ಬೆಂಗಳೂರು ಟೆಕ್ಕಿಗೆ ಕೊರೊನಾ : ದೇಶದಲ್ಲಿ ಒಟ್ಟು ಮೂವರಿಗೆ ಕೊರೊನಾ ವೈರಸ್ ಸೋಂಕು ದೃಢ
Team Udayavani, Mar 3, 2020, 7:10 AM IST
ಹೊಸದಿಲ್ಲಿ/ಬೆಂಗಳೂರು : ಜಗತ್ತನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಸೋಂಕು ಕರ್ನಾಟಕಕ್ಕೂ ಪ್ರವೇಶಿಸಿದ್ದು, ಅಪಾಯ ಮನೆ ಬಾಗಿಲಿಗೆ ಬಂದಂತಾಗಿದೆ. ಹೈದರಾಬಾದ್ಗೆ ತೆರಳಿದ್ದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರಿಗೆ ಸೋಂಕು ತಗಲಿರುವುದು ದೃಢ ಪಟ್ಟಿದೆ. ಇದನ್ನು ತೆಲಂಗಾಣದ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ.
ಸದ್ಯ 24 ವರ್ಷದ ಈ ಎಂಜಿನಿಯರ್ಗೆ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದೂ ಅಲ್ಲಿನ ಆರೋಗ್ಯ ಸಚಿವ ಇ.ರಾಜೇಂದರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಈ ಯುವಕ ಇತ್ತೀಚೆಗಷ್ಟೇ ದುಬಾೖಗೆ ಪ್ರವಾಸ ತೆರಳಿದ್ದರು. ಅಲ್ಲಿ ಹಾಂಕಾಂಗ್ ಮೂಲದ ಕೆಲವು ವ್ಯಕ್ತಿಗಳ ಜತೆಗೆ ಕೆಲಸ ಮಾಡಿದ್ದರು. ಅಲ್ಲಿಂದ ಬೆಂಗಳೂರಿಗೆ ಫೆ.19-20ರಂದು ವಾಪಸಾಗಿ, ಬಳಿಕ ಹೈದರಾಬಾದ್ಗೆ ಬಸ್ನಲ್ಲಿ ಪ್ರಯಾಣಿಸಿದ್ದರು.
ಹೈದರಾಬಾದ್ ತಲುಪಿದ ಅನಂತರ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜತೆಗೆ ಹೈದರಾಬಾದ್ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ರವಿವಾರ ಸಂಜೆ ಅಲ್ಲಿಂದ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಿಕೊಡಲಾಗಿದ್ದು, ಪಾಸಿಟಿವ್ ಬಂದ ಕಾರಣ ಎಚ್ಚರಿಕೆ ವಹಿಸಲಾಗಿದೆ ಎಂದು ಇ. ರಾಜೇಂದರ್ ಹೇಳಿದ್ದಾರೆ.
ಎಲ್ಲೆಡೆ ನಿಗಾ
ಈತ ದಾಖಲಾಗಿದ್ದ ಆಸ್ಪತ್ರೆ ವೈದ್ಯರು, ಅಲ್ಲಿನ ಸಿಬಂದಿ, ಅವರ ಕುಟುಂಬ ಸದಸ್ಯರು, ಯುವಕನ ಜತೆಗೆ ಬಸ್ನಲ್ಲಿ ಪ್ರಯಾಣಿಸಿದ್ದವರ ಮೇಲೆ ನಿಗಾ ವಹಿಸಲಾಗಿದೆ. ಒಟ್ಟಾರೆ 80 ಮಂದಿಯನ್ನು ಗುರುತಿಸಲಾಗಿದೆ. ಜತೆಗೆ ಈ ಯುವಕ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಂಪೆನಿ ಮತ್ತು ಕರ್ನಾಟಕ ಸರಕಾರದ ಜತೆಗೂ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಇ. ರಾಜೇಂದರ್ ತಿಳಿಸಿದ್ದಾರೆ.
ಅನಗತ್ಯ ಪ್ರಯಾಣ ಬೇಡ
ಒಟ್ಟಾರೆ ದೇಶದಲ್ಲಿ 25,738 ಮಂದಿಯನ್ನು ನಿಗಾದಲ್ಲಿ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಈ ಪೈಕಿ 37 ಮಂದಿಯಲ್ಲಿ ಕೊರೊನಾ ಲಕ್ಷಣ ಗೋಚರಿಸಿದೆ ಎಂದಿದ್ದಾರೆ. ಇದೇ ವೇಳೆ ಕೊರೊನಾ ವ್ಯಾಪಿಸಿರುವಂಥ ದಕ್ಷಿಣ ಕೊರಿಯಾ, ಇಟಲಿ, ಇರಾನ್, ಸಿಂಗಾಪುರದಂಥ ದೇಶಗಳಿಗೆ ಅನಗತ್ಯವಾಗಿ ಯಾರೂ ಪ್ರಯಾಣ ಬೆಳೆಸಬಾರದು ಎಂದೂ ಸಲಹೆ ನೀಡಿದ್ದಾರೆ.
ಮುಂಜಾಗ್ರತೆ ಇರಲಿ
ಕೊರೊನಾ ಬಗ್ಗೆ ಆತಂಕ ಬೇಡ. ಆದರೆ ರೋಗ ಲಕ್ಷಣಗಳ ಬಗ್ಗೆ ಜಾಗೃತರಾಗಿರಿ. ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಜತೆಗೆ ಜನ ಆರೋಗ್ಯ ಸಚಿವಾಲಯದ 24×7 ನಿಯಂತ್ರಣ ಕೊಠಡಿಗೆ ಕರೆ ಮಾಡಿ, ನಿಮ್ಮ ಸಂದೇಹ ನಿವಾರಿಸಿಕೊಳ್ಳಬಹುದು. ದೂರ ವಾಣಿ ಸಂಖ್ಯೆ: 011-23978046.
ಕೊರೊನಾ ಸೋಂಕಿನ ಲಕ್ಷಣಗಳೇನು?
ಸಣ್ಣ ಪ್ರಮಾಣದಲ್ಲಿ ಜ್ವರ ಮತ್ತು ಕೆಮ್ಮು. ಕೆಲವರಿಗೆ ಸುಸ್ತು, ತಲೆನೋವು, ಅತಿಸಾರ (ಭೇದಿ).
ಮುನ್ನೆಚ್ಚರಿಕೆ ಏನು?
– ಆಗಾಗ ಕೈಗಳನ್ನು ತೊಳೆದುಕೊಳ್ಳಿ.
– ಜ್ವರ ಪೀಡಿತರಿಂದ ಅಂತರ ಕಾಯ್ದುಕೊಳ್ಳಿ
– ಕಾಯಿಲೆ ಇದ್ದರೆ ಮನೆಯಲ್ಲೇ ಉಳಿಯಿರಿ
– ಸಣ್ಣಗೆ ಜ್ವರ, ಕೆಮ್ಮು ಇರುವವರು ಮಾಸ್ಕ್ ಬಳಸಿ.
– ಪದೇ ಪದೆ ಬಾಯಿ, ಮೂಗು, ಕಣ್ಣು ಮುಟ್ಟಿಕೊಳ್ಳಬೇಡಿ
– ಹಠಾತ್ ಆರೋಗ್ಯ ಏರುಪೇರಾದರೆ ಅಂಜದಿರಿ.
– ಸರಿಯಾಗಿ ಬೇಯಿಸಿ, ಸಿದ್ಧಪಡಿಸಿದ ಆಹಾರ ಸೇವಿಸಿ.
– ವಿಶೇಷವಾಗಿ ಸಿದ್ಧಪಡಿಸಲಾದ ಎನ್95 ಮಾಸ್ಕ್ಗಳನ್ನು ಬಳಸಬಹುದು
– ಪದೇ ಪದೆ ಬಳಕೆ ಮಾಡುವ ವಸ್ತುಗಳನ್ನು ಶುಚಿಗೊಳಿಸಿ ಬಳಸಿ.
ಲಸಿಕೆ ಸಿದ್ಧ
ವಿಶ್ವವನ್ನೇ ಕಂಗೆಡಿಸಿದ ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯಲಾಗಿದ್ದು, ಅದನ್ನು ಬಳಸಬಹುದು ಎಂದು ಅಮೆರಿಕದ ಬಯೋ ಟೆಕ್ನಾಲಜಿ ಸಂಸ್ಥೆ ಮೊಡೆರ್ನಾ (Moderna) ಹೇಳಿಕೊಂಡಿದೆ. ಅದಕ್ಕೆ ಎಂಆರ್ಎನ್ಎ-1273 (mRNA-1273 )ಎಂಬ ಹೆಸರಿಡಲಾಗಿದೆ. ಅದನ್ನು ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನೆ#ಕ್ಷಿಯಸ್ ಡಿಸೀಸಸ್ಗೆ ಕಳುಹಿಸಿ ಕೊಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯಯುತ ವ್ಯಕ್ತಿಗಳ ಮೇಲೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದು ಯಶಸ್ವಿಯಾದರೆ ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಸಂಪರ್ಕ ಹೊಂದಿದವರ ಪರೀಕ್ಷೆ
ಸೋಂಕುಪೀಡಿತ ವ್ಯಕ್ತಿಯು ಫೆ.19ರಿಂದ 21ರ ವರೆಗೆ ಬೆಂಗಳೂರಿನಲ್ಲಿ ವಾಸವಿದ್ದುದರಿಂದ ಆ ವೇಳೆ ಆತನ ಜತೆಗೆ ಸಂಪರ್ಕ ಹೊಂದಿದ್ದವರಿಗೆ ಸೋಂಕು ಹರಡಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಸಂಪರ್ಕದಲ್ಲಿದ್ದ ಎಲ್ಲರ ಗುರುತು ಪತ್ತೆಗೆ ಮುಂದಾಗಿದ್ದಾರೆ. ಸಂಪರ್ಕಿತರೆಲ್ಲರ ರಕ್ತ ಪರೀಕ್ಷೆ ಮಾಡುವ ಜತೆಗೆ ಆರೋಗ್ಯ ನಿಗಾ ಇರಿಸಲು ನಿರ್ಧರಿಸಲಾಗಿದೆ.
ದಿಲ್ಲಿ , ಜೈಪುರ: ಇಬ್ಬರಿಗೆ ಸೋಂಕು
ಕೇಂದ್ರ ಸರಕಾರದ ಮೂಲಗಳ ಪ್ರಕಾರ, ದಿಲ್ಲಿಯ ವ್ಯಕ್ತಿಯೊಬ್ಬರು ಮತ್ತು ರಾಜಸ್ಥಾನದ ಜೈಪುರದ ಪ್ರವಾಸಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಕ್ಕೂ ಮೊದಲು ಕೇರಳದಲ್ಲಿ 3 ಪ್ರಕರಣಗಳು ದೃಢಪಟ್ಟಿದ್ದವಾದರೂ ಅನಂತರ ಅವರು ಚೇತರಿಸಿ ಮನೆಗೆ ಮರಳಿದ್ದರು. ಈಗ ಇಟಲಿಗೆ ಪ್ರಯಾಣಿಸಿ ವಾಪಸಾಗಿರುವ ದಿಲ್ಲಿಯ ವ್ಯಕ್ತಿ ಮತ್ತು ಇಟಲಿಯಿಂದ ಜೈಪುರಕ್ಕೆ ಬಂದಿರುವ ಪ್ರವಾಸಿಯೊಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕಳೆದ ಶನಿವಾರವೇ ಇಟಲಿ ಮೂಲದ ಪ್ರವಾಸಿಗನ ರಕ್ತ ಪರೀಕ್ಷೆ ಮಾಡಿಸಲಾಗಿತ್ತಾದರೂ ನೆಗೆಟಿವ್ ಬಂದಿತ್ತು. ಆದರೆ ಅವರ ಸ್ಥಿತಿ ವಿಷಮಿಸಿದ್ದರಿಂದ ಮತ್ತೆ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಪಾಸಿಟಿವ್ ಬಂದಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವರು ಹೇಳಿದ್ದಾರೆ.
ಬೆಂಗಳೂರಲ್ಲಿ ಎರಡು ದಿನ ವಾಸ
ತೆಲಂಗಾಣದಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ರೋಗಿ ದುಬಾೖಯಿಂದ ಬೆಂಗಳೂರಿಗೆ ಬಂದು ಎರಡು ದಿನ ವಾಸವಿದ್ದ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆತ ಮೂಲತಃ ಹೈದರಾಬಾದ್ನವನಾಗಿದ್ದು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವವಹಿಸುತ್ತಿದ್ದ. ಫೆ. 19ರಂದು ದುಬಾೖಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಈತನಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗಿದೆ. ಆದರೆ ಯಾವುದೇ ರೋಗ ಲಕ್ಷಣ ಕಾಣಿಸಿರಲಿಲ್ಲ. ಹೀಗಾಗಿ ಮನೆಗೆ ತೆರಳಿದ್ದ. ಬಳಿಕ ಬೆಂಗಳೂರಿನ ಮನೆಯಲ್ಲಿ 2 ದಿನ ವಾಸವಿದ್ದು, ಅನಂತರ ಹೈದರಾಬಾದ್ಗೆ ತೆರಳಿದ್ದಾನೆ. ಅಲ್ಲಿ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿದ್ದು, ಕೊರೊನಾ ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಎರಡು ದಿನ ಇದ್ದುದರಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಷಣದಿಂದ ಹೈದರಾಬಾದ್ಗೆ ತೆರಳುವ ವರೆಗೂ ಆತ ಸಂಪರ್ಕಿಸಿರುವ ಎಲ್ಲರನ್ನೂ ಪತ್ತೆ ಮಾಡಲಾಗುತ್ತಿದ್ದು, ಕೂಡಲೇ ಅವರಿಗೆ ಸೋಂಕು ಪರೀಕ್ಷೆ ನಡೆಸಿ ನಿಗಾದಲ್ಲಿ ಇರಿಸಲಾಗುವುದು.
– ಡಾ| ಬಿ.ಜಿ. ಪ್ರಕಾಶ್ ಕುಮಾರ್
ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ
Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ
India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್ ಸ್ವೀಪ್; ಡಿಕೆಶಿ
Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ
Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ
Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ
India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್ ಸ್ವೀಪ್; ಡಿಕೆಶಿ
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು