ಶ್ರೀನಗರ: ಪೂಂಛ್ ನಲ್ಲಿ ದೇಗುಲ ಸ್ಫೋಟ ಸಂಚು ಬಯಲು; ಮೂವರ ಬಂಧನ
Team Udayavani, Dec 27, 2020, 9:43 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ನಲ್ಲಿ ಉಗ್ರರ ಜತೆಗೆ ನಿಕಟ ಸಂಪರ್ಕ ಇರುವ ಮೂವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಆರು ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಅಂಗ್ರಾಲ್ ಪಾಕಿಸ್ತಾನದಲ್ಲಿರುವ ಉಗ್ರರ ಹ್ಯಾಂಡ್ಲರ್ ಸೂಚನೆ ಮೇರೆಗೆ ಜಿಲ್ಲೆಯ ದೇವಸ್ಥಾನವೊಂದರ ಮೇಲೆ ದಾಳಿ ನಡೆಸಿ, ಆತಂಕದ ವಾತಾವರಣ ಸೃಷ್ಟಿಸಲು ಅವರು ಮುಂದಾಗಿದ್ದರು ಎಂದಿದ್ದಾರೆ.
ಗಲೌಟಾ ಗ್ರಾಮದಲ್ಲಿ ಇಬ್ಬರು ಸಹೋದರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಯಿತು ಎಂದು ಹೇಳಿದ್ದಾರೆ. ಮತ್ತೂಬ್ಬ ಪೊಲೀಸ್ ಅಧಿಕಾರಿ ಮತ್ತೂಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬಂಧಿತರಲ್ಲಿ ಒಬ್ಬನಾಗಿರುವ ಮುಸ್ತಫಾ ಎಂಬಾತನ ಮನೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ನ ತಂಡ ಶೋಧ ನಡೆಸಿದಾಗ ಆರು ಗ್ರೆನೇಡ್ಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೋಮೇಶ್ವರ ಬೀಚ್ ಸ್ವತ್ಛಗೊಳಿಸಿ ಪ್ರಧಾನಿಯ ಮನಸೆಳೆದ ದಂಪತಿಗೆ ಬಿಜೆಪಿ ಸಮ್ಮಾನ
ಡಿ.13ರಂದು ಪೂಂಛ್ ನಲ್ಲಿ ನಡೆದಿದ್ದ ಎನ್ಕೌಂಟರ್ ಮತ್ತು ಭಾನುವಾರ ಬಂಧಿತರಾಗಿರುವವರಿಗೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಂಗ್ರಾಲ್ ಹೇಳಿದ್ದಾರೆ.