ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ಪೋಸ್ಟ್ಗೆ ಚಿಂತನೆ: ಜಗದೀಶ್
ಉಡುಪಿ ಜಿಲ್ಲೆಯಲ್ಲಿ ಥರ್ಮಲ್ ಗನ್ ಕೊರತೆ
Team Udayavani, Mar 23, 2020, 6:35 AM IST
ಉಡುಪಿ: ಥರ್ಮಲ್ ಗನ್ ಕೊರತೆಯಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಿಂದ ಉಡುಪಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಚೆಕ್ಪೋಸ್ಟ್ ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಬರೆದಿದ್ದು, ಉಪಕರಣ ಪೂರೈಕೆಯಾದ ತತ್ಕ್ಷಣ ಚೆಕ್ಪೋಸ್ಟ್ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬೈಂದೂರಿನ ಶಿರೂರು ಮತ್ತು ಹೆಜಮಾಡಿಯಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು ಥರ್ಮಲ್ ಗನ್ ಮೂಲಕ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಮಲ್ಪೆ ಬಂದರಿನಲ್ಲಿ ಸಹ ಥರ್ಮಲ್ ಗನ್ ಬಳಸಿಕೊಂಡು ಕಾರ್ಮಿಕ ಹಾಗೂ ಮೀನುಗಾರರ ದೇಹದ ಉಷ್ಣಾಂಶವನ್ನು ಪತ್ತೆ ಮಾಡಲಾಗುತ್ತಿದೆ ಎಂದರು.
ಕೋವಿಡ್ 19 ವೈರಸ್ ಶಂಕಿತ ವ್ಯಕ್ತಿಯ ಗಂಟಲ ದ್ರವ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಆದರೆ ಶಿವಮೊಗ್ಗಕ್ಕೆ ಆರು ಜಿಲ್ಲೆಗಳಿಂದ ಮಾದರಿಗಳು ಪರೀಕ್ಷೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ವರದಿಗಳು ತಡವಾಗಿ ಕೈ ಸೇರುತ್ತಿದೆ. ಈ ಬಗ್ಗೆ ಶಿವಮೊಗ್ಗ ಡಿಸಿ ಜತೆ ಮಾತನಾಡಿದ್ದು, ತುರ್ತು ಹಾಗೂ ಹೆಚ್ಚಿನ ಅನುಮಾನವಿರುವ ವ್ಯಕ್ತಿ ಮಾದರಿಯನ್ನು ಸೂಚಿಸಿ, ಬೇಗ ಪರೀಕ್ಷೆ ಮಾಡಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಹಾಸನಕ್ಕೆ ಮಾದರಿ ಪರೀಕ್ಷೆ
ಇನ್ನು ಮುಂದೆ ಹಾಸನಕ್ಕೆ ಕಳುಹಿಸಲಾಗುವುದು. ಮಣಿಪಾಲ ಕಸ್ತೂìಬಾ ಆಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ಪರೀಕ್ಷೆಗೆ ಬೇಕಾದ ಎಲ್ಲಾ ಸಲಕರಣೆಗಳಿವೆ, ಕೇಂದ್ರ ಸರಕಾರ ಅನುಮತಿ ಬೇಕಿದೆ. ಈ ಬಗ್ಗೆ ರಾಜ್ಯದ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿದ್ದು, ಅನುಮತಿ ಸಿಕ್ಕ ಕೂಡಲೇ ಮಣಿಪಾಲದಲ್ಲಿ ತಪಾಸಣಾ ಕೇಂದ್ರ ತೆರೆಯಲಾಗುತ್ತದೆ ಎಂದರು.
ವಿದೇಶದಿಂದ ಬಂದವರ ಮಾಹಿತಿ
ಕುಂದಾಪುರ, ಕಾರ್ಕಳ ಭಾಗದಲ್ಲಿ ವಿದೇಶದಿಂದ ಬಂದಿರುವವರು ಮನೆಯಿಂದ ಹೊರಗಡೆ ತಿರುಗಾಡುತ್ತಿರುವ ಬಗ್ಗೆ ಫೋನ್ ಕರೆಗಳು ಬಂದಿವೆ. ಪಿಡಿಒ ಮತ್ತು ಗ್ರಾಮ ಲೆಕ್ಕಿಗರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ತಹಶೀಲ್ದಾರರು, ತಾ.ಪಂ. ಇಒ ಅವರಿಗೆ ತಾಲೂಕು ಮಟ್ಟದಲ್ಲಿ ಕಟ್ಟುನಿಟ್ಟಿನಲ್ಲಿ ಕಾನೂನು ಪಾಲಿಸುವಂತೆ ಆದೇಶ ನೀಡಲಾಗಿದೆ ಎಂದರು.
ಸಿಬಂದಿಗಳ ಕೆಲಸ ಶ್ಲಾಘನೀಯ
ಆರೋಗ್ಯ ಸಿಬಂದಿ ರಜೆಯನ್ನೂ ಕೇಳದೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ ಯರು ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.