ಸ್ತ್ರೀಗೆ ಸಮಾನ ಹಕ್ಕು ಸಾವಿತ್ರಿ ಫುಲೆ ಹೋರಾಟದ ಫಲ
Team Udayavani, Jan 4, 2021, 2:54 PM IST
ಹಾಸನ: ಶಿಕ್ಷಣ ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನ ಹಕ್ಕು ಪಡೆಯಲು ಮಾತೆ ಸಾವಿತ್ರಿಭಾಯಿ ಪುಲೆ ಕಾರಣ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಅಭಿಪ್ರಾಯಪಟ್ಟರು.
ನಗರದ ಸ್ವಾಭಿಮಾನ ಭವನದಲ್ಲಿ ನವ-ಭಾರತ ಸೇವಾ ಕನ್ನಡಿ ಚಾರಿಟಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರ ದಾತೆ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಇಂದು ಶಿಕ್ಷಣ ದೊರಕುತ್ತಿರುವುದು ಸಾವಿತ್ರಿಬಾಯಿಫುಲೆ ಅವರ ಹೋರಾಟದ ಫಲ ಎಂದು ಹೇಳಿದರು.1831 ಜನವರಿ 3ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರು ಸಮಾಜ ಸುಧಾರಣೆಗೆ ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬ ಪ್ರತಿಪಾದನೆಯೊಂದಿಗೆ ಹೋರಾಟ ಆರಂಭಿಸಿದರು. ಆಸಂದರ್ಭದಲ್ಲಿ ಎದುರಾದ ಪ್ರತಿರೋಧವನ್ನು ಲೆಕ್ಕಿಸದೆ ಹೋರಾಟ ಮಾಡಿದರು ಎಂದು ತಿಳಿಸಿದರು.
ಅವರು ಪಾಠಶಾಲೆಗೆ ಹೊರಟಾಗ ಅವರ ಮೇಲೆ ಕೆಸರು,ಸಗಣಿ ಎರಚಿ, ಕಲ್ಲು ತೂರುತ್ತಿದ್ದರು. ಇದರಿಂದ ಧೃತಿಗೆಡದಸಾವಿತ್ರಿಬಾಯಿ ಯಾವಾಗಲೂ ಒಂದು ಸೀರೆಯೊಂದನ್ನುತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ತಮ್ಮ ಮೇಲೆ ಎರಚುವಸಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ,ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿಇಟ್ಟುಕೊಂಡಿರುತ್ತಿದ್ದ ಮತ್ತೂಂದು ಸೀರೆಯನ್ನು ಉಟ್ಟುಕೊಂಡುಪಾಠಕ್ಕೆ ಅಣಿಯಾಗುತ್ತಿದ್ದರು ಎಂದು ಸಾವಿತ್ರಿಬಾಯಿ ಫುಲೆ ಅವರ ಹೋರಾಟವನ್ನು ನೆನಪಿಸಿದರು.
ಚಿರಋಣಿ ಆಗಿರಬೇಕು: ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಮನೆಯಿಂದಲೇ ವಿರೋಧ ವ್ಯಕ್ತವಾಗುತ್ತಿದ್ದ ವೇಳೆ, ಇಡೀಸಮಾಜದ ವಿರೋಧದ ನಡುವೆಯೂ ಅದರಲ್ಲೂ ಮೇಲ್ವರ್ಗದ ವಿರೋಧವನ್ನು ಸಹಿಸಿಕೊಂಡು ಮಹಿಳೆಯರಿಗೆ ಹಕ್ಕು ಸಿಗುವಂತಾಗಲು ಒಂದು ಅಸಾಧಾರಣ ಹೋರಾಟವನ್ನುಮಾಡಿರುವ ಸಾವಿತ್ರಿಬಾಯಿ ಫುಲೆ ಅವರಿಗೆ ಇಂದಿನಮಹಿಳೆಯರು ಚಿರಋಣಿಯಾಗಿರಬೇಕು ಎಂದು ಹೇಳಿದರು. ಮನೆಯಲ್ಲಿ ಮಕ್ಕಳು ಗಂಡಿರಲಿ, ಹೆಣ್ಣಿರಲಿ ಇಬ್ಬರಿಗೂ ಶಿಕ್ಷಣ ಕೊಡಬೇಕು. ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರೋತ್ಸಾಹ ಕೊಡುವ ಮೂಲಕ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎನ್ನುವ ಭೇದವನ್ನು ದೂರಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ನವ ಭಾರತ ಸೇವಾ ಕನ್ನಡಿಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಯು.ಎಂ. ಪ್ರಕಾಶ್ಕುಮಾರ್, ಜ.3 ಭಾರತದ ಮೊದಲ ಮಹಿಳಾ ಶಿಕ್ಷಕಿಯಜನ್ಮದಿನ. ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು, ಭಾರತದಲ್ಲಿ ಅಕ್ಷರ ಕ್ರಾಂತಿಆರಂಭಿಸಿದ ಮೊದಲ ಮಹಿಳೆ ಸಾತ್ರಿಬಾಯಿ ಫುಲೆ ಎಂದರು.
ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆಅಪಾರ. ದಾಸ್ಯ ವಿಮೋಚನೆಗೆ ಭಾರತದ ಸ್ವಾತಂತ್ರ ಸಂಗ್ರಾಮಕ್ಕೂ ಮೊದಲೇ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿ ಆರಂಭಿಸಿದ್ದರು. 1848ರಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೂದ್ರರು-ಅತಿ ಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು ಎಂದು ಹೇಳಿದರು.
ಸಾಹಿತಿ ರೂಪ ಹಾಸನ್, ಪ್ರಾಧ್ಯಾಪಕಿ ಪಿ.ಭಾರತಿದೇವಿ, ನವ ಭಾರತ ಸೇವಾ ಕನ್ನಡಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಕುಮಾರ್ಗೌರವ್ ಹೆತ್ತೂರ್, ಲೇಖಕಿ ಶಾಂತ ಅತ್ನಿ, ರಜಪೂತ ಸಂಸ್ಕಾರ ಸಮಿತಿ ಜಿಲ್ಲಾಧ್ಯಕ್ಷೆ ವೇದಾವತಿ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಚ್.ಎಂ.ಕಾವ್ಯಶ್ರೀ, ವೈದ್ಯಾಧಿಕಾರಿ ಡಾ.ಪುಷ್ಪಲತಾ, ಇಂಸಿಇ ಕಾಲೇಜು ಪ್ರಾಧ್ಯಾಪಕ ಡಾ.ಅತ್ನಿಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಜನಾರ್ದನ್, ದಲಿತಮುಖಂಡ ಎಚ್.ಕೆ.ಸಂದೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್, ಕ್ರಾಂತಿಸೇನೆ ಸಂಸ್ಥಾಪಕ ಡಾ.ಅಣ್ಣಾ ಪರಮೇಶ್, ಸೀರಾರಾಮು, ರಂಗಸ್ವಾಮಿ ಪಾಲ್ಗೊಂಡಿದ್ದರು.