ಲಾಕ್ಡೌನ್ ವೇಳೆ ಉಕ್ಕಿ ಹರಿದ ಬಾಗಳಕೆರೆ
"ನಮ್ಮ ಊರು-ನಮ್ಮ ಕೆರೆ' ಕಾರ್ಯಕ್ರಮ: 4 ಲಕ್ಷ ರೂ. ಮೊತ್ತ ಮಂಜೂರು
Team Udayavani, May 22, 2020, 5:57 AM IST
ಕುಂದಾಪುರ: ಲಾಕ್ಡೌನ್ ಎಂದು ಕೈಕಟ್ಟಿ, ತಲೆಗೆ ಕೈ ಹೊತ್ತು ಕೂರುವವರ ಮಧ್ಯೆಯೇ ಹೀಗೊಂದು ಸಕಾರಾತ್ಮಕ ಪ್ರಯೋಗ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ವತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾವ್ರಾಡಿ ಗ್ರಾಮದ ಊರ ಕೆರೆಯಾದ ಬಾಗಳಕೆರೆ ಹೂಳೆತ್ತಲು “ನಮ್ಮ ಊರು- ನಮ್ಮ ಕೆರೆ’ ಕಾರ್ಯ ಕ್ರಮದಡಿ ಯಲ್ಲಿ 4 ಲಕ್ಷ ರೂ. ಮೊತ್ತ ಮಂಜೂರು ಮಾಡಿದ್ದು, ಲಾಕ್ಡೌನ್ ದಿನಗಳಲ್ಲೇ ಕೆರೆಯ ಹೂಳೆತ್ತಲಾಯಿತು.
ಸ್ಥಳೀಯ ಕಾವ್ರಾಡಿ ಗ್ರಾಮ ಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿಯವರ ಸಹಕಾರದೊಂದಿಗೆ 86 ಸೆಂಟ್ಸ್ ಕೆರೆಯ ಅಭಿವೃದ್ಧಿ ಮಾಡಲಾಗಿದೆ. ಇಷ್ಟು ದೊಡ್ಡ ಕರೆಯ ಹೂಳೆತ್ತಿದಾಗ ಸಿಕ್ಕಿದ್ದು ಬರೋಬ್ಬರಿ 1,050 ಲೋಡು ಮಣ್ಣು. ಇದನ್ನು ಸಾಗಿಸುವುದೇ ದೊಡ್ಡ ತಲೆನೋವಾಗಿತ್ತು. ಪ್ರತಿದಿನ ಇಂದಿನ ಮಣ್ಣು ಎಲ್ಲಿ ಸಾಗಿಸುವುದು ಎಂದು ಸಮಿತಿಯವರು ಚಿಂತಿಸಿ ವಿಲೇವಾರಿ ಮಾಡುತ್ತಿದ್ದರು.
ನಮ್ಮೂರು ನಮ್ಮ ಕೆರೆಯ ಕಾರ್ಯಕ್ರಮದ ಮುಖಾಂತರ ಇಡೀ ರಾಜ್ಯಾದ್ಯಂತ ಕೆರೆ ಹೊಳೆತ್ತುತ್ತಿದ್ದು ಜನ, ಜಾನುವಾರು, ಪ್ರಾಣಿ,ಪಕ್ಷಿ, ಕೃಷಿ ಅಭಿವೃದ್ಧಿ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ನೆಲೆಯಲ್ಲಿ ಮಾಡಲಾಗಿದೆ. ಗ್ರಾಮಸ್ಥರು ಇದರ ಉಪಯೋಗ ಮಾಡಿಕೊಳ್ಳುವಂತೆ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಾರೆ ಯೋಜನಾಧಿಕಾರಿ ಮುರಳೀಧರ ಕೆ. ಶೆಟ್ಟಿ.ಸಮಿತಿಯ ದಿನಕರ ಆಚಾರ್ಯ ಅವರು ಹೇಳುವಂತೆ, 32 ವರ್ಷಗಳ ಹಿಂದೆ ಪಂಚಾಯತ್ ವತಿಯಿಂದ ಹೂಳೆತ್ತಲಾಗಿತ್ತು. ಅದಾದ ಬಳಿಕ ಈಗಲೇ ಕೆರೆಯ ಹೂಳೆತ್ತುವ ಕೆಲಸ ನಡೆದಿರುವುದು. ಆರಂಭದಲ್ಲಿ ಮೂರು ಲೋಡು ಕಸ ತೆಗೆಯಲಾಗಿದೆ.
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್. ನವೀನ್ ಚಂದ್ರ ಶೆಟ್ಟಿ, ಸುತ್ತಲಿನ ಸುಮಾರು 300 ಎಕರೆ ಕೃಷಿಭೂಮಿಗೆ, ನೂರಾರು ಬಾವಿಗಳಿಗೆ, 45ಕ್ಕಿಂತ ಹೆಚ್ಚಿನ ಮನೆಗಳಿಗೆ ಈ ಕೆರೆಯ ಹೂಳೆತ್ತಿದ ಫಲ ದೊರಕಲಿದೆ ಎನ್ನುತ್ತಾರೆ.
ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್, ಆರೇಳು ಅಡಿ ಆಳ ಮಾಡಲಾಗಿದ್ದು ಹತ್ತನ್ನೆರಡು ದಿನಗಳಲ್ಲಿ ಅಗಾಧ ಪ್ರಮಾಣದ ಪ್ರಗತಿಯಾಗಿದೆ. ಮೊದಲು ಇದ್ದ ನೀರನ್ನು ಪಂಪ್ ಮಾಡಿ ಹೊರಹಾಕಿ ಮಣ್ಣು, ಹೂಳು ತೆಗೆದು ಆಳ, ಅಗಲ ಮಾಡಲಾಗಿದೆ ಎಂದು ಮಾಹಿತಿ ನೀಡುತ್ತಾರೆ.
ಲಾಕ್ಡೌನ್ ದಿನಗಳಲ್ಲಿ ಇಲ್ಲಿ ಕೆರೆಯ ಹೂಳೆತ್ತುವ ಮೂಲಕ ಕೆರೆಯಲ್ಲಿ ನೀರು ಸಂಗ್ರಹವಾಗತೊಡಗಿದೆ. ಅಭಿವೃದ್ಧಿಗೊಳಿಸಿದ ಈ ಕೆರೆಯನ್ನು ಪಂಚಾಯತ್ಗೆ ಬಿಟ್ಟುಕೊಡಲಾಗುತ್ತದೆ. ಇದಕ್ಕೆ ಅವಶ್ಯವಿದ್ದರೆ ತಡೆಗೋಡೆ, ಕಾಲುವೆ ಇತ್ಯಾದಿಗಳನ್ನು ಪಂಚಾಯತ್ ಪ್ರತ್ಯೇಕ ಯೋಜನೆ ಮೂಲಕ ಮಾಡಲಿದೆ. ಮಣ್ಣು ಸಾಗಾಟದ ವೆಚ್ಚವನ್ನು ಮಣ್ಣು ಹಾಕಿಸಿಕೊಂಡವರು ಮಾಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಧನ ನೀಡಿದ್ದರೂ ಲಕ್ಷಾಂತರ ರೂ.ಗಳ ಕೆಲಸವಾಗಿದೆ.
ಮೂರು ಕಡೆ
ಕೆರೆ ಸಂಜೀವಿನಿ ಯೋಜನೆಯಲ್ಲಿ ಸರಕಾರದ ಸಹಯೋಗದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ನಡೆಯುತ್ತದೆ. ಅದು ಭಾರೀ ವಿಸ್ತಾರದ ಕೆರೆಗಳಾದರೆ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಸ್ಥಳೀಯ ಸಮಿತಿ ರಚಿಸಿ ಸಣ್ಣ ಸಣ್ಣ ಕೆರೆಗಳ ಹೂಳೆತ್ತುವ ಕಾರ್ಯ ನಡೆಯುತ್ತದೆ. 4 ಲಕ್ಷ ರೂ.ಗಳನ್ನು ಯೋಜನೆ ಮೂಲಕ ನೀಡಲಾಗುತ್ತದೆ. ಕಳೆದ ವರ್ಷ 2 ಕೆರೆಗಳನ್ನು ಹೀಗೆ ಅಭಿವೃದ್ಧಿ ಮಾಡಿದ್ದು ಈ ವರ್ಷ ಮೂಡಬಿದಿರೆ, ಬ್ರಹ್ಮಾವರ, ಕಂಡೂÉರು ಕೆರೆಗಳ ಅಭಿವೃದ್ಧಿ ಗುರಿ ಹಾಕಲಾಗಿತ್ತು. ಇದು ವರ್ಷದ ಮೊದಲ ಕೆರೆ.
-ಗಣೇಶ್, ಜಿಲ್ಲಾ ನಿರ್ದೇಶಕರು