕ್ಷಣ ಕ್ರಮದಲ್ಲಿ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಕೇವಲ ಪರೀಕ್ಷೆಯೊಂದನ್ನೇ ನೆಚ್ಚಿಕೊಂಡಿದ್ದೇವೆ (ಇತ್ತೀಚಿಗೆ ಸಿಸಿಇ ಪದ್ಧತಿ ಅಳವಡಿಸಿ ಕೊಂಡಿರುವ ನಾವು ಅಲ್ಲೂ ಕೂಡ ಪರೀಕ್ಷೆಗಳ ಮೇಲೆಯೇ ಅವಲಂಬಿತರಾಗಿದ್ದೇವೆ). ಕೇವಲ ಪರೀಕ್ಷೆ ಯೊಂದೇ ಮಗುವಿನ ಸಮಗ್ರ ಕಲಿಕೆಯನ್ನು ಅಳೆದು ಬಿಡುತ್ತದೆಯೇ? ಅದು ಸಂಪೂರ್ಣ ವಿಶ್ವಸನೀಯ ತೆಯಿಂದ ಕೂಡಿದೆಯೇ? ವಸ್ತುನಿಷ್ಠವಾಗಿದೆಯೇ? ಖಂಡಿತ ಇಲ್ಲ. ನಮ್ಮ ಪರೀಕ್ಷಾ ಕ್ರಮಗಳಾದರೂ ಹೇಗಿವೆಯೋ ಯೋಚಿಸಿ. ಮೊದಲೇ ಒಂದು ನೀಲನಕ್ಷೆ ನೀಡಲಾಗುತ್ತದೆ. ಒಂದಷ್ಟು ಪಾಠಗಳಿಗೆ ಅಂಕಗಳ ಹಂಚಿ ಕೆ ಯಾಗಿರುತ್ತದೆ. ಅದನ್ನು ಆಧರಿಸಿಯೇ ಪ್ರಶ್ನೆ ಪತ್ರಿಕೆ ತಯಾರಿಸಬೇಕು. ಮಗು ಕಂಠಪಾಠ ಮಾಡಿಯೋ, ಪಕ್ಕದಲ್ಲಿ ಕದ್ದುನೋಡಿಯೋ ಅಥವಾ ಇನ್ನಾವುದೋ ಮಾರ್ಗವನ್ನು ಬಳಸಿ ಉತ್ತರವನ್ನು ಬರೆದುಬಿಡಬಹುದು. ನಾವು ಒಂದಷ್ಟು ಅಂಕಗಳನ್ನು ಪರಿಗಣಿಸಿ ಅವನನ್ನು/ಅವಳನ್ನು ಉತ್ತೀರ್ಣ ಎಂದು ಘೋಷಿಸಿಬಿಡುತ್ತೇವೆ.

ವರ್ಷದ ಕೊನೆಯಲ್ಲೋ ಅಥವಾ ಆರಾರು ತಿಂಗಳ ಅಂತರದಲ್ಲೋ ನೀಡಲಾಗುವ 20-30 ಪ್ರಶ್ನೆಗಳನ್ನು ಆಧರಿಸಿ ಮಗು ಬುದ್ಧಿವಂತನೆಂದು ತೀರ್ಮಾನಿಸುವುದು ತೀರಾ ಹಾಸ್ಯಾಸ್ಪದ ಅನ್ನಿಸದೆ? ನಿಗದಿತ ಅವಧಿಯಲ್ಲಿ ಅಲ್ಲಿ ನೀಡಲಾಗಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರೆ ಅವನು ಮುಂದಿನ ತರಗತಿಗೆ ಅರ್ಹ ಮತ್ತು ಬುದ್ಧಿವಂತ ಎನ್ನುವುದು ಎಷ್ಟು ಸರಿ? ಅವನಿಗೆ ಅಲ್ಲಿ ನೀಡಲಾಗಿರುವ ಪ್ರಶ್ನೆಗಳಿಗಿಂತ ನೂರುಪಟ್ಟು ಗೊತ್ತಿದ್ದರೂ ಅವನು ಉತ್ತೀರ್ಣನಾಗಲು ಅಲ್ಲಿ ನೀಡಲಾಗಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಬೇಕು. ಇದು ನಮ್ಮ ಪರೀಕ್ಷೆ ಕ್ರಮದ ಹೆಗ್ಗಳಿಕೆ.

ಇಂತಹ ಮೌಲ್ಯಮಾಪನ ಕ್ರಮಗಳು ಮಕ್ಕಳ ಸೃಜನಾತ್ಮಕತೆಯನ್ನು ಹಾಳು ಮಾಡುತ್ತಿವೆಯೇ ಎಂಬ ಪ್ರಶ್ನೆ ಕಾಡುತ್ತದೆ. ಉದಾಹರಣೆಗೆ ಕನ್ನಡ ಭಾಷೆಯ ವಿಷಯವಾಗಿ ಮೌಲ್ಯಮಾಪನವನ್ನು ಕೇವಲ ಪ್ರಶ್ನೋತ್ತರದ ಮೂಲಕ ಹೇಗೆ ಮಾಡಲು ಸಾಧ್ಯ? ಹುಡುಗನೊಬ್ಬ ಗಮಕವನ್ನು ಅದ್ಭುತವಾಗಿ ಹಾಡುತ್ತಾನೆ ಎಂದಿಟ್ಟುಕೊಳ್ಳಿ ಅಥವಾ ಒಂದು ವಿಚಾರವನ್ನು ತುಂಬಾ ಸೊಗಸಾಗಿ ಕಥೆಯ ರೂಪದಲ್ಲಿ ಕಟ್ಟಿ ಹೇಳಬಲ್ಲ ಅಂದುಕೊಳ್ಳಿ. ಅದನ್ನು ಮೂರುಗಂಟೆಯ ಪ್ರಶ್ನೋತ್ತರ ಪರೀಕ್ಷೆಯಲ್ಲಿ ಹೇಗೆ ಅಳೆಯಲು ಸಾಧ್ಯ? ಒಂದು ನೀತಿ ಕಥೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು, ಆದರೆ ಆ ನೀತಿಯನ್ನು ಬದುಕಿಗೆ ಹೇಗೆ ಅಳವಡಿಸಿಕೊಂಡಿದ್ದಾನೆ ಅನ್ನೋದನ್ನು ಪರೀಕ್ಷೆಗಳು ಹೇಗೆ ಅಳೆಯುತ್ತವೆ? ಈ ನೀತಿ ಕಥೆಯ ಉದ್ದೇ ಶವೇ ಮಕ್ಕಳು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂಬುದು ತಾನೆ? ಹೀಗಿರುವಾಗ, ಉತ್ತರ ಬರೆದರೆ ಮಾತ್ರ ಅವನು ಅಳವಡಿಸಿ ಕೊಂಡಿದ್ದಾನೆ ಅಂತ ಅರ್ಥವಲ್ಲ (ಈಗೀಗ ಆಂತರಿಕ ಮೌಲ್ಯಮಾಪನದಲ್ಲಿ ಅವುಗಳನ್ನು ಪರಿಗಣಿಸುವ ಪ್ರಯತ್ನವಾಗುತ್ತಿದೆ. ಆದರೆ ಅದಕ್ಕಿರುವ ಪ್ರಾಮುಖ್ಯತೆ ತೀರಾ ಕಡಿಮೆ. ಅಲ್ಲಿನ ಅಂಕಗಳನ್ನು ಮಗುವಿನ ಉತ್ತಿರ್ಣಾಂಕಗಳಿಗೆ ಪರಿಗಣಿಸುವುದಿಲ್ಲ). “ಪ್ರಶ್ನೆ ನೋಡು-ಉತ್ತರ ಬರೆ’- ಇದಿಷ್ಟು ಮಗುವಿನ ಎಲ್ಲಾ ಕಲಿಕೆಯನ್ನು ಅಳೆದುಬಿಡುತ್ತದೆಯೇ?

ಪ್ರತಿಯೊಂದು ತರಗತಿಗೂ ಆರೇಳು ಕಲಿಕಾ ವಿಷಯಗಳಿರುತ್ತವೆ. ಮಗು ಅದರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ತೀರಾ ಕಡಿಮೆ ಅಂಕ ತೆಗೆದರೆ ಅವನನ್ನು ನಾವು ಅನುತ್ತೀರ್ಣನೆಂದು ಪರಿಗಣಿಸುತ್ತೇವೆ. ಹುಡುಗ ಗಣಿತದಲ್ಲಿ 99 ಅಂಕ ತೆಗೆದುಕೊಂಡು ಸಮಾಜ ವಿಜ್ಞಾನದಲ್ಲಿ 20 ಅಂಕ ತೆಗೆದುಕೊಂಡರೆ ಆತ ಅನುತೀರ್ಣ. ಆಗ ಆತ ಗಣಿತದಲ್ಲಿ ತೆಗೆದುಕೊಂಡು 99 ಅಂಕಗಳಿಗೆ ನಮ್ಮ ಮೌಲ್ಯಮಾಪನ ಕ್ರಮದಲ್ಲಿ ಬೆಲೆ ಲಭ್ಯವಾಗುವುದಿಲ್ಲ. ಐನ್‌ಸ್ಟೈನ್‌ ನಮ್ಮ ಮೌಲ್ಯಮಾಪನ ಕ್ರಮದಲ್ಲಿ, ಶಿಕ್ಷಣ ಕ್ರಮದಲ್ಲಿ ಇದ್ದಿದ್ದರೆ ಅವನೊಬ್ಬ ವಿಜ್ಞಾನಿಯಾಗಲು ಸಾಧ್ಯವಾಗುತ್ತಿರಲಿಲ್ಲವೇನೋ! ಅವನಿಗೆ ಗಣಿತದಲ್ಲಿ ಅದ್ಭುತ ಬುದ್ಧಿವಂತಿಕೆ ಇತ್ತು, ಆದರೆ ಉಳಿದ ವಿಷಯಗಳಲ್ಲಿ ಅವನದು ತೀರಾ ಕಳಪೆ ಸಾಧನೆ. ಅದನ್ನು ಗುರುತಿಸಿ ಗಣಿತ ವಿಷಯದಲ್ಲಿ ಮುಂದು ವರಿಯಲು ಅವಕಾಶ ಕೊಟ್ಟದ್ದು ಅವನ ಸಾಧನೆಗೆ ಮೆಟ್ಟಿಲಾಯಿತು. ನಮ್ಮ ವ್ಯವಸ್ಥೆಯಾಗಿದ್ದರೆ ಅವನನ್ನು ಫೇಲ್‌ ಎಂದು ಪರಿಗಣಿಸಿ ಒಂದು ಮೂಲೆಗೆ ಹಾಕಿ ಕೂರಿಸಿಬಿಡುತ್ತಿದ್ದೆವು.

ಒಂದೇ ತೆರನಾದ ಪ್ರಶ್ನೆ ಪತ್ರಿಕೆಯನ್ನು ನೀಡಿ ಇಡೀ ರಾಜ್ಯದ ಮಕ್ಕಳನ್ನು ಹೇಗೆ ಅಳತೆ ಮಾಡುತ್ತೀರಿ? ಕಲಿಕೆಯಲ್ಲಿ ಪ್ರತಿ ಮಗುವೂ ಭಿನ್ನ ಭಿನ್ನ. ಹೀಗೆ ಭಿನ್ನ ಭಿನ್ನ ಮಕ್ಕಳಿಗೆ, ಭಿನ್ನ ಭಿನ್ನ ಪರಿಸರದಿಂದ ಬಂದವರಿಗೆ ಹೇಗೆ ಒಂದೇ ಪ್ರಶ್ನೆಪತ್ರಿಕೆ ಸೂಕ್ತವಾಗುತ್ತದೆ? ಹೋಗಲಿ, ಬೇರೆಬೇರೆ ಪ್ರಶ್ನೆಪತ್ರಿಕೆ ಕೊಡುವುದಾದರೆ ಅದಕ್ಕೆ ಮಾನದಂಡಗಳೇನು? ನಮ್ಮ ಬಳಿ ಉತ್ತರವಿಲ್ಲ.

ಯಾವುದೋ ಒಂದು ಮಗು ಹತ್ತನೇ ತರಗತಿಯ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದೆ ಎಂದು ಭಾವಿಸೋಣ. ಅದರ ಅರ್ಥವೇನು? ಹತ್ತನೆ ತರಗತಿಯ ಭಾಷೆಯ ವಿಷಯದಲ್ಲಿ ಅವನು ಪರಿಪೂರ್ಣ ಎಂದು ಅರ್ಥ ತಾನೆ? ಹಾಗಾದರೆ ಅವನಿಗೆ ಇಡೀ ಪುಸ್ತಕದಲ್ಲಿ ಇರುವುದೆಲ್ಲಾ ಗೊತ್ತಾ? ಇಲ್ಲ. ಪರೀಕ್ಷೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಮಾತ್ರ ಅವನಿಗೆ ಚೆನ್ನಾಗಿ ಉತ್ತರ ಗೊತ್ತಿತ್ತು. ಅದರಿಂದ ಅವನು ನೂರಕ್ಕೆ ನೂರು ಅಂಕ ತೆಗೆದ. ಹಾಗಾದರೆ ಪರೀಕ್ಷೆಯು ಅವನ ಸಂಪೂರ್ಣ ಕಲಿಕೆಯನ್ನು ಅಳೆಯುವಲ್ಲಿ ಸೋತಿತು ಅಂತ ಅರ್ಥ ತಾನೆ? ಹಾಗಾದರೆ ನಾವೇಕೆ ಇಂಥ ಪರೀಕ್ಷೆಗಳನ್ನಿಟ್ಟುಕೊಂಡು ಮಕ್ಕಳ ಕಲಿಕೆಯನ್ನು ಅಳೆಯಲು ಕೂತಿದ್ದೇವೆ.

ಮೊನ್ನೆ ಏಳನೇ ತರಗತಿ ಪಬ್ಲಿಕ್‌ ಪರೀಕ್ಷೆ ಅಂದಾಗ ತುಂಬಾ ಪರ-ವಿರೋಧದ ಚರ್ಚೆಗಳಾದವು. ಮಗು ಏಳನೇ ತರಗತಿ ದಾಟಿದರೂ ಓದೋಕೆ, ಬರೆಯೋಕೆ ಬರ್ತಿಲ್ಲ ಅನ್ನುವುದೇ ಬಹುತೇಕರ ದೂರು. ಪರೀಕ್ಷೆ ಇಟ್ಟ ಮಾತ್ರಕ್ಕೆ ಕಲಿಕೆ ದೃಢಗೊಳ್ಳುತ್ತದೆ ಅನ್ನುವುದು ಸುಳ್ಳು. ಹಾಗೇನಾದರೂ ಆಗುವುದಿದ್ದರೆ ಹತ್ತನೆ ತರಗತಿ, ಪಿಯುಸಿ ದಾಟಿ ಬಂದ ಮಕ್ಕಳು ತಮ್ಮ ಪಾಂಡಿತ್ಯದಿಂದ ತುಂಬಿ ತುಳುಕಬೇಕಾಗಿತ್ತು. ಪರೀಕ್ಷೆ ಇಡುವುದರಿಂದ ಸ್ವಲ್ಪ ಮಟ್ಟಿನ ಬದಲಾವಣೆ ಕಾಣಬಹುದಾದರೂ ಶಿಕ್ಷಣದ ಉದ್ದೇಶವನ್ನು ಪರೀಕ್ಷೆ ಈಡೇರಿಸಲಾರದು. ಏಳು ವರ್ಷ ಕಲಿತ ಮಗುವಿಗೆ ಬರೆಯಲು ಬರುವುದಿಲ್ಲವೆಂದರೆ ಕಲಿಸುವಿಕೆ, ಕಲಿಯುವಿಕೆ ಮತ್ತು ಅದನ್ನು ಮೌಲ್ಯಮಾಪನ ಮಾಡುವಲ್ಲಿ ಎಲ್ಲೋ ಐಬಿದೆ ಅಂತ ಅರ್ಥ. ಅದನ್ನು ಪರೀಕ್ಷೆ ಇಡುವುದರ ಮೂಲಕ ಪೂರ್ಣ ಪ್ರಮಾಣದಲ್ಲಿ ಸರಿ ಮಾಡಲಾಗುವುದಿಲ್ಲ. ಒಂದು ವ್ಯವಸ್ಥಿತವಾದ, ವಿಶ್ವಸನೀಯವಾದ ಹಾಗೂ ವಸ್ತುನಿಷ್ಠವಾದ ಮೌಲ್ಯಮಾಪನ ಕ್ರಮವೊಂದು ಇದ್ದಾಗ ಕಲಿಸುವಿಕೆ ಮತ್ತು ಕಲಿಯುವಿಕೆ ತಾನಾಗಿಯೇ ದಾರಿ ಹಿಡಿಯುತ್ತದೆ. ಶಿಕ್ಷಕರು ಗಂಭೀರವಾಗಿ ಕಲಿಸುವಿಕೆಯಲ್ಲಿ ತೊಡಗುವಂತಹ ಸೂಕ್ತ ಮೌಲ್ಯಮಾಪನ ಕ್ರಮವೊಂದನ್ನು ನಾವು ಕಂಡುಕೊಳ್ಳಬೇಕಿದೆ. ಪರೀಕ್ಷೆ ಯಾವತ್ತೂ ಕೂಡ ಮಗುವಿನ ಸಮಗ್ರ ಕಲಿಕೆಯನ್ನು ಅಳೆಯುವ ಮಾಪನವಾಗಲಾರದು. ತುರ್ತಾಗಿ ನಾವು ಪರೀಕ್ಷೆಯ ಬದಲಿಗೆ ಒಂದೊಳ್ಳೆ ಮೌಲ್ಯಮಾಪನ ಕ್ರಮವನ್ನು ಹುಡುಕಿಕೊಳ್ಳಬೇಕಿದೆ.

ಸದಾಶಿವ ಸೊರಟೂರು

ಟಾಪ್ ನ್ಯೂಸ್

2-sslc

SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

2-sslc

SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.