ಲಾಕ್ಡೌನ್ನಿಂದ ಜನರಿಗೆ ಸಮಸ್ಯೆ : ಉದ್ಧವ್ ಠಾಕ್ರೆ ಕ್ಷಮೆಯಾಚನೆ
Team Udayavani, Apr 10, 2020, 6:57 PM IST
ಮುಂಬಯಿ, ಎ. 9: ಲಾಕ್ಡೌನ್ ನಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆ ಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಬುಧವಾರ ಕ್ಷಮೆ ಯಾಚಿಸಿದರು. ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನ ಗಳಿಸಿದರೂ ಮುಂದಿನ ದಿನಗಳಲ್ಲಿ ಪರೀಸ್ಥಿತಿ ಹತೊಟಿಗೆ ಬರಲಿದೆ ಎಂದು ಅವರು ಹೇಳಿದರು.
ಮಂಗಳವಾರಕ್ಕೆ ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದ್ದು. ಇದರಲ್ಲಿ 150 ಹೊಸ ಪ್ರಕರಣಗಳು ವರದಿಯಾಗಿದ್ದು, ಮುಂಬಯಿಯಲ್ಲಿ ಮಾತ್ರ 116 ಪ್ರಕರಣಗಳು ಸೇರಿವೆ. ಮಹಾರಾಷ್ಟ್ರದಲ್ಲಿ ಬುಧವಾರ ಬೆಳಗ್ಗೆ 60 ಹೊಸ ಕೋವಿಡ್ 19 ಪ್ರಕರಣ ದಾಖಲಾಗಿದ್ದು, ಸದ್ಯ ಒಟ್ಟು ಸೋಂಕಿತರ ಸಂಖ್ಯೆ 1,078ಕ್ಕೆ ಏರಿಕೆಯಾಗಿದೆ. 60 ಹೊಸ ಪ್ರಕರಣಗಳಲ್ಲಿ 44 ಮುಂಬಯಿ, ಪುಣೆಯಲ್ಲಿ ಒಂಭತ್ತು, ನಾಗಪುರದಲ್ಲಿ ನಾಲ್ಕು ಮತ್ತು ಅಹ್ಮದ್ನಗರ, ಅಕೋಲಾ ಮತ್ತು ಬುಲ್ದಾನಾದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ಲಾಕ್ಡೌನ್ ಕುರಿತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಜ್ಯದ ನಾಗರಿಕರಿಗೆ ಧನ್ಯವಾದ ಅರ್ಪಿಸಿದರು. ರಾಜ್ಯದ ಈ ನಡೆಯಿಂದ ಉಂಟಾದ ಅನಾನುಕೂಲತೆಗೆ ಜನರಲ್ಲಿ ಕ್ಷಮೆಯಾಚಿಸಿದರು. ಜನರು ಮನೆಯಲ್ಲಿಯೇ ಇರುವಾಗ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಕೋವಿಡ್ 19 ವನ್ನು ಸೋಲಿಸಲು ಲಾಕ್ ಡೌನ್ ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ ಎಂದು ಉದ್ಧವ್ ಠಾಕ್ರೆ ಫೇಸ್ಬುಕ್ನಲ್ಲಿ ಜನರನ್ನು ಉದ್ದೇಶಿಸಿ ಹೇಳಿದರು.
ಸದ್ಯ ನಮ್ಮ ಬಳಿ ಜನರು ಮನೆಯಲ್ಲೇ ಇರಿ ಮತ್ತು ಸುರಕ್ಷಿತವಾಗಿರಲು ಹೇಳುವುದನ್ನು ಬಿಟ್ಟು ಬೇರೆ ಉಪಾಯವಿಲ್ಲ ಎಂದ ಮುಖ್ಯಮಂತ್ರಿಗಳು ಹೇಳಿದರು. ಜನತೆ ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್ ಗಳನ್ನು ಬಳಸಬೇಕೆಂದು ಹೇಳಿದರು. ವುಹಾನ್ ನಗರ ಸದ್ಯ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ ಮತ್ತು ಅಲ್ಲಿ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ ಎಂಬ ಸುದ್ದಿಯನ್ನು ನಾನು ತಿಳಿದಿದ್ದೇನೆ. ಇದರಿಂದ ನಾವೂ ಕುಡ ಶೀಘ್ರವಾಗಿ ಚೇತರಿಸಕೊಳ್ಳಲು ಜನರ ಸಹಕಾರ ಅಗತ್ಯ ಎಂದು ಉದ್ಧವ್ ಠಾಕ್ರೆ ಹೇಳಿದರು.