ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ
Team Udayavani, Dec 1, 2021, 6:00 AM IST
ಜಗತ್ತಿನಲ್ಲಿ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಹಬ್ಬುತ್ತಿದ್ದಂತೆ, ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಚಿತ್ರವೆಂದರೆ ಒಮಿಕ್ರಾನ್ ಕುರಿತ ಆತಂಕಕ್ಕಿಂತ ಹೆಚ್ಚಾಗಿ ವದಂತಿಗಳು ಅಥವಾ ಸುಳ್ಳು ಸುದ್ದಿಗಳಿಂದಾಗಿಯೇ ಜನ ಹೆಚ್ಚು ಭಯಭೀತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಸೋಮವಾರ ದಿಢೀರನೇ ಉದ್ಭವವಾದ ಲಾಕ್ಡೌನ್ ಸುದ್ದಿ.
ವಿಚಿತ್ರವೆಂದರೆ, ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಅಧಿಕೃತವಾಗಿ ಲಾಕ್ಡೌನ್ ಹೇರಿಕೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ. ಅಲ್ಲದೇ ಇನ್ನೂ ಒಮಿಕ್ರಾನ್ ಭಾರತದಲ್ಲಿ ಹೇಗೆ ವರ್ತಿಸಲಿದೆ ಎಂಬ ಬಗ್ಗೆ ಸಂಶೋಧನೆಯೂ ಆಗಬೇಕಿದೆ. ಅಷ್ಟೇ ಅಲ್ಲ, ಇದುವರೆಗೆ ದೇಶದಲ್ಲಿ ಒಂದೇ ಒಂದು ಒಮಿಕ್ರಾನ್ ಪ್ರಕರಣವೂ ದಾಖಲಾಗಿಲ್ಲ. ಇಂಥ ಸಂದರ್ಭದಲ್ಲಿ ಲಾಕ್ಡೌನ್ ಹೇರುತ್ತಾರಂತೆ, ಶಾಲಾ-ಕಾಲೇಜು ಮುಚ್ಚುತ್ತಾರಂತೆ ಎಂಬ ವದಂತಿಗಳು ಜನರಲ್ಲಿ ಗೊಂದಲ ಉಂಟು ಮಾಡುವುದು ಸಹಜ.
ಅಷ್ಟೇ ಅಲ್ಲ, ಮಂಗಳವಾರ ರಾಜ್ಯ ಸರಕಾರದ ಸಚಿವರೊಬ್ಬರು ಅವಶ್ಯಬಿದ್ದರೆ ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆ ಬಗ್ಗೆ ಚಿಂತನೆ ನಡೆಸಬಹುದು ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ಮೂಲಕ ಜನರಲ್ಲಿ ಈಗಾಗಲೇ ಉಂಟಾಗಿರುವ ಗೊಂದಲಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.
ಕೊರೊನಾ ಸಾಂಕ್ರಾಮಿಕ ವೇಳೆಯಲ್ಲಿ, ತಮಗೆ ಸೋಂಕು ಬಾರದಿರಲಿ ಎಂಬ ಕಾರಣಕ್ಕಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಅನುಸರಿಸುವ ಮಂದಿ, ಸುಳ್ಳು ಸುದ್ದಿ ಹಬ್ಬಿಸುವಾಗ ತಮಗಿರುವ ದೊಡ್ಡದೊಂದು ಸಾಮಾಜಿಕ ಜವಾಬ್ದಾರಿಯನ್ನೇ ಮರೆತುಬಿಡುತ್ತಾರೆ.
ಇದನ್ನೂ ಓದಿ:ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ
ಕಳೆದ ಎರಡು ವರ್ಷಗಳಲ್ಲಿ ಜನರಲ್ಲಿ ಕೊರೊನಾ ಉಂಟು ಮಾಡಿರುವ ಆತಂಕಕ್ಕಿಂತ, ಲಾಕ್ಡೌನ್ನಿಂದ ಆಗಿರುವ ಸಮಸ್ಯೆಗಳೇ ಜನರನ್ನು ಇನ್ನೂ ಬಾಧಿಸುತ್ತಿವೆ. ಎಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಆಹಾರವೂ ಸಿಗದೇ ಪರಿತಪಿಸಿದ್ದಾರೆ, ಸಂಸಾರದ ತೇರು ಎಳೆಯುವಲ್ಲಿ ಏದುಸಿರುಬಿಟ್ಟಿದ್ದಾರೆ. ಹೀಗಾಗಿ ಈಗ ಲಾಕ್ಡೌನ್ ಬಗ್ಗೆ ಅಥವಾ ಒಮಿಕ್ರಾನ್ ಕುರಿತಂತೆ ತಮಗೆ ಗೊತ್ತಿಲ್ಲದ ವಿವರಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು. ಇಂಥ ವದಂತಿಗಳು ವಾಣಿಜ್ಯ ವ್ಯವಹಾರ ಸೇರಿದಂತೆ ಸಮಾಜದ ಎಲ್ಲ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕೇವಲ ಜನರಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳು, ಸುದ್ದಿ ಮಾಧ್ಯಮಗಳು, ರಾಜ್ಯ ಸರಕಾರದಲ್ಲಿರುವ ಪ್ರತಿನಿಧಿಗಳೂ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಇಂಥ ವಿಚಾರದಲ್ಲಿ ರಾಜ್ಯ ಸರಕಾರದ ಕಡೆಯಿಂದ ಒಬ್ಬರು ಅಥವಾ ಇಬ್ಬರು ಜನರಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡುವಂಥ ಕ್ರಮವಾಗಬೇಕು. ಅಂದರೆ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ಮಾತ್ರ ಕೊರೊನಾ ಕುರಿತ ಅಪ್ಡೇಟ್ಗಳನ್ನು ನೀಡಬೇಕು. ಸಿಕ್ಕಸಿಕ್ಕವರು ಒಂದೊಂದು ಹೇಳಿಕೆ ನೀಡುತ್ತಾ ಹೋದರೆ ಜನರಲ್ಲಿ ಇನ್ನಷ್ಟು ಭಯ ಉಂಟಾಗುತ್ತದೆಯೇ ಹೊರತು, ಬೇರೇನೂ ಆಗುವುದಿಲ್ಲ. ಇದು ಅಧಿಕಾರಿಗಳ ಮಟ್ಟದಲ್ಲೂ ಆಗಬೇಕು. ಅಲ್ಲದೆ ತಾಂತ್ರಿಕ ಸಮಿತಿ ನೀಡಿರುವ ಶಿಫಾರಸಿನ ಆಧಾರದಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಮುಲಾಜಿಲ್ಲದೇ ಕಠಿನ ಕ್ರಮ ತೆಗೆದುಕೊಳ್ಳಬೇಕು. ಇಂಥ ಕ್ರಮ ತೆಗೆದುಕೊಂಡರೆ ಒಂದೊಮ್ಮೆ ಭಾರತದಲ್ಲಿ ಒಮಿಕ್ರಾನ್ ಕಾಣಿಸಿಕೊಂಡರೂ ಧೈರ್ಯದಿಂದ ಎದುರಿಸಲು ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…