ಇನ್ಮುಂದೆ ಪುರಭವನದ ಎದುರು ಪ್ರತಿಭಟನೆ ಮಾಡುವಂತಿಲ್ಲ!
Team Udayavani, Feb 29, 2020, 7:27 PM IST
ಬೆಂಗಳೂರು: ನಗರದಲ್ಲಿ ಪ್ರತಿಭಟನೆಯ ಕೇಂದ್ರ ಬಿಂದುವಾಗಿರುವ ಸರ್.ಪುಟ್ಟಣ್ಣ ಚೆಟ್ಟಿ ಪುರಭವ(ಟೌನ್ಹಾಲ್)ನ ಆವರಣದಲ್ಲಿ ಪಾಲಿಕೆಯ ಆದಾಯ ದೃಷ್ಟಿಯಿಂದ ಇನ್ನು ಮುಂದೆ ಯಾವುದೇ ಸಂಘಟನೆಗೆ ಪ್ರತಿಭಟನೆ ಮಾಡಲು ಅವಕಾಶ ನೀಡದಿರಲು ಪಾಲಿಕೆ ನಿರ್ಧರಿಸಿದೆ.
ಶನಿವಾರ ನಡೆದ ಪಾಲಿಕೆಯ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾವನೆ ಮಾಡಿದ ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಸಂಘಟನೆಗಳು”ಪುರಭವನ’ದ ಮುಂದೆ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ, ಪುರಭವನವನ್ನು ಬಾಡಿಗೆಗೆ ಪಡೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ಪಾಲಿಕೆಗೆ ಆದಾಯ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಆಯುಕ್ತರು ಪತ್ರ ಬರೆಯುವುದಕ್ಕೆ ನಿರ್ದೇಶನ ನೀಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಂ.ಗೌತಮ್ಕುಮಾರ್, ಪುರಭವನದ ಮುಂದೆ ಪ್ರತಿಭಟನೆ ನಡೆಯುತ್ತಿದ್ದು,ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅಲ್ಲದೆ,ಪ್ರತಿಭಟನೆಯಿಂದ ಪುರಭವನವನ್ನು ಬಾಡಿಗೆ ಪಡೆದುಕೊಳ್ಳಲು ಸಂಘಟನೆಗಳು ಹಿಂದೇಟು ಹಾಕುತ್ತಿವೆ. ಪುರಭವನವು ಜೆಸಿ ರಸ್ತೆ, ಎನ್ಆರ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಹೀಗಾಗಿ, ಇಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದರಿಂದ ಜನಜೀವನದ ಮೇಲೂ ಪರಿಣಾಮವಾಗುತ್ತಿದೆ ಎಂದರು.