ಅಲಹಾಬಾದ್: ಗಲಭೆಕೋರರ ವಿವರ ಪ್ರಕಟಕ್ಕೆ ಹೈಕೋರ್ಟ್ ಅಸಮಾಧಾನ
Team Udayavani, Mar 8, 2020, 10:07 PM IST
ಅಲಹಾಬಾದ್: ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ ಆರೋಪಿಗಳ ಹೆಸರು, ವಿಳಾಸ ಹಾಗೂ ಫೋಟೋಗಳನ್ನು ಬೃಹತ್ ಬ್ಯಾನರ್ನಲ್ಲಿ ಪ್ರಕಟಿಸಿರುವ ಉತ್ತರಪ್ರದೇಶ ಸರ್ಕಾರದ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದು ಸರಿಯಾದ ಕ್ರಮವಲ್ಲ ಹಾಗೂ ಇದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಹರಣ ಎಂಬುದು ಸ್ಪಷ್ಟ ಎಂದು ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಮತ್ತು ನ್ಯಾ.ರಮೇಶ್ ಸಿನ್ಹಾ ಅವರನ್ನೊಳಗೊಂಡ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು. ನಂತರ ಕೋರ್ಟ್ ಮುಂದೆ ಹಾಜರಾದ ಅಡ್ವೊಕೇಟ್ ಜನರಲ್, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡುವಂಥ ಪ್ರಕರಣಗಳು ಮುಂದೆ ನಡೆಯಬಾರದು ಎಂಬ ಕಾರಣಕ್ಕೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇಂಥ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಕೊನೆಗೆ ನ್ಯಾಯಾಲಯವು, ಈ ಕುರಿತು ಸೋಮವಾರ ಮಧ್ಯಾಹ್ನ ಆದೇಶ ಪ್ರಕಟಿಸುವುದಾಗಿ ಹೇಳಿ ವಿಚಾರಣೆ ಮುಂದೂಡಿತು.