ತಮಿಳು ಚಾನೆಲ್ನ 25 ಸಿಬಂದಿಗೆ ಕೋವಿಡ್ ಸೋಂಕು
Team Udayavani, Apr 22, 2020, 12:30 PM IST
ಚೆನ್ನೈ:ತಮಿಳು ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 25 ಮಂದಿ ಸಿಬಂದಿಗೆ ಕೋವಿಡ್ ವೈರಸ್ ದೃಢಪಟ್ಟಿರುವ ಆಘಾತಕಾರಿ ಮಾಹಿತಿ ಮಂಗಳವಾರ ಹೊರಬಿದ್ದಿದೆ.
ಮುಂಬಯಿನಲ್ಲಿ 53 ಪತ್ರಕರ್ತರು ಕೋವಿಡ್ ನಿಂದ ಬಳಲುತಿದ್ದರೆಂಬ ಸುದ್ದಿಯ ಬೆನ್ನಲ್ಲೇ ಈ ವಿಚಾರ ಬಹಿರಂಗಗೊಂಡಿದೆ. ತಮಿಳು ಸುದ್ದಿವಾಹಿನಿಯೊಂದರ 90ಕ್ಕೂ ಹೆಚ್ಚು ಮಂದಿಯ ರಕ್ತ ಹಾಗೂ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪರೀಕ್ಷೆಯ ವರದಿಯಲ್ಲಿ ಕನಿಷ್ಠ 25 ಮಂದಿಯ ವರದಿಯ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತ್ರಕರ್ತರಿಗೆ ಕೋವಿಡ್ ಸೋಂಕಿನ ಲಕ್ಷಣವಿಲ್ಲದೇ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರವು ಮುಂಬಯಿಯ ಎಲ್ಲ ಪತ್ರಕರ್ತರನ್ನೂ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸುವುದಾಗಿ ಘೋಷಿಸಿದೆ. ಇಂಥದ್ದೇ ನಿರ್ಧಾರವನ್ನು ದಿಲ್ಲಿ ಸಿಎಂ ಕೇಜ್ರಿವಾಲ್ ಅವರೂ ಕೈಗೊಂಡಿದ್ದಾರೆ.