ಮಳೆಬಿಲ್ಲು ಕರಗದೆ ಉಳಿದ ಬಣ್ಣ : ಹೊಸ ಅಂಕಣ
Team Udayavani, Jan 10, 2021, 1:04 AM IST
ಮಾತು ವ್ಯಕ್ತಿತ್ವದ ಕನ್ನಡಿ :
ಮಧುರವಾದ ಮಾತುಗಳಿಂದ ಮೆಣಸನ್ನು ಮಾರಬಹುದು, ಕಠಿನವಾದ ಮಾತುಗಳಿಂದ ಜೇನನ್ನು ಮಾರುವುದು ಕಷ್ಟ. ಮಧುರ ಮಾತುಗಳು ಬದುಕನ್ನು ಸುಂದರಗೊಳಿಸುತ್ತವೆ. ವಾಟ್ಸ್ಆ್ಯಪ್ನಿಂದ ಬಂದ ಈ ಸಂದೇಶ ಎಷ್ಟೊಂದು ಅರ್ಥಗರ್ಭಿತವಾಗಿದೆ. ಮಾತು ನಮ್ಮ ಜೀವನದ ಅತೀ ಮುಖ್ಯ ಅವಿಭಾಜ್ಯ ಅಂಗ. ಮಾತು ಸ್ನೇಹದ ದಾರವನ್ನೂ ಹೊಸೆಯಬಲ್ಲುದು, ದ್ವೇಷದ ದ್ವಾರವನ್ನೂ ತೆರೆಯಬಲ್ಲುದು. ಸಮರ ಸಾರುವುದಾಗಲಿ, ಶಾಂತಿ- ಸಂಧಾನವಾಗಲಿ ಎರಡನ್ನೂ ಸಾಧಿಸುವ ಸಾಮರ್ಥ್ಯ ಮಾತಿಗಿದೆ. ಒಳ್ಳೆಯ ಮಾತು ಪರನಿಂದನೆಯನ್ನು ತಪ್ಪಿಸುತ್ತದೆ. ಹಾಗೆಯೇ ಪರನಿಂದನೆಯು ಎಂದಿಗೂ ಒಳ್ಳೆಯ ಮಾತುಗಳಾಗುವುದಿಲ್ಲ.
ಭೂಮಿಯ ಮೇಲಿನ ಸಕಲ ಚರಾಚರ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರವೇ ಮಾತು ಒಲಿದಿರುವುದು. ಇಂತಹ ಮಾತಿನ ಶಕ್ತಿಯನ್ನು ನಾವು ದುರುಪಯೋಗಪಡಿಸಿಕೊಳ್ಳಬಾರದು. ನಮ್ಮ ಮಾತುಗಳು ಮತ್ತೂಬ್ಬರಿಗೆ ಸಂತೋಷವನ್ನು ನೀಡುವಂತಿರಬೇಕು. ಆದ್ದರಿಂದ ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ.
– ಪ್ರೀತಿ ಎಸ್. ಭಟ್, ಹರಿಖಂಡಿಗೆ
ಭಾವನೆಗಳಿಗೆ ಗೌರವ ಸಿಗಲಿ :
ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ ಎಂದರೆ ಪದೇ ಪದೆ ಹೇಳುವ ಆಸೆ ಕೂಡ ನನಗಿಲ್ಲ.. ಈ ಮೇಲಿನ ಸಾಲು ಭಾವನೆಗಳಿಗೆ ಸಂಬಂಧ ಪಟ್ಟದ್ದು. ಹೌದು, ನೀವು ಎಷ್ಟೇ ಪ್ರಯತ್ನಪಟ್ಟರು ಕೂಡ ಕೆಲವರಿಗೆ ನಿಮ್ಮ ಭಾವನೆಗಳು ಯಾವತ್ತು ಕೂಡ ಅರ್ಥವಾಗುವುದಿಲ್ಲ . ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನೆಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ, ಸಮಯ, ಕಣ್ಣೀರು, ಕಾಳಜಿಯನ್ನು ಮೀಸಲಿಡೋದು. ನಮ್ಮ ಭಾವನೆಗಳನ್ನು ಅವರಿಗೆ ಅರ್ಥೈಸುವ ಪ್ರಯತ್ನವನ್ನು ಒಂದು ಬಾರಿ ಅಥವಾ ಎರಡು ಬಾರಿ ಮಾಡಬಹುದು. ಪದೇ ಪದೆ ಹೇಳುತ್ತಿದ್ದರೆ ಹೇಳುವ ಮಾತಿಗೂ ಬೆಲೆ ಇಲ್ಲ. ಹೇಳುವ ವ್ಯಕ್ತಿಗೂ ಬೆಲೆ ಇಲ್ಲ.
– ನಾಗವೇಣಿ ರಮೇಶ್, ಉಡುಪಿ
ಸಮಯ ಕಾಯುವುದಿಲ್ಲ :
ಪಾತ್ರೆಗಳ ಕರ್ಕಶ ಶಬ್ದ ತಡರಾತ್ರಿವರೆಗೂ ಬರುತ್ತಿತ್ತು ಅಡಿಗೆ ಮನೆಯಿಂದ! ಅಮ್ಮಾ ಅಲ್ಲಿದ್ದಾಳೆ? ಮನೆಯ ಮೂವರು ಸೊಸೆಯರು ನಿದ್ರಿಸಲು ಹೋಗಿದ್ದಾರೆ, ಅಮ್ಮಾ ಇನ್ನೂ ಅಲ್ಲೇ ಇದ್ದಾಳೆ! ಅಮ್ಮನ ಕೆಲಸ ಇನ್ನೂ ಬಾಕಿಯಿದೆ… ಹಾಲು ಬಿಸಿ ಮಾಡಿ ತಣ್ಣಗಾಗಿಸಿ ಬೆಳಗ್ಗೆ ಮಗನಿಗೆ ಫ್ರೆಶ್ ಮಜ್ಜಿಗೆ ಮಾಡಿ ಕೊಡಬೇಕು, ಸಿಂಕ್ನಲ್ಲಿರುವ ಪಾತ್ರೆಗಳನ್ನೆಲ್ಲ ಶುಚಿಯಾಗಿಸಬೇಕು, ಪಾತ್ರೆಗಳ ಶಬ್ದದಿಂದ ಸೊಸೆ, ಪುತ್ರರ ನಿದ್ರೆ ಹಾಳಾಗುತ್ತಿದೆ..
ಹಿರಿಸೊಸೆ ಹಿರಿಮಗನಿಗೆ, ನಿನ್ನ ಅವ್ವನಿಗೆ ನಿದ್ರೆ ಬರಲ್ವ, ಅವಳು ಮಲಗಲ್ಲ, ನಮ್ಮನ್ನು ಮಲಗಲು ಬಿಡಲ್ಲ. ಎರಡನೇ ಸೊಸೆಯೂ ದೂರಿದಳು, ಕಿರಿಯಳೂ ಆಕ್ಷೇಪಿಸಿದಳು.
ಬಗ್ಗಿ ಹೋದ ಬೆನ್ನು, ಗಟ್ಟಿಯಾಗಿ ಮರಗಟ್ಟಿದ ಕೈಗಳು, ಮಂಡಿ ನೋವು, ದೃಷ್ಟಿಹೀನ ಕಣ್ಣುಗಳು, ನೆತ್ತಿಯಿಂದ ಉಕ್ಕುತ್ತಿರುವ ಬೆವರು, ವಯೋಸಹಜ ಕಾಲುಗಳ ನಡುಕ ಆದರೂ ಮಧ್ಯರಾತ್ರಿ ವರೆಗೂ ಕೆಲಸ. ಗಡಿಯಾರದ ಮುಳ್ಳುಗಳು ಸುಸ್ತಾಗಿವೆೆ. ಅಮ್ಮ ಮಾತ್ರ ಫ್ರಿಜ್ನಿಂದ ಬೀನ್ಸ್ ತೆಗೆದು ಕತ್ತರಿಸತೊಡಗಿದಳು. ಅವಳಿಗೆ ನಿದ್ರೆ ಬರಲ್ಲ… ರಾತ್ರಿ ಹನ್ನೆರಡು ಗಂಟೆಗೆ ಒಮ್ಮೆಲೇ ನೆನಪಾಯಿತು ಮಾತ್ರೆ ಇನ್ನೂ ತಗೊಂಡೆ ಇಲ್ಲ. ಬೆಡ್ನ ತಲೆದಿಂಬು ಕೆಳಗೆ ಮಡಗಿದ ಕೈಚೀಲ ತೆಗೆದಳು. ಚಂದಿರನ ಬೆಳದಿಂಗಳಿನಲ್ಲಿ ಮಾತ್ರೆಯ ಬಣ್ಣದ ಲೆಕ್ಕಾಚಾರದಿಂದ ಬಾಯಿಗೆ ಹಾಕಿ, ನೀರು ಕುಡಿದಳು. ಪಕ್ಕದ ಮಂಚದಲ್ಲಿ ಮಲಗಿದ ಅಪ್ಪ ಹೇಳಿದ ಬಂದೆಯಾ? ಬಂದೇ ಇವತ್ತು ಅಷ್ಟೇನು ಕೆಲಸ ಇರಲಿಲ್ಲ, ಅಮ್ಮನ ಸಹಜ ಉತ್ತರ. ಹಾಗೆ ಬಿದ್ದುಕೊಂಡಳು ನಾಳಿನ ಚಿಂತೆಯಲ್ಲಿ ಗೊತ್ತಿಲ್ಲ ನಿದ್ರೆ ಬರುತ್ತೋ ಏನೋ ಆದರೂ ನಾಳೆ ಅವಳಿಗೆ ಸುಸ್ತು ಎಂಬುದೇ ಇರಲ್ಲ. ಬೆಳಗಿನ ಅಲಾರಾಂ ಆಮೇಲೆ ಹೊಡೆಯುತ್ತದೆ ಅಮ್ಮನ ನಿದ್ರೆ ಮೊದಲೇ ಬಿಟ್ಟಿರುತ್ತದೆ… ಹೀಗೆ ಅಮ್ಮನ ಬಗ್ಗೆ ಬಂದಿದ್ದ ಸಂದೇಶ ಮನದಾಳಕ್ಕೆ ಇಳಿದು ನೋವುಂಟು ಮಾಡಿತ್ತು. ಒಮ್ಮೆಯಾದರೂ ಅವಳನ್ನು ಗಟ್ಟಿಯಾಗಿ ಬಿಗಿದಪ್ಪಿಕೊಳ್ಳಬೇಕು ಎಂದೆನಿಸಿತು. ಅದೇ ರಾತ್ರಿ ನನ್ನವ್ವ ತೀರಿಕೊಂಡರು.
– ವೇದಾವತಿ, ಕಿನ್ನಿಮೂಲ್ಕಿ
ಇದು ಹೊಸ ಅಂಕಣ. ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್ಆ್ಯಪ್, ನಮ್ಮ ಫೇಸ್ಬುಕ್ ವಾಲ್ಗಳಲ್ಲಿ ಹರಿದಾಡುತ್ತವೆ. ಕೆಲವು ನಮ್ಮ ಸ್ನೇಹಿತರು ನೋಡಿ ಕಳುಹಿಸಿದ್ದು, ಇನ್ನು ಹಲವು ನೋಡದೇ ಫಾರ್ವರ್ಡ್ ಮಾಡಿದ್ದು. ಅಂಥವುಗಳನ್ನು ಹೆಕ್ಕಿ ಕೊಡುವ ಪ್ರಯತ್ನ ಇದು. ನೀವೂ ನಿಮಗೆ ಖುಷಿಕೊಟ್ಟ ಮೆಸೇಜ್ಗಳ ಕುರಿತು ನಮ್ಮೊಂದಿಗೆ ಹಂಚಿಕೊಳ್ಳಿ.
76187 74529 ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಿ. (ಈ ಸಂಖ್ಯೆ ಸಂದೇಶಕ್ಕೆ ಮಾತ್ರ) ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.