ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ
Team Udayavani, Apr 9, 2020, 8:37 PM IST
ಬೆಂಗಳೂರು: ಕೋವಿಡ್ ಸಂಬಂಧಿತ ಲಾಕ್ ಡೌನ್ ವಿಶೇಷ ಕರ್ತವ್ಯದಲ್ಲಿದ್ದ ತಮಿಳುನಾಡು ಪೊಲೀಸರು ತಮ್ಮ ರಾಜ್ಯದ ವ್ಯಾಪ್ತಿ ಪ್ರದೇಶವನ್ನು ಮೀರಿ ಕರ್ನಾಟಕದ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವಿಚಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ನಗರ ರೌಂಡ್ಸ್ ಸಂದರ್ಭದಲ್ಲಿ ಬಯಲಾಗಿದೆ.
ತಮಿಳುನಾಡು ಕರ್ನಾಟಕ ರಾಜ್ಯಗಳ ಗಡಿ ಪ್ರದೇಶವಾಗಿರುವ ಅತ್ತಿಬೆಲೆಯಲ್ಲಿ ತಮಿಳುನಾಡು ಪೊಲೀಸರು ಮಫ್ತಿಯಲ್ಲಿ ವಾಹನಗಳ ತಪಾಸಣೆ ನಡೆಸ್ತಾ ಇದ್ರು. ಅತ್ತಿಬೆಲೆ ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗೆ ಬರುವುದರಿಂದ ತಮಿಳಿನಾಡು ಪೊಲೀಸರು ನಿಯಮ ಉಲ್ಲಂಘಿಸಿ ಈ ತಪಾಸಣೆಯನ್ನು ನಡೆಸುತ್ತಿದ್ದರು.
ತಮಿಳುನಾಡು ಪೊಲೀಸರ ಈ ಕ್ರಮವನ್ನು ಕಂಡರೂ ಇಲ್ಲಿನ ಅಧಿಕಾರಿಗಳು ಸುಮ್ಮನಿದ್ದರು. ಇದೇ ಸಮಯದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಿಟಿ ರೌಂಡ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವಿಚಾರ ಬಹಿರಂಗಗೊಂಡಿದೆ.
ಈ ವಿಚಾರ ಗೃಹಸಚಿವರ ಗಮನಕ್ಕೆ ಬರುತ್ತಿದ್ದಂತೆ ಕರ್ನಾಟಕದ ನೆಲದಿಂದ ತಮಿಳುನಾಡು ಪೊಲೀಸರನ್ನು ಗೃಹಸಚಿವರು ರಾಜ್ಯದ ಗಡಿಯಿಂದ ಹೊರಗೆ ಕಳುಹಿಸದ ಘಟನೆ ನಡೆದಿದೆ. ಹೀಗೆ ಕರ್ನಾಟಕದ ಗೃಹಸಚಿವರು ರಾಂಗ್ ಆಗ್ತಾ ಇದ್ದ ಹಾಗೆ ತಮಿಳುನಾಡು ಪೊಲೀಸರು ಸೈಲೆಂಟಾಗಿ ಜಾಗ ಖಾಲಿ ಮಾಡಿದ್ದಾರೆ.