ಕೊರೋನಾ ವೈರಸ್ ತಡೆಗೆ ಖಾಸಗಿ ವೈದ್ಯರು ಸಹಕರಿಸಿರಿ: ಜಿಲ್ಲಾಧಿಕಾರಿ ಶರತ್.ಬಿ ಮನವಿ
Team Udayavani, Mar 15, 2020, 6:04 PM IST
ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರು ಜಿಲ್ಲಾಡಳಿತ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಸಹಕಾರ ಕೋರಿದ್ದಾರೆ.
ಕಲಬುರಗಿ ನಗರದ ಪಂಡಿತ್ ರಂಗಮಂದಿರದಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಖಾಸಗಿ ವೈದ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತೆ ವಹಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವೈದ್ಯರಲ್ಲಿ ಕೊರೋನಾ ವೈರಸ್ ಬಗ್ಗೆ ಮೂಡಿದ್ದ ಆತಂಕವನ್ನು ಅವರು ಈ ಸಂದರ್ಭದಲ್ಲಿ ಅವರು ನಿವಾರಿಸಿದರು.
ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಯಾವುದೇ ರೋಗಿಯನ್ನು ಉಪಚರಿಸಬೇಕು,ಒಂದು ವೇಳೆ ಕೆಮ್ಮು,ಜ್ವರ,ಶೀತ, ಉಸಿರಾಟದ ಸಮಸ್ಯೆ ಇದ್ದು,ಶಂಕಿತ ಕರೋನಾ ವೈರಸ್ ಲಕ್ಷಣಗಳಿದ್ದಲ್ಲಿ ಮಾತ್ರ ಸಹಾಯವಾಣಿ -1047ಕ್ಕೆ ಕರೆ ಮಾಡಬೇಕು.ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದು ರೋಗಿಗಳನ್ನು ಕರೆದೊಯ್ಯಲಿದ್ದಾರೆ. ಬಳಿಕ ಅವರಿಗೆ ಕಲಬುರಗಿ ನಗರದ ಜಿಮ್ಸ್ ಮತ್ತು ಇಎಸ್ಐಸಿಯ ಕ್ವಾರಾಂಟೀನ್ ಹಾಗೂ ಐಸೋಲೇಷನ್ ವಾರ್ಡಗಳಲ್ಲಿ ದಾಖಲಿಸಿ, ನಿಗಾವಹಿಸಲಾಗುವುದು ಎಂದು ಡಿಸಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಸರ್ವೇಕ್ಷಣಾಧಿಕಾರಿ (ಎಸ್ಎಮ್ಓ) ಅನಿಲ್ ತಾಳಿಕೋಟೆ ಅವರು ಕೊರೋನಾ ವೈರಸ್ ಹೇಗೆ ಹರಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದರು.
ವೈರಸ್ ಹರಡುವುದನ್ನು ತಡೆಯಲು ಜಿಲ್ಲಾ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳು,ಐಸೋಲೇಷನ್ ಹಾಗೂ ಕ್ವಾರಾಂಟೀನ್ ವಾರ್ಡ್ ಗಳ ಸ್ಥಾಪನೆ, ಅರಿವು ಕಾರ್ಯಕ್ರಮಗಳು ಮುಂತಾದವುಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕಲಬುರಗಿ ಸಂಸದ ಉಮೇಶ್ ಜಾಧವ್, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ,ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಭಾರತೀಯ ವೈದ್ಯಕೀಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ. ಅಮೋಲ್ ಪತಂಗೆ, ಆರೋಗ್ಯ ಇಲಾಖೆಯ ಕೋವಿಡ್-19 ನೋಡಲ್ ಅಧಿಕಾರಿ ಡಾ.ಸಜ್ಜನ ಶೆಟ್ಟಿ, ಜಂಟಿ ನಿರ್ದೇಶಕ ಶಿವಾನಂದ.ಬಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಬ್ಬಾರ್ ವಿವಿಧ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರು ಇನ್ನಿತರರು ಭಾಗವಹಿಸಿದ್ದರು.