ಖಾಸಗೀಕರಣದತ್ತ ಏರ್ ಇಂಡಿಯಾ ಮಹಾರಾಜನ ವಿದಾಯ ಸನ್ನಿಹಿತ
Team Udayavani, Jul 1, 2017, 3:45 AM IST
ಏರ್ ಇಂಡಿಯಾ ಅಥವಾ ಈ ಮಾದರಿಯ ಸರಕಾರಿ ಕಂಪೆನಿಗಳ ದೊಡ್ಡ ಸಮಸ್ಯೆಯೇ ಅವುಗಳ ಸಿಬ್ಬಂದಿ. ತಮ್ಮ ಸಂಸ್ಥೆ ಕಷ್ಟದಲ್ಲಿದ್ದರೂ ಅವರಿಗೆ ಎಲ್ಲಾ ಸೌಲಭ್ಯ ಬೇಕು.
ಸಾಲದ ಸುಳಿಗೆ ಸಿಲುಕಿ ಬಳಲಿ ಬೆಂಡಾಗಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಖಾಸಗೀಕರಣಗೊಳ್ಳುವುದು ಬಹುತೇಕ ಖಚಿತ. ಏರ್ ಇಂಡಿಯಾ ಖಾಸಗೀಕರಣಗೊಳಿಸಲು ನೀತಿ ಆಯೋಗ ಮಂಡಿಸಿದ್ದ ಪ್ರಸ್ತಾವವನ್ನು ಸರಕಾರ ಹೆಚ್ಚು ವಿಳಂಬಿಸದೆ ಅನುಮೋದಿಸಿರುವುದು ಈ ನಿಟ್ಟಿನಲ್ಲಿ ಇಟ್ಟಿರುವ ಮೊದಲ ದೃಢ ಹೆಜ್ಜೆ. ಸರಕಾರದ ಕೈಯಲ್ಲಿರುವ ಬೃಹತ್ ಕಂಪೆನಿಗಳಲ್ಲಿ ಒಂದಾಗಿರುವ ಏರ್ ಇಂಡಿಯಾದ ಅವನತಿಯ ಕತೆ ಪ್ರಾರಂಭವಾಗಿ ದಶಕವಾಗುತ್ತಾ ಬಂತು. ಕಳೆದ ಏಳು ವರ್ಷಗಳಿಂದ ಈ ಸಂಸ್ಥೆ ಸತತ ನಷ್ಟ ಅನುಭವಿಸುತ್ತಿದೆ. ಸಂಸ್ಥೆಯನ್ನು ಮೇಲೆತ್ತಲು ಮಾಡಿರುವ ಎಲ್ಲ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಖಾಸಗೀಕರಣವೇ ಪರಿಹಾರ ಎಂಬ ಸ್ಥಿತಿಗೆ ಬಂದು ತಲುಪಿದೆ. 1932ರಲ್ಲಿ ಜೆಆರ್ಡಿ ಟಾಟಾ ಸ್ಥಾಪಿಸಿದ್ದ ಟಾಟಾ ಏರ್ಲೈನ್ಸ್ ಅನ್ನು ಬಳಿಕ ರಾಷ್ಟ್ರೀಕರಣಗೊಳಿಸಲಾಗಿತ್ತು. ಅನಂತರ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ ಎಂಬ ಕಂಪೆನಿಗಳು ಅಸ್ತಿತ್ವಕ್ಕೆ ಬಂದಿದ್ದವು. ಬಳಿಕ ಈ ಎರಡು ಕಂಪೆನಿಗಳು ವಿಲೀನಗೊಂಡವು. ಒಂದು ಕಾಲದಲ್ಲಿ ವಾಯುಯಾನ ಮಾರುಕಟ್ಟೆಯಲ್ಲಿ ಶೇ.40 ಹೊಂದಿದ್ದ ಏರ್ ಇಂಡಿಯಾದ ಪಾಲು ಈಗ ಜುಜುಬಿ ಶೇ.14ಕ್ಕೆ ಇಳಿದಿರುವುದೇ ಸಂಸ್ಥೆಯ ದಯನೀಯ ಸ್ಥಿತಿಯನ್ನು° ತಿಳಿಸುತ್ತಿದೆ.
ಪ್ರಸ್ತುತ ಏರ್ ಇಂಡಿಯಾದ ಮೇಲೆ 52,000 ಕೋ. ರೂ. ಸಾಲದ ಹೊರೆ ಇದೆ. ಅದು 2012ರಿಂದೀಚೆಗೆ 6,000 ಕೋ. ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ನಿರ್ವಹಣಾ ಲಾಭವನ್ನು ಕಂಡಿದ್ದರೂ ಸಂಸ್ಥೆಯ ಎದುರು ಇರುವ ಸಾಲದ ಹೊರೆಯ ಎದುರು ಇದು ಪುಡಿಗಾಸು ಮಾತ್ರ. ಏಳು ವರ್ಷದಲ್ಲಿ ಸಂಸ್ಥೆಯನ್ನು ಉಳಿಸುವ ಸಲುವಾಗಿ ಸರಕಾರ 25,000 ಕೋ.ರೂ.ನೆರವನ್ನು ನೀಡಿದೆ. ಶೇ.86ರಷ್ಟು ಆಧಿಪತ್ಯ ಸಾಧಿಸಿರುವ ಖಾಸಗಿ ಸಂಸ್ಥೆಗಳು ಲಾಭದಲ್ಲಿ ನಡೆಯುತ್ತಿರುವಾಗ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಮಾತ್ರ ತನ್ನ ಪುರಾತನ ಶೈಲಿಯ ಕಾರ್ಯವೈಖರಿಯಿಂದ ಬಿಳಿಯಾನೆಯಾಗಿದೆ. ಏರ್ ಇಂಡಿಯಾ ಅಥವಾ ಈ ಮಾದರಿಯ ಸರಕಾರಿ ಕಂಪೆನಿಗಳ ದೊಡ್ಡ ಸಮಸ್ಯೆಯೇ ಅವುಗಳ ಸಿಬ್ಬಂದಿ. ಸಂಸ್ಥೆ ಎಷ್ಟೇ ನಷ್ಟ ಅನುಭವಿಸುತ್ತಿರಲಿ, ಅದರಲ್ಲಿ ನೌಕರಿ ಮಾಡುತ್ತಿರುವ ಅಧಿಕಾರಿಗಳು ಮಾತ್ರ ಎಲ್ಲ ಸೌಲಭ್ಯಗಳನ್ನು ಅಪೇಕ್ಷಿಸುತ್ತಾರೆ. ಏರ್ ಇಂಡಿಯಾದ ವಿಚಾರಕ್ಕೆ ಬರುವುದಾದರೆ ಇಷ್ಟು ವರ್ಷಗಳಿಂದ ಸಂಸ್ಥೆ ಸಂಕಷ್ಟದಲ್ಲಿದ್ದರೂ ಸಿಬ್ಬಂದಿ ಉಚಿತವಾಗಿ ಸಿಗುವ ಪ್ರಯಾಣದ ಸೌಲಭ್ಯವನ್ನು ಬಿಟ್ಟುಕೊಟ್ಟಿಲ್ಲ. ಹೆಂಡತಿ, ಮಕ್ಕಳು ಎಂದು ಪರಿವಾರ ಸಮೇತ ಬಿಸಿನೆಸ್ ದರ್ಜೆಯಲ್ಲೇ ಉಚಿತವಾಗಿ ವಿದೇಶ ಪ್ರಯಾಣ ಮಾಡುತ್ತಾರೆ. ಇನ್ನು ರಾಜಕಾರಣಿಗಳಿಗೆ ಏರ್ ಇಂಡಿಯಾದಿಂದ ಸಿಗುತ್ತಿರುವ ಅನುಕೂಲಗಳು ಒಂದೆರಡಲ್ಲ. ತಡವಾಗಿ ಬಂದರೂ ಅವರಿಗಾಗಿ ಕಾಯಬೇಕು! ಹೀಗಾಗಿ ಜನರು ಬೇರೆಲ್ಲೂ ಸೀಟು ಸಿಗದಿದ್ದರೆ ಮಾತ್ರ ಏರ್ ಇಂಡಿಯಾ ಟಿಕೇಟ್ ಕಾದಿರಿಸುತ್ತಾರೆ. ಆದಾಗ್ಯೂ ಇಂಡಿಗೊ ಸೇರಿದಂತೆ ಹಲವು ವಿಮಾನ ಯಾನ ಕಂಪೆನಿಗಳು ಏರ್ ಇಂಡಿಯಾ ಖರೀದಿಸಲು ಉತ್ಸಾಹ ತೋರಿಸಿರುವುದು ಈ ಆತಂಕ ನಿವಾರಿಸಿದೆ. ಅದರಲ್ಲೂ ಟಾಟಾ ಕಂಪೆನಿಯೇ ಸಿಂಗಾಪುರ ಏರ್ಲೈನ್ಸ್ ಸಹಭಾಗಿತ್ವದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಆಸಕ್ತಿ ಹೊಂದಿರುವುದು ಕುತೂಹಲಕರವಾಗಿದೆ. ಟಾಟಾ ಸುಪರ್ದಿಗೆ ಏರ್ ಇಂಡಿಯಾ ಹೋದರೆ ಅರ್ಥ ವ್ಯವಸ್ಥೆಯ ಚಕ್ರ ಪೂರ್ತಿ ಒಂದು ಸುತ್ತು ಸುತ್ತಿದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ